ದಾವಣಗೆರೆ
ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಸಲ್ಲಿಸಿದ ಉಮೇದುವಾರಿಕೆಯನ್ನು ವಾಪಾಸ್ ಪಡೆಯಲು ಕೊನೆಯ ದಿನವಾಗಿದ್ದ ಸೋಮವಾರ ಪಕ್ಷೇತರ ಅಭ್ಯರ್ಥಿಯೊಬ್ಬರು ನಾಮಪತ್ರ ವಾಪಾಸ್ ಪಡೆದಿದ್ದು, ಕಣದಲ್ಲಿ ಅಂತಿಮವಾಗಿ 25 ಅಭ್ಯರ್ಥಿಗಳು ಉಳಿದಿದ್ದಾರೆ.
ಲೋಕಸಭಾ ಚುನಾವಣೆಗೆ ದಾವಣಗೆರೆ ಕ್ಷೇತ್ರದಿಂದ ಏ.4ರ ವರೆಗೆ 28 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಆದರೆ, ಏ.5ರಂದು ನಡೆದ ನಾಮಪತ್ರ ಪರಿಶೀಲನೆಯ ವೇಳೆಯಲ್ಲಿ ಅಗತ್ಯ ಸಂಖ್ಯೆಯ ಸೂಚಕರಿಲ್ಲದ ಕಾರಣದಿಂದ ಸಂಸದ ಜಿ.ಎಂ.ಸಿದ್ದೇಶ್ವರ್ ಅವರ ಪತ್ನಿ ಬಿಜೆಪಿಯಿಂದ ಸಲ್ಲಿಸಿದ ಹಾಗೂ ಸಂಪೂರ್ಣ ಭಾರತ ಕ್ರಾಂತಿ ಪಾರ್ಟಿಯಿಂದ ಸಲ್ಲಿಸಿದ್ದ ಕೆ.ವಿ.ಕೃಷ್ಣಮೂರ್ತಿಯವರ ನಾಮಪತ್ರಗಳು ತಿರಸ್ಕೃತಗೊಂಡು, 26 ಜನ ಅಭ್ಯರ್ಥಿಗಳ ನಾಮಪತ್ರಗಳು ಕ್ರಮ ಬದ್ಧವಾಗಿದ್ದವು. ಆದರೆ, ನಾಮಪತ್ರ ವಾಪಾಸ್ ಪಡೆಯಲು ಕೊನೆಯ ದಿನವಾದ ಸೋಮವಾರದಂದು ಪಕ್ಷೇತರ ಅಭ್ಯರ್ಥಿ ಸಂಕೇತ್.ಎಸ್ ಅವರು ತಮ್ಮ ಉಮೇದುವಾರಿಕೆ ವಾಪಾಸ್ ಪಡೆದುಕೊಂಡಿರುವ ಹಿನ್ನೆಲೆಯಲ್ಲಿ ದಾವಣಗೆರೆ ಕ್ಷೇತ್ರದ ಕಣದಲ್ಲಿ ಅಂತಿಮವಾಗಿ 25 ಅಭ್ಯರ್ಥಿಗಳು ಉಳಿದುಕೊಂಡಿದ್ದಾರೆ.
ಕಣದಲ್ಲಿರುವ ಅಭ್ಯರ್ಥಿಗಳು:
ಕಾಂಗ್ರೆಸ್ ಪಕ್ಷದಿಂದ ಹೆಚ್.ಬಿ ಮಂಜಪ್ಪ, ಬಹುಜನ ಸಮಾಜ ಪಾರ್ಟಿಯಿಂದ ಸಿದ್ದಪ್ಪ ಬಿ.ಎಚ್, ಭಾರತೀಯ ಜನತಾ ಪಾರ್ಟಿಯಿಂದ ಜಿ.ಎಂ. ಸಿದ್ದೇಶ್ವರ, ಇಂಡಿಯಾ ಪ್ರಜಾ ಬಂಧು ಪಾರ್ಟಿಯಿಂದ ಹೆಚ್. ಈಶ್ವರಪ್ಪ, ಉತ್ತಮ ಪ್ರಜಾಕೀಯ ಪಾರ್ಟಿಯಿಂದ ಗಣೇಶ ಬಿ.ಎ, ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯೂನಿಷ್ಟ್) ವತಿಯಿಂದ ಟಿ.ಜಿ. ಮಧು, ಇಂಡಿಯನ್ ಲೇಬರ್ ಪಾರ್ಟಿ (ಅಂಬೇಡ್ಕರ್ ಪುಲೆ) ರವೀಂದ್ರ ಎನ್ ಅವರುಗಳು ಕಣದಲ್ಲಿದ್ದರೆ, ಪಕ್ಷೇತರ ಅಭ್ಯರ್ಥಿಗಳಾಗಿ ಎಸ್.ಕೆ. ಅಫ್ಜಲ್ಖಾನ್, ಅಬ್ದುಲ್ ನಜೀರ್ ಸಾಬ್, ಅಲೀಂವುಲ್ಲಾ, ಆಲೂರು ಎಂ.ಜಿ ಸ್ವಾಮಿ, ವಿ. ಇಕ್ಬಾಲ್ ಅಹಮ್ಮದ್, ಬಿ.ವಿ.ತಿಪ್ಪೇಸ್ವಾಮಿ, ದಾದಾ ಖಲಂದರ್, ಬರ್ಕತ್ ಅಲಿ, ಮಹಮ್ಮದ್ ಹಯಾತ್, ಮಂಜುನಾಥ ಎ.ಕೆ, ಸಿ.ಎಂ. ಮಂಜುನಾಥ, ವಿ. ಮಂಜುನಾಥಾಚಾರ್, ವೀರಭದ್ರಪ್ಪ ಎಂ.ಬಿ, ಶಶಿಕುಮಾರ್ ಆರ್.ಎನ್, ಡಾ.ಶ್ರೀಧರ ಉಡುಪ, ಸುಭಾನ್ ಖಾನ್, ಸೈಯದ್ ಜಬೀವುಲ್ಲಾ ಕೆ ಹಾಗೂ ಹೆಚ್.ಆರ್. ಹರೀಶ್ ಚುನಾವಣಾ ಕಣದಲ್ಲಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








