ಜಗಳೂರು :
ನಮ್ಮ ಸಮಾಜದ ಕೆಲವರು ಇತ್ತೀಚೆಗೆ ಸಮಾಜವನ್ನು ದಿಕ್ಕು ತಪ್ಪಿಸುವ ಕೆಲಸ ಹಾಗೂ ಸ್ವಾರ್ಥಕ್ಕಾಗಿ ಸಮಾಜವನ್ನು ದುರುಪ ಯೋಗ ಮಾಡಿಕೊಳ್ಳುತ್ತಿದ್ದು, ಯಾವುದೇ ಕಛೇರಿಯ ಅಧಿಕಾರಿಗಳಿಂದ ಸಮಾಜದ ಹೆಸರಿನಲ್ಲಿ ಹಣ ವಸೂಲಿ ಹಾಗೂ ಬೆದರಿಕೆ ಹಾಕುವುದು ಕಂಡು ಬಂದರೆ ಅವರ ವಿರುದ್ದ ಹೋರಾಟ ನಡೆಸಲಾಗುವುದು ಎಂದು ಡಿಎಸ್ಎಸ್ ಹಿರಿಯ ಮುಖಂಡ ಶಂಭುಲಿಂಗಪ್ಪ ಎಚ್ಚರಿಕೆ ನೀಡಿದರು.
ಪಟ್ಟಣದ ವಿದ್ಯಾನಗರದಲ್ಲಿರುವ ಪತ್ರಿಕಾಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ಅ. 12 ರಂದು ಬೆಂಗಳೂರಿನ ವಸಂತ ನಗರದ ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ಆದಿಜಾಂಬವ ಅಭಿವೃದ್ದಿ ನಿಗಮದ ಲೋಕಾರ್ಪಣೆ ಕಾರ್ಯಕ್ರಮವಿದ್ದು, ತಾಲೂಕಿನ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಸರ್ಕಾರವು ಇಂದು ಆದಿಜಾಂಬವ ಅಭಿವೃದ್ದಿ ನಿಗಮವನ್ನು ರಚನೆ ಮಾಡಿ, ಅ. 12 ರಂದು ಉದ್ಘಾಟನೆಯನ್ನು ಹಮ್ಮಿಕೊಳ್ಳಲಾಗಿದೆ. ಈಗಾಗಲೇ ಬಂಜಾರ ಸಮಾಜ, ಭೋವಿ ಸಮಾಜದವರಿಗೆ ಅಭಿವೃದ್ದಿ ನಿಗಮವಾಗಿದೆ. ಅದರಂತೆ ಶೋಷಿತ ಸಮುದಾಯವಾಗಿರುವ ಮಾದಿಗ ಸಮುದಾಯಕ್ಕೂ ಅಭಿವೃದ್ದಿ ನಿಗಮ ಸ್ಥಾಪನೆ ಮಾಡುವ ಮೂಲಕ ಈ ಸಮಾಜದ ಅಭಿವೃದ್ದಿಗೆ ಸಹಕಾರ ನೀಡಿದೆ. ಅಭಿವೃದ್ದಿ ನಿಗಮ ಮಾಡಿರುವಂತ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಹೆಚ್.ಆಂಜನೇಯ, ಡಾ.ಜಿ.ಪರ ಮೇಶ್ವರ್ರವರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು.
ಆದಿಜಾಂಬವ ಅಭಿವೃದ್ದಿ ನಿಗಮ ಸ್ಥಾಪನೆ ಮಾಡುವ ಮೂಲಕ ನಮಗೆ ಒಂದು ಹಂತದ ಜಯ ದೊರೆತಿದ್ದು, ಮುಂದಿನ ದಿನಗ ಳಲ್ಲಿ ನಮ್ಮ ಬೇಡಿಕೆಯಾದ ಸದಾಶಿವ ಆಯೋಗಕ್ಕೆ ಹೋರಾಟ ಮಾಡಲಾಗುವುದು. 101 ಜಾತಿಯಲ್ಲಿ ಅತ್ಯಂತ ಶೋಷಿತ ಸಮಾಜ ಮಾದಿಗ ಸಮಾಜವಾಗಿದ್ದು, ಸದಾಶಿವ ಆಯೋಗ ಜಾರಿಗೆ ಸುಮಾರು ವರ್ಷಗಳಿಂದ ಹೋರಾಟ ಮಾಡುತ್ತಿದ್ದು, ಈ ಹಿಂದೆ ಮಾನ್ಯ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಅಧಿಕಾರಕ್ಕೆ ಬಂದರೆ ಸದಾಶಿವ ಆಯೋಗವನ್ನು ಜಾರಿಗೆ ತರುತ್ತೇನೆ ಎಂದು ಹೇಳಿದ್ದರು. ಅದರಂತೆ ಅವರು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ತಾಲೂಕಿನಲ್ಲಿ ನಮ್ಮ ಜನಾಂಗದ 30 ಸಾವಿರಕ್ಕೂ ಹೆಚ್ಚು ಮಾದಿಗ ಜನಸಂಖ್ಯೆ ಇದ್ದು, ರಾಜಕೀಯ ಕ್ಷೇತ್ರದಲ್ಲಿ ನಮ್ಮನ್ನು ಮತದಾನಕ್ಕೆ ಸೀಮಿತಗೊಳಿಸಿದ್ದಾರೆ, ರಾಜಕಾರಣಿಗಳು ನಮ್ಮ ಜನಾಂಗವನ್ನು ಕಡೆಗಣಿಸುತ್ತಿದ್ದು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಮ್ಮ ಜನಾಂಗಕ್ಕೆ ಅನ್ಯಾಯ ಮಾಡಿದವರ ವಿರುದ್ದ ಮತ ಹಾಕಲು ಸಿದ್ದರಾಗಿದ್ದೇವೆ.
ಇತ್ತೀಚೆಗೆ ತಾಲೂಕಿನಲ್ಲಿ ನಮ್ಮ ಸಮಾಜದವರ ಮೇಲೆ ದಬ್ಬಾಳಿಕೆ, ದೌರ್ಜನ್ಯ ಹೆಚ್ಚಾಗುತ್ತಿದೆ, ಇದರ ಬಗ್ಗೆ ಅಧಿಕಾರಿಗಳು, ಶಾಸಕರು ಕ್ರಮ ಕೈಗೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಹಟ್ಟಿ ತಪ್ಪೇಸ್ವಾಮಿ, ಎ.ಕೆ.ಶಿವಮೂರ್ತಿ, ಸತ್ಯಮೂರ್ತಿ, ಮಂಜುನಾಥ್ ಸೇರಿದಂತೆ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ