ಹೂವಿನಹಡಗಲಿ :
ಬಳ್ಳಾರಿ ಲೋಕಸಭಾ ಬಿಜೆಪಿ ಅಭ್ಯರ್ಥಿಯಾದ ವೈ.ದೇವೇಂದ್ರಪ್ಪ ಇವರ ಗೆಲುವು ಖಚಿತ ಎಂದು ಮಾಜಿ ಮುಖ್ಯಮಂತ್ರಿ ಜಗದೀಶಶೆಟ್ಟರ್ ಆತ್ಮವಿಶ್ವಾಸ ವ್ಯಕ್ತಪಡಿಸಿದರು. ಅವರು ಪಟ್ಟಣದ ದ್ರಾಕ್ಷಾಯಣಿ ಕಲ್ಯಾಣ ಮಂಟಪದಲ್ಲಿ ಬಿಜೆಪಿ. ಪಕ್ಷದಿಂದ ಹಮ್ಮಿಕೊಂಡಿದ್ದ ಲೋಕಸಭೆ ಚುನಾವಣೆಯ ಪೂರ್ವಬಾವಿ ಸಭೆ ಉದ್ಘಾಟಿಸಿ ಮಾತನಾಡಿದರು.
ದೇವೇಂದ್ರ ಅವರು ಹೂವಿನಹಡಗಲಿಯ ಅಳಿಯಂದಿರಾಗಿದ್ದು, ಅವರನ್ನು ತಾವೆಲ್ಲರೂ ಆಶೀರ್ವದಿಸುವುದರ ಮೂಲಕ ಸಂಸದರನ್ನಾಗಿ ಆಯ್ಕೆ ಮಾಡಬೇಕೆಂದು ಕಾರ್ಯಕರ್ತರಲ್ಲಿ ವಿನಂತಿಸಿಕೊಂಡರು. ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಡಿ.ಕೆ.ಶಿವಕುಮಾರ್ರವರು ಶ್ರೀರಾಮುಲುರವರ ಬಗ್ಗೆ ಹಗುರವಾಗಿ ಮಾತನಾಡುವುದರ ಮೂಲಕ ಅಹಿಂದಾವರ್ಗದ ನಾಯಕರಾದ ಅವರನ್ನು ಅವಮಾನಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಕಾಂಗ್ರೆಸ್ ಪಕ್ಷದ ಆಡಳಿತ ಅಂತ್ಯವಾಗಲಿದ್ದು, ಕೆಲವೇ ದಿನಗಳಲ್ಲಿ ರಾಜ್ಯ ಸರ್ಕಾರದಲ್ಲಿಯೂ ಕೂಡಾ ಮೈತ್ರಿ ಪಕ್ಷಗಳು ಅಧಿಕಾರವನ್ನು ಕಳೆದುಕೊಳ್ಳುತ್ತವೆ ಎಂದು ಭವಿಷ್ಯ ನುಡಿದರು. ಪ್ರಧಾನಮಂತ್ರಿಯವರಾದ ಮೋದೀಜಿಯವರ ಹವಾ ದೇಶದೆಲ್ಲೆಡೆ ಇದ್ದು, ಕಾಂಗ್ರೆಸ್ ಪಕ್ಷ ಹಾಗೂ ಘಟಬಂದನ್ನಿಂದ ಯಾವುದೇ ಒಬ್ಬ ಅಧಿಕೃತ ಪ್ರಧಾನಿ ಅಭ್ಯರ್ಥಿಯನ್ನು ಘೋಷಣೆ ಮಾಡಲಾಗುತ್ತಿಲ್ಲ ಎಂದು ವ್ಯಂಗ್ಯವಾಡಿದರು.
ಮೊಳಕಾಲ್ಮೋರು ಶಾಸಕರಾದ ಬಿ.ಶ್ರೀರಾಮುಲು, ಮಾಜಿ ಶಾಸಕ ಚಂದ್ರನಾಯ್ಕ.ಬಿ., ಬಿಜೆಪಿ. ಜಿಲ್ಲಾಧ್ಯಕ್ಷ ಚನ್ನಬಸವನಗೌಡ, ಮುಖಂಡರಾದ ಓದೋ ಗಂಗಪ್ಪ, ಮಾತನಾಡಿ, ಮತಯಾಚನೆ ಮಾಡಿದರು. ಅಭ್ಯರ್ಥಿ ವೈ.ದೇವೇಂದ್ರಪ್ಪರವರು ಮಾತನಾಡಿ ನಾನು ಹೂವಿನಹಡಗಲಿ ತಾಲೂಕಿನ ಅಳಿಯನಾಗಿದ್ದು, ಅಂದು ಕನ್ಯಾದಾನಮಾಡಿದ್ದೀರಿ ಇಂದು ಮತದಾನ ಮಾಡುವುದರ ಮೂಲಕ ನನ್ನನ್ನು ಅಶೀರ್ವದಿಸಬೇಕೆಂದು ವಿನಂತಿಸಿಕೊಂಡರು.
ಮಾಜಿ ಎಂ.ಎಲ್ಸಿ. ಮತ್ಯುಂಜಯ ಜಿನಗಾ, ಬಿಜೆಪಿ. ತಾಲೂಕು ಅಧ್ಯಕ್ಷ ಎಂ.ಬಿ.ಬಸವರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಪೂಜಪ್ಪ, ಜಿ.ಪಂ. ಸದಸ್ಯರಾದ ಲಲಿತಾಬಾಯಿ, ಎಸ್.ಕೊಟ್ರೇಶ., ತಾ.ಪಂ. ಸದಸ್ಯ ಈಟಿ. ಲಿಂಗರಾಜ್, ಎಂ.ಬಸಣ್ಣ, ಟಿಪ್ಪುಸುಲ್ತಾನ್, ಲಂಕೇಶನಾಯ್ಕ, ಸಂತೋಷ್, ಜೆ.ಎಂ.ವಾಗೀಶ, ಶಂಕರ್ನಾಯ್ಕ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
