ಬೆಂಗಳೂರು
ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹಚರನ ಹೆಸರಿನಲ್ಲಿ ಒಂದು ಕೋಟಿ ರೂ.ಹಣ ನೀಡದಿದ್ದರೆ ಕುಟುಂಬವನ್ನೇ ಮುಗಿಸುವುದಾಗಿ ಹೊಟೇಲ್ ಮಾಲೀಕರೊಬ್ಬರಿಗೆ ಬೆದರಿಕೆ ಸಂದೇಶ ಕಳುಹಿಸಿದ್ದ ನಿವೃತ್ತ ರಕ್ಷಣಾಧಿಕಾರಿಯನ್ನು ವಿವೇಕನಗರ ಪೆÇಲೀಸರು ಬಂಧಿಸಿದ್ದಾರೆ.
ಬೇಗೂರಿನ ಏಕಾಂಬರ್ ಬಂಧಿತ ಆರೋಪಿಯಾಗಿದ್ದು ಆತನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದ್ದು ಹಣದಾಸೆಗೆ ಈ ಕೃತ್ಯ ನಡೆಸಿರುವುದಾಗಿ ಒಪ್ಪಿಕೊಂಡಿದ್ದಾನೆ,
ರಕ್ಷಣಾ ಇಲಾಖೆಯಲ್ಲಿ 17 ವರ್ಷಗಳ ಕಾಲ ಸೇನಾಧಿಕಾರಿಯಾಗಿ ಸೇವೆ ಸಲ್ಲಿಸಿ, ನಿವೃತ್ತನಾದ ನಂತರ ಪೇಟಿಂಗ್ ಗುತ್ತಿಗೆದಾರನಾಗಿ ಕೆಲಸ ಮಾಡುತ್ತಿದ್ದು ವಿವೇಕ ನಗರದ ಎಎಸ್ಸಿ ಸೆಂಟರ್ನಲ್ಲಿ ರೆಸ್ಟೋರೆಂಟ್ ನಡೆಸುತ್ತಿದ್ದ ಅಶ್ವಿನಿ ಅಗರ್ವಾಲ್ಗೆ ಹಲವು ವರ್ಷಗಳಿಂದ ಆರೋಪಿ ಪರಿಚಿತನಾಗಿದ್ದ.
ಸುಲಭ ಹಣ ಸಂಪಾದನೆಗಾಗಿ ಅಡ್ಡ ದಾರಿ ತುಳಿದ ಆರೋಪಿಯು ಬೇರೆಯವರ ಮೊಬೈಲ್ ಪಡೆದು ತನ್ನ ಮೊಬೈಲ್ಗೆ ಒಟಿಪಿ ಬಂದ ನಂತರ ವಾಟ್ಸಾಪ್ ನಂಬರ್ ನಮೂದಿಸಿಕೊಂಡಿದ್ದ.ಪೂರ್ವ ಸಂಚಿನಂತೆ ಕಳೆದ ಜ.25 ಬೆಳಗ್ಗೆ ಅಶ್ವಿನಿ ಅಗರ್ವಾಲ್ ಅವರು ವಾಕ್ ಮಾಡುವಾಗ ನಾವು ದಾವೂದ್ ಇಬ್ರಾಹಿಂ ತಂಡದವರು, ಮೂರು ತಿಂಗಳ ಹಿಂದೆ ಬೆಂಗಳೂರಿಗೆ ಬಂದಿದ್ದೇವೆ. ಒಂದು ಕೋಟಿ ರೂ. ಹಣ ನೀಡದಿದ್ದರೆ ನಿಮ್ಮ ತಮ್ಮ ಪವನ್ನನ್ನು ಕೊಲೆ ಮಾಡಿ ನಂತರ ನಿಮ್ಮ ಕುಟುಂಬದ ಸದಸ್ಯರನ್ನು ಸಾಯಿಸುವುದಾಗಿ ವಾಟ್ಸಾಪ್ ಮಾಡಿದ್ದ.
ಈ ಸಂಬಂಧ ವಿವೇಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಆರೋಪಿಗಳ ಬೆನ್ನಟ್ಟಿದ್ದ ಪೊಲೀಸರು ಮೊದಲು ದೂರುದಾರರ ಮೂಲಕವೇ ಆರೋಪಿಗೆ ಕರೆ ಮಾಡಿಸಿ ಬೇಡಿಕೆ ಇಟ್ಟಿದ್ದ 80 ಲಕ್ಷ ಬದಲು 50 ಲಕ್ಷ ರೂ.ನೀಡುವುದಾಗಿ ಹೇಳಿಸಿದ್ದರು. ಇದನ್ನು ನಂಬಿ ಹಣ ಸಮೇತ ಮಡಿವಾಳಕ್ಕೆ ಬರಬೇಕೆಂದು ಆಗ್ರಹಿಸಿದ್ದ ಆರೋಪಿಗೆ ನಂಬಿಕೆ ಬರುವ ಸಲುವಾಗಿಯೇ ಸೂಟ್ ಕೇಸ್ ಹಿಡಿದು ಆತ ಹೇಳಿದ ಸ್ಥಳಕ್ಕೆ ಹೋಗಿ ಕಾರ್ಯಾಚರಣೆ ನಡೆಸಿ ಬಂಧಿಸಿರುವುದಾಗಿ ವಿವೇಕ ನಗರ ಪೊಲೀಸರು ಹೇಳಿದ್ದಾರೆ.
ಆರೋಪಿ ಏಕಾಂಬರ್ಗೆ ವಿವಾಹವಾಗಿದ್ದು ಇಬ್ಬರು ಮಕ್ಕಳು ಇದ್ದಾರೆ. ಐಷಾರಾಮಿ ಜೀವನ ನಡೆಸಲು ಈ ಕೃತ್ಯಕ್ಕೆ ಕೈಹಾಕಿದ್ದಾಗಿ ಪೊಲೀಸರ ವಿಚಾರಣೆಯಲ್ಲಿ ತಿಳಿಸಿದ್ದಾನೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
