ಶಿರಾ ನಾರಾಯಣಸ್ವಾಮಿ ಕಲ್ಯಾಣ ಮಂಟಪಕ್ಕೆ ದೊರೆಯದ ಮುಕ್ತಿ

ಶಿರಾ

          ತಾಲ್ಲೂಕಿನ ಅದೆಷ್ಟೋ ಐತಿಹಾಸಿಕ ಸ್ಥಳಗಳು ಇಂದಿಗೂ ಅಭಿವೃದ್ಧಿ ಕಾಣದೆ ಸೊರಗುತ್ತಿದ್ದು ಮುಜರಾಯಿ ಇಲಾಖೆಯಲ್ಲಿ ಸಾಕಷ್ಟು ಅನುದಾನವಿದ್ದರೂ ಸದರಿ ಅನುದಾನವನ್ನು ನೀಡದ ಪರಿಣಾಮ ಅಂತಹ ಸ್ಥಳಗಳು ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿವೆ ಎಂಬುದಕ್ಕೆ ನಗರದ ಐತಿಹಾಸಿಕ ಪ್ರಸಿದ್ಧ ಶ್ರೀ ಲಕ್ಷ್ಮೀನಾರಾಯಣಸ್ವಾಮಿ ಕಲ್ಯಾಣ ಮಂಟಪವೇ ಜ್ವಲಂತ ಸಾಕ್ಷಿ ಎಂದರೂ ತಪ್ಪಾಗಲಾರದು.
ಶಿರಾ ನಗರದ ನಾರಾಯಣಸ್ವಾಮಿ ಕಲ್ಯಾಣ ಮಂಟದಲ್ಲಿ ಯಾವುದೇ ವಿವಾಹ ಸಮಾರಂಭಗಳು ನಡೆಯದಿದ್ದರೂ ಆದಿಯಿಂದಲೂ ಈ ಸ್ಥಳ ಕಲ್ಯಾಣ ಮಂಟಪವೆಂದೇ ತನ್ನ ನಾಮದೇಯವನ್ನು ಶಾಶ್ವತವಾಗಿ ಉಳಿಸಿಕೊಂಡು ಬಂದಿದೆ.

         ನಗರದ ಹೃದಯ ಭಾಗದಲ್ಲಿಯೇ ಇರುವ ಈ ಕಲ್ಯಾಣ ಮಂಟಪದ ಹೆಸರನ್ನು ಚಿಕ್ಕ ಚಿಕ್ಕ ಮಕ್ಕಳು ಕೂಡಾ ಕೇಳಿ ತಿಳಿದುಕೊಂಡೇ ಇರುತ್ತಾರೆ. ಕಾರಣ ಕಳೆದ ಐದು ವರ್ಷದ ಹಿಂದಿನವರೆಗೆ ಈ ಸ್ಥಳದಲ್ಲಿ ಸಾಂಸ್ಕತಿಕ ಕಾರ್ಯಕ್ರಮಗಳು ಹೇರಳವಾಗಿ ನಡೆಯುತ್ತಲೇ ಬಂದಿದ್ದವು.

        ನಗರದ ವಿವಿಧ ಶಾಲಾ-ಕಾಲೇಜುಗಳ ವಾರ್ಷಿಕೋತ್ಸವ ಕಾರ್ಯಕ್ರಮ, ವಿವಿಧ ಇಲಾಖೆಗಳ ಸಭೆ-ಸಮಾರಂಭಗಳು, ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳು ಸೇರಿದಂತೆ ಬಹುತೇಕ ಕಾರ್ಯಕ್ರಮಗಳು ಈ ಕಲ್ಯಾಣ ಮಂಟದ ಆವರಣದಲ್ಲಿ ದಿನನಿತ್ಯ ನಡೆಯುತ್ತಲೇ ಇದ್ದದ್ದು ಸರಿಯಷ್ಟೆ..

         ಈ ಕಲ್ಯಾಣ ಮಂಟಪದ ನೆಲದ ಗುಣವೋ ಅಥವ ತನ್ನದೇ ಕಾಲ ಗರ್ಭದ ಐತಿಹಾಸಿಕ ನೆಲೆಗಟ್ಟೋ….ಒಟ್ಟಾರೆ ಈ ಜಾಗದಲ್ಲಿ ನಡೆಯುವ ಪ್ರತಿಯೊಂದು ಕಾರ್ಯಕ್ರಮಗಳೂ ನೂರಕ್ಕೆ ನೂರರಷ್ಟು ಸಫಲಗೊಳ್ಳದೇ ಇರುತ್ತಿರಲಿಲ್ಲ. ಕಾರ್ಯಕ್ರಮಗಳ ಆಯೋಜಕರು ಯಾವುದೇ ಕರ ಪತ್ರ ಹೊರಡಿಸದೆಯೂ ಈ ಜಾಗದಲ್ಲಿ ಕಾರ್ಯಕ್ರಮ ನಡೆಸಬಹುದಿತ್ತು ಅಂಬುದು ಹೆಮ್ಮೆಯ ಸಂಗತಿಯೂ ಹೌದು.
ಬೆಳ್ಳಂಬೆಳಿಗ್ಗೆ ಮಂಟಪದ ಬಯಲಿನಲ್ಲಿ ಸಣ್ಣದೊಂದು ಶಾಮಿಯಾನ ಹಾಕಿದರೆ ಸಾಕು ಇಂದು ಯಾವೊದೋ ಕಾರ್ಯಕ್ರಮವಿದೆ ಎಂದು ಮನಗಂಡು ನಗರದ ಅನೇಕ ಕುಟುಂಬಗಳು ಹಾಗೂ ಸಾಹಿತ್ಯಾಸಕ್ತರು ರಾತ್ರಿ ವೇಳೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದುದು ಸಹಜವೂ ಆಗಿತ್ತು.

         ಸದರಿ ಕಲ್ಯಾಣ ಮಂಟಪಕ್ಕೊಂದು ಕಳೆ ತರುತ್ತಿದ್ದ ದೃಷ್ಯವೆಂದರೆ ಕಲ್ಯಾಣ ಮಂಟಪದ ಆವರಣದೊಳಗೆ ಸುತ್ತಲೂ ಹಾಜರಿರುತ್ತಿದ್ದ ಪಾನೀಪೂರಿ ಅಂಗಡಿಗಳು, ಬಿಸಿ ಬಿಸಿ ಬೋಂಡಾ, ಬಜ್ಜಿ, ಚುರುಮುರಿ ಅಂಗಡಿ, ಐಸ್‍ಕ್ರೀಮ್….ಹೀಗೆ ವಿವಿಧ ಬಗೆಯ ತಿನಿಸುಗಳ ಅಂಗಡಿಗಳಿಂದ ಸದರಿ ಕಲ್ಯಾಣ ಮಂಟಪ ಸದಾ ಜನನಿಬಿಡ ಪ್ರದೇಶವೇ ಆಗುತ್ತಿತ್ತು. ತಿನಿಸು ಸವಿಯಲು ಬಂದವರು ನಡೆಯುತ್ತಿದ್ದ ಕಾರ್ಯಕ್ರಮದ ವೀಕ್ಷಣೆ ಮಾಡದೆ ಮನೆಗಳಿಗೆ ತೆರಳುತ್ತಿರಲಿಲ್ಲ. ಆದರೆ ಈಗ ಇಡೀ ಕಲ್ಯಾಣ ಮಂಟಪದ ಅವ್ಯವಸ್ಥೆಯನ್ನು ಕಂಡರೆ ನಿಜಕ್ಕೂ ಕರುಳು ಕಿತ್ತು ಬರುವಂತಿದೆ.

         ರಸ್ತೆ ಒತ್ತುವರಿಯ ನೆಪದಲ್ಲಿ ಕಳೆದ 5 ವರ್ಷದ ಹಿಂದೆ ಈ ಕಲ್ಯಾಣ ಮಂಟಪದ ನೂರಾರು ಕಾಲದ ಗೋಡೆಯನ್ನು ಕೆಡವಲಾಯಿತು. ನೂತನ ಗೋಡೆಯ ನಿರ್ಮಾಣಕ್ಕೆಂದು ಸರ್ಕಾರ ಮಂಜೂರು ಮಾಡಿದ 10 ಲಕ್ಷ ರೂಗಳ ವೆಚ್ಚದಲ್ಲಿ ಮೂರು ಭಾಗದ ಗೋಡೆಯ ನಿರ್ಮಾಣವಾಯಿತೇ ಹೊರತು ಮತ್ತೊಂದು ಗೋಡೆಯನ್ನು ನಿರ್ಮಿಸುವ ಕೆಲಸವನ್ನು ನಿರ್ಮಿತಿ ಕೇಂದ್ರ ಮಾಡಲೇ ಇಲ್ಲ.

           ಹಳೆಯ ಗೋಡೆ ಒರುವವರೆಗೂ ಮಂಟಪದೊಳಗೆ ಸಣ್ಣ ಸಣ್ಣ ತಳ್ಳುವ ಗಾಡಿಯಲ್ಲಿ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದವರನ್ನೂ ಬೀದಿ ಪಾಲು ಮಾಡಿದ ಕಂದಾಯ ಇಲಾಖೆ ಅಂಗಡಿಗಳವರು ಗೋಗರೆದೂ ಒಳಗೆ ಅವಕಾಶವನ್ನು ಈತನಕವೂ ನೀಡಿಲ್ಲ.

          ಈ ಹಿಂದೆ ಅತ್ಯಂತ ಶುಚಿಯಾಗಿ ಕಂಗೊಳಿಸುತ್ತಿದ್ದ ಮಂಟಪವೀಗ ಕಸದ ಗೂಡಾಗಿದೆ. ಘನತ್ಯಾಜ್ಯ ವಸ್ತುಗಳು, ಮದ್ಯಪಾನದ ಖಾಲಿ ಬಾಟಲ್‍ಗಳು ರಾರಾಜಿಸುತ್ತಿದ್ದು ಇಡೀ ಮಂಟಪ ಮಲ ಮೂತ್ರಗಳ ವಿಸರ್ಜನೆಗೆ ತುತ್ತಾಗಿರುವುದು ಶೋಚನೀಯ ಸಂಗತಿಯೇ ಸರಿ.
ಈ ನಡುವೆ ನಾರಾಯಣಸ್ವಾಮಿ ಕಲ್ಯಾಣ ಮಂಟಪದೊಳಗಿದ್ದ ಸ್ವಾಮಿಯ ರಥವನ್ನು ಹೊರಗಿಟ್ಟು ನೂತನ ರಥದ ಮನೆಯ ನಿರ್ಮಾಣಕ್ಕೂ ಸಿದ್ದಗೊಳಿಸಲಾಯಿತಲ್ಲದೆ. ಸದರಿ ರಥದ ಮನೆಯೂ ಅಪೂರ್ಣಗೊಂಡು ಕಳೆದ 10 ವರ್ಷಗಳಿಂದಲೂ ಸ್ವಾಮಿಯ ರಥ ಬಿಸಿಲು-ಮಳೆಗೆ ಮೈಯೊಡ್ಡಿ ನಿಂತಿದೆ.

           ಈ ಹಿಂದೆ ಟೌನ್ ಕೋ ಆಪರೇಟೀವ್ ಬ್ಯಾಂಕಿನಿಂದ ನಿರ್ಮಾಣಗೊಳಿಸಲಾದ ಈ ರಥ ಸರ್ಕಾರದ ದೋರಣೆಯಿಂದ ಮುರಿದು ಬೀಳುವ ಹಂತ ತಲುಪಿದೆ. ಶ್ರೀ ನಾರಾಯಣಸ್ವಾಮಿ ದೇವಸ್ಥಾನ ಸಮಿತಿಯ ಬ್ಯಾಂಕಿನ ಖಾತೆಯಲ್ಲಿ ಒಂದಷ್ಟು ಹಣವಿದ್ದರೂ ಸಮಿತಿಯ ಪದಾಧಿಕಾರಿಗಳ ಆಯ್ಕೆಯ ವಿಳಂಭದಿಂದ ದೇವಸ್ಥಾನದ ಅಭಿವೃದ್ಧಿಗೂ ಹಾಗೂ ಕಲ್ಯಾಣ ಮಂಟಪದ ಅಭಿವೃದ್ಧಿಗೂ ಕಂಠಕ ಬಂದಿದೆ.

          ಈಗಲಾದರೂ ಕ್ಷೇತ್ರದ ಶಾಸಕರು, ಚಿತ್ರದುರ್ಗ ಸಂಸದರು ತಮ್ಮದೇ ಅನುದಾನದಲ್ಲಿ ಈ ಕಲ್ಯಾಣ ಮಂಟಪದ ಅಭಿವೃದ್ಧಿಗೆ ಅನುದಾನವನ್ನು ಮಂಜೂರು ಮಾಡಿದ್ದೇ ಆದಲ್ಲಿ ಕಲುಷಿತಗೊಂಡು ನಾರುತ್ತಿರುವ ಐತಿಹಾಸಿಕ ಸ್ಥಳವನ್ನು ಜೀವಂತವಾಗಿ ಉಳಿಸಿಕೊಳ್ಳಲು ಸಾದ್ಯ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link