ಸರಕು ಸಾಗಾಣೆ ವಾಹನದಾರರಿಗೆ ಎಚ್ಚರಿಕೆ ನೀಡಿದ ಸರ್ಕಾರ..!!!

ಬೆಂಗಳೂರು

     ಶಾಲಾ ವಿದ್ಯಾರ್ಥಿಗಳು,ಕಟ್ಟಡ ಕಾರ್ಮಿಕರು ಹಾಗೂ ಗಾರ್ಮೆಂಟ್ ನೌಕರರನ್ನು ಸರಕು ಸಾಗಣೆ ವಾಹನಗಳಲ್ಲಿ ಕರೆದೊಯ್ಯುವ ಕೆಲಸ ನಡೆದರೆ ಸಂಬಂಧಪಟ್ಟವರ ವಿರುದ್ಧ ಉಗ್ರಕ್ರಮ ಕೈಗೊಳ್ಳಲು ಸರ್ಕಾರ ನಿರ್ಧರಿಸಿದೆ.

     ಅದೇ ರೀತಿ ಇನ್ನು ಮುಂದೆ ಇವರನ್ನು ಕರೆದೊಯ್ಯಲು ಸಂಬಂಧಿಸಿದವರು ಖಾಸಗಿ ವಾಹನಗಳನ್ನು ಖರೀದಿಸಲು ಲೈಸೆನ್ಸ್ ನೀಡಬೇಕು. ಇಲ್ಲವೇ ರಿಯಾಯ್ತಿ ದರದಲ್ಲಿ ಕೆಎಸ್‍ಆರ್‍ಟಿಸಿ ವತಿಯಿಂದಲೇ ಬಸ್ಸುಗಳನ್ನು ನೀಡಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದೆ.

      ವಿಧಾನಸೌಧದ ಸಮಿತಿ ಕೊಠಡಿಯಲ್ಲಿಂದು ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಈ ಸೂಚನೆ ನೀಡಿದ್ದಾರೆ.

     ಶಾಲಾ ಮಕ್ಕಳನ್ನು ಸುಸ್ಥಿತಿಯಲ್ಲಿಲ್ಲದ,ಸರಕು ಸಾಗಣೆ ಮಾಡುವ ವಾಹನಗಳಲ್ಲಿ ಶಾಲೆಗೆ ಬಿಡುವ,ಕರೆತರುವ ಕುರಿತು ವ್ಯಾಪಕ ದೂರುಗಳು ಬರುತ್ತಿವೆ.ಆದರೆ ಇದುವರೆಗೆ ಯಾವ ಕ್ರಮವೂ ಆಗಿಲ್ಲ.ಹೀಗಾಗಿ ಮುಂದಿನ ದಿನಗಳಲ್ಲಿ ಇದಕ್ಕೆ ಅವಕಾಶವಾಗದಂತೆ ನೋಡಿಕೊಳ್ಳಬೇಕು.

      ಶಾಲಾ ಆಡಳಿತ ಮಂಡಳಿಗಳೇ ಮಕ್ಕಳನ್ನು ಶಾಲೆಗೆ ಕರೆದೊಯ್ಯಲು,ಮನೆಗೆ ಬಿಡಲು ತಮ್ಮದೇ ವಾಹನ ಖರೀದಿ ಮಾಡಲು ಬಯಸಿದರೆ ಅವುಗಳಿಗೆ ಪರವಾನಗಿ ನೀಡಬೇಕು.ಇಲ್ಲವೇ ಕೆಎಸ್‍ಆರ್‍ಟಿಸಿ ಬಸ್ಸುಗಳನ್ನು ರಿಯಾಯ್ತಿ ದರದಲ್ಲಿ ಒದಗಿಸಬೇಕು.

      ಹಾಗೆಯೇ ಕಟ್ಟಡ ಕಾರ್ಮಿಕರನ್ನು ಸರಕು ಸಾಗಣೆ ವಾಹನಗಳು,ಟಾಂ ಟಾಂ,ತೆರೆದ ವಾಹನಗಳು ಸೇರಿದಂತೆ ಹಲವು ವಾಹನಗಳಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಕರೆದೊಯ್ಯುವ ಕೆಲಸ ನಡೆಯುತ್ತಿದೆ.ಹಲ ಬಾರಿ ಇಂತಹ ವಾಹನಗಳು ನಿಯಂತ್ರಣ ತಪ್ಪಿಯೋ,ಅಪಘಾತಕ್ಕೊಳಗಾಗಿಯೇ ಹಲವರು ಮೃತಪಟ್ಟಿದ್ದಾರೆ.

      ಈ ಅಂಶವನ್ನು ಗಮನದಲ್ಲಿಟ್ಟುಕೊಳ್ಳಬೇಕು.ಹಾಗೆಯೇ ಇನ್ನು ಮುಂದೆ ಕಟ್ಟಡ ಕಾರ್ಮಿಕರನ್ನು ಕೆಲಸಕ್ಕೆ ಕರೆದೊಯ್ಯುವವರು ಅವರ ಸುರಕ್ಷಿತ ಪ್ರಯಾಣಕ್ಕೆ ಅನುಕೂಲವಾಗುವಂತೆ ನೋಡಿಕೊಳ್ಳಬೇಕು.ಗಾರ್ಮೆಂಟ್ ನೌಕರರ ಪರಿಸ್ಥಿತಿಯೂ ಇದೇ ರೀತಿ ದಯನೀಯವಾಗಿದ್ದು ಅವರು ಕೂಡಾ ಸಿಕ್ಕ ಸಿಕ್ಕ ವಾಹನಗಳಲ್ಲಿ ಪ್ರಯಾಣ ಮಾಡುವಂತಾಗಿದೆ.ಇದು ಸರಿಯಾಗಬೇಕು.ಹೀಗಾಗಿ ನಿಮ್ಮ ನಿಮ್ಮ ವ್ಯಾಪ್ತಿಯ ಶಾಲೆಗಳು,ಗಾರ್ಮೆಂಟುಗಳು,ಕಟ್ಟಡ ಮಾಲೀಕರ ಸಭೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮುಖ್ಯ ಕಾರ್ಯದರ್ಶಿಗಳು ಆದೇಶ ನೀಡಿದರು.

        ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಇದೇ ಪರಿಸ್ಥಿತಿ ಇದ್ದು ಕಣ್ಣ ಮುಂದೆ ನಡೆಯುವುದನ್ನು ನೋಡಿಕೊಂಡೂ ಸರ್ಕಾರ ಸುಮ್ಮನಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.ಹೀಗಾಗಿ ಮುಂದಿನ ದಿನಗಳಲ್ಲಿ ಇದನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದರು.ಹೊಸ ನಿಯಮಗಳ ಅಳವಡಿಕೆ ಕಡ್ಡಾಯ ಮಾತ್ರವಲ್ಲ,ಸಂಬಂಧಪಟ್ಟವರ ಜತೆ ಚರ್ಚೆ ನಡೆಸಿ ಸೂಕ್ತ ಪರಿಹಾರೋಪಾಯ ಕಂಡುಕೊಳ್ಳುವುದು ಕೂಡಾ ಅನಿವಾರ್ಯ ಎಂದು ಮುಖ್ಯಕಾರ್ಯದರ್ಶಿಗಳು ಸಭೆಯಲ್ಲಿ ಸೂಚನೆ ನೀಡಿದರು.

        ರಾಜ್ಯದ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯ್ತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಜತೆ ಮುಖ್ಯ ಕಾರ್ಯದರ್ಶಿಗಳು ನಡೆಸಿದ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಅಭಿವೃದ್ಧಿ ಆಯುಕ್ತರಾದ ವಂದಿತಾ ಶರ್ಮಾ,ಅಂಜುಂ ಪರ್ವೇಜ್ ಸೇರಿದಂತೆ ಹಲ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link