ಹಾವೇರಿ :
ಶಾಲೆಯಲ್ಲಿ ಸಣ್ಣ ಪುಟ್ಟ ವಸ್ತುಗಳನ್ನು ಕದ್ದುತರುವ ಮಗನನ್ನು ಮೊದಲಲ್ಲೆ ತಡೆಯದಿದ್ದರೆ ಮುಂದೆ ಆತ ಪಕ್ಕಾ ಕಳ್ಳ, ದರೋಡೆಕೋರ ನಾಗಲಿಕ್ಕಿಲ್ಲವೇ..? ಸುಶಿಕ್ಷಿತ ತಾಯಿ ಮಕ್ಕಳ ಸತ್ಪ್ರವೃತ್ತಿಗಳನ್ನು ಜಾಗೃತಗೊಳಿಸುವುದಕ್ಕೆ ಆದ್ಯತೆಯನ್ನು ನೀಡಬೇಕು ಎಂದು ಹುಕ್ಕೇರಿಮಠದ ಸದಾಶಿವ ಸ್ವಾಮಿಜಿ ಹೇಳಿದರು.
ನಗರದ ಹುಕ್ಕೇರಿಮಠದಲ್ಲಿ ಏರ್ಪಡಿಸಿದ್ದ ಧರ್ಮ ಸಂಸ್ಕಾರ ಶಿಬಿರ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ತಂದೆ ತಾಯಿಗಳ ಕೈಯಲ್ಲಿ ಮಕ್ಕಳ ಶ್ರೇಯೋಭಿವೃದ್ಧಿ ಹಾಗೂ ರಾಷ್ಟ್ರದ ಅಳಿವು ಉಳಿವುಗಳಿವೆ ಜೊತೆಗೆ ಸಮಾಜದಲ್ಲಿನ ಕೆಲಸಕ್ಕೆ ಬಾರದ ಪದ್ಧತಿಗಳನ್ನು ತೊಡೆದು ಹಾಕಿ ಸಮಾಜವು ಇವುಗಳಿಂದ ಮುಕ್ತವಾಗಿ ಮೇಲೇಳುವಂತೆ ಮಕ್ಕಳ ಮನಸ್ಸನ್ನು ಸಿದ್ಧಗೊಳಿಸಬಹುದು ಎಂದರು.
ಹಿರಿಯ ಚಿಂತಕ ಜೆ.ಎಂ.ಮಠದ ಮಾತನಾಡಿ, ತಾಯಿ ಮಗುವಿಗೆ ಕೊಡುವ ಪುಸ್ತಕ ಜ್ಞಾನದೊಂದಿಗೆ ರೀತಿ, ನೀತಿ, ನಮ್ರತೆ, ಸದಾಚಾರಗಳನ್ನು ಕಲಿಸಿ ಅವರಲ್ಲಿ ಮಾನವೀಯ ಗುಣಗಳು ಧಾರಾಳವಾಗಿ ಬೆಳೆಯುವಂತೆ ಮಾಡುವಳೆಂದೇ ಆಕೆಯನ್ನು ಮಕ್ಕಳ ಮೊದಲ ಗುರು ಎಂದು ಶಾಸ್ತ್ರಗಳು ಕರೆದಿವೆ ಎಂದು ಹೇಳಿ ಚಾಚಾ ನೆಹರು ಹಾಡನ್ನು ಮಕ್ಕಳೊಂದಿಗೆ ಹಾಡಿದರು.
ಸಾಹಿತಿ ಹನುಮಂತಗೌಡ ಗೊಲ್ಲರ ಮಾತನಾಡಿ, ಮಕ್ಕಳು ಇಂದು ಶಾಲೆಯಲ್ಲಿ, ಮನೆಯಲ್ಲಿ ಕಲಿಯುಗದ ಸಂಸ್ಕಾರವನ್ನು ಇಲ್ಲಿ ಕಲಿಯುತ್ತಾರೆ. ಮಕ್ಕಳಲ್ಲಿ ಸಂಸ್ಕಾರದ ಕೊರತೆಯಿಂದ ವೃದ್ಧಾಶ್ರಮಗಳು ಹೆಚ್ಚಿವೆ. ತಂದೆ ತಾಯಿಗಳಲ್ಲಿ ಅನಾಥ ಪ್ರಜ್ಞೆ ಕಾಡುತ್ತಿದೆ. ಎಲ್ಲ ಮಠಾಧೀಶರು ಇಂಥಹ ಧರ್ಮ ಸಂಸ್ಕಾರ ಶಿಬಿರಗಳನ್ನು ನಡೆಸಿದರೆ ದೇಶದಲ್ಲಿ ಭಯೋತ್ಪಾದನೆ ಇಲ್ಲ ಭ್ರಷ್ಠಾಚಾರವಿಲ್ಲ ಅನೈತಿಕತೆ ಇಲ್ಲವಾಗುವವು ಎಂದರು.
ದಾನೇಶ್ವರ ದೇವರು, ಶಿವಯೋಗೆಪ್ಪ ವಾಲಿಶೆಟ್ಟರ, ಶಿವಣ್ಣ ಶಿರೂರ, ವೀರಣ್ಣ ಅಂಗಡಿ, ಸಿ ಎಂ ಪಟ್ಟಣಶೆಟ್ಟಿ, ರಾಮನಗೌಡ, ಸಿದ್ಧಣ್ಣ ಕಡೇಮನಿ, ಮಲ್ಲಿಕಾರ್ಜುನ ಸಾತೇನಳ್ಳಿ, ಸುರೇಶ ಮರಡಣ್ಣನವರ, ತುಪ್ಪದ, ಸಿ.ಎಸ್.ಮರಳಿಹಳ್ಳಿ, ಕೆ.ಬಿ.ಭಿಕ್ಷಾವರ್ತಿಮಠ, ರಾಚಣ್ಣ, ವಿ.ವಿ.ಕನವಳ್ಳಿ, ರೇಣುಕಾ ಗುಡಿಮನಿ, ಅನುಪಮಾ ಹಿರೇಮಠ, ಶಿವಕುಮಾರ ಹಿರೇಮಠ ಮತ್ತಿತರರು ಉಪಸ್ಥಿತರಿದ್ದರು.ನೆರೆಯ ಜಿಲ್ಲೆಗಳೂ ಸೇರಿದಂತೆ 60 ಮಕ್ಕಳು ಶಿಬಿರದಲ್ಲಿ ಪಾಲ್ಗೊಂಡಿದ್ದರು ಶ್ರೇಯಾ ವಚನ ಪ್ರಾರ್ಥನೆ ಮಾಡಿದಳು ಬಿ.ಬಸವರಾಜ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆ.ಆರ್.ನಾಶಿಪುರ ವಂದಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
