ಬೆಂಗಳೂರು
ಹುಬ್ಬಳ್ಳಿ-ಧಾರವಾಡ,ಬೆಳಗಾವಿ ಹಾಗೂ ಮೈಸೂರು ನಗರಗಳ ಪೊಲೀಸ್ ಆಯುಕ್ತರ ವರ್ಗಾವಣೆಯನ್ನು ತಮ್ಮ ಜೊತೆ ಚರ್ಚೆ ನಡೆಸದೇ ಮುಖ್ಯಮಂತ್ರಿ ಕುಮಾರಸ್ವಾಮಿ ನಡೆಸಿದ್ದಾರೆ ಎಂದು ಗೃಹ ಸಚಿವ ಎಂಬಿ ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡುವಾಗ ಮುಖ್ಯಮಂತ್ರಿಗಳು ನಮ್ಮ ಜೊತೆ ಸೌಜನ್ಯಕ್ಕಾದರೂ ಮಾತನಾಡಿಲ್ಲ ಹೀಗಿರುವಾಗ ನಾನು ಗೃಹ ಸಚಿವನಾಗಿ ಇರುವುದು ಏಕೆ ಎಂದು ಆಪ್ತರ ಬಳಿ ತಮ್ಮ ಅಸಮಾಧಾನವನ್ನು ತೋಡಿಕೊಂಡಿದ್ದಾರೆ
ವರ್ಗಾವಣೆ ಮಾಡಿರುವುದು ನಮ್ಮ ಗಮನಕ್ಕೆ ಬರದಿದ್ದರೆ ಹೇಗೆ ಮುಖ್ಯಮಂತ್ರಿಗಳು ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದು ಈ ಬಗ್ಗೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ರಾಜುಗೂ ಅವರನ್ನು ಪಾಟೀಲ್ ಪ್ರಶ್ನಿಸಿದ್ದಾರೆ ಗೃಹ ಖಾತೆಯನ್ನು ವಹಿಸಿಕೊಂಡು ಎಂಬಿ ಪಾಟೀಲ್ ಅವರಿಗೆ ಒಂದು ತಿಂಗಳು ಕಳೆದಿರಲಿಲ್ಲ.ಇದರ ನಡುವೆ ಗುರುವಾರದಂದು ಸಿಎಂ ಕುಮಾರಸ್ವಾಮಿ ಅವರು ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದರು.
ಹುಬ್ಬಳ್ಳಿ-ಧಾರವಾಡ ನಗರದ ಕಮಿಷನರ್ ಆಗಿದ್ದ ಎಂ.ಎನ್ ನಾಗರಾಜ್ ಅವರ ಜಾಗಕ್ಕೆ ಕೆಜಿಎಫ್ ಎಸ್ಪಿ ಆಗಿದ್ದ ಬಿ.ಎಸ್ ಲೋಕೇಶ್ ಕುಮಾರ್ ಅವರನ್ನು ವರ್ಗಾವಣೆ ಮಾಡಿದ್ದು, ಬೆಳಗಾವಿ ನಗರ ಕಮಿಷನರ್ ಆಗಿದ್ದ ಡಿ.ಸಿ ರಾಜಪ್ಪ ಹುದ್ದೆಗೆ ಬೆಂಗಳೂರು ವೈರ್ ಲೆಸ್ ವಿಭಾಗದ ಎಸ್ಪಿ ಆಗಿದ್ದ ಪಿ. ರಾಜೇಂದ್ರ ಪ್ರಸಾದ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಉಳಿದಂತೆ ಬೆಂಗಳೂರು ಗೃಹ ರಕ್ಷಕ ದಳದ ಕಮಾಂಡೆಂಟ್ ಆಗಿದ್ದ ಆರ್.ರಮೇಶ್ ಅವರನ್ನು ಯೋಜನೆ ಆಧುನೀಕರಣದ ಡಿಐಜಿ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.
ಈ ಕುರಿತು ಆಪ್ತರ ಬಳಿ ಅಸಮಾಧಾನ ವ್ಯಕ್ತಪಡಿಸಿರುವ ಎಂಬಿಪಿ ಸಿಎಂ ಏಕಪಕ್ಷೀಯ ನಿರ್ಧಾರದ ಕುರಿತು ಮುಂದಿನ ಸಮನ್ವಯ ಸಮಿತಿ ಸಭೆಯಲ್ಲಿ ಪ್ರಸ್ತಾಪ ಮಾಡುವ ಸಾಧ್ಯತೆ ಇದೆ.
ಡಿಸಿಎಂ ಪರಮೇಶ್ವರ್ ಅವರು ಗೃಹ ಖಾತೆಯನ್ನು ಹೊಂದಿದ್ದ ವೇಳೆಯೂ ಸಿಎಂ ಪೊಲೀಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡಿದ್ರು. ಅಲ್ಲದೇ ಲೋಕೋಪಯೋಗಿ ಸಚಿವ ರೇವಣ್ಣ ಅವರು ತಮ್ಮ ಇಲಾಖೆಯ ವರ್ಗಾವಣೆ ಪ್ರಕ್ರಿಯೆಯಲ್ಲಿ ಮಧ್ಯಪ್ರವೇಶ ಮಾಡಿದ್ದ ಬಗ್ಗೆ ಕಾಂಗ್ರೆಸ್ ಸಚಿವರಿಂದಲೂ ಅಸಮಾಧಾನ ವ್ಯಕ್ತವಾಗಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ