ಚಳ್ಳಕೆರೆ
ಅಪಾವರಾದ ಜ್ಞಾನ ಸಂಪತ್ತನ್ನು ಹೊಂದಿದ್ದ ರಾಷ್ಟ್ರ ಕವಿ ಕುವೆಂಪುರವರ ಜನ್ಮ ದಿನವನ್ನು ವಿಶ್ವ ಮಾನವ ದಿನವನ್ನಾಗಿ ಆಚರಣೆ ಮಾಡುತ್ತಿರುವ ಸಂತಸದ ವಿಷಯ. ರಾಜ್ಯ ಸರ್ಕಾರ ಈ ಮಹಾನ್ ಕವಿಯ ಸಾಹಿತ್ಯ ಕೊಡುಗೆಗಳನ್ನು ನಾಡಿನ ಪ್ರತಿಯೊಬ್ಬರೂ ಅರಿಯಂತೆ ಮಾಡಲು ಈ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಶಾಸಕ ಟಿ.ರಘುಮೂರ್ತಿ ತಿಳಿಸಿದರು.
ಅವರು, ಶನಿವಾರ ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಮ್ಮಿಕೊಂಡಿದ್ದ ವಿಶ್ವ ಮಾನವ ದಿನಾಚರಣೆ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ, ಕುವೆಂಪುರವರ ಭಾವಚಿತ್ರಕ್ಕೆ ಪುಪ್ಪಾರ್ಚನೆ ಮಾಡಿ ಮಾತನಾಡಿದರು. ಕುವೆಂಪುರವರ ಸಾಹಿತ್ಯದಲ್ಲಿ ಎಲ್ಲಾ ರೀತಿಯ ವಿಶೇಷತೆಗಳಿದ್ದು, ಅವು ಪ್ರತಿಯೊಬ್ಬರ ಬದುಕಿಗೂ ಸ್ಪೂರ್ತಿದಾಯವಾಗಿವೆ. ವಿಶ್ವ ಮಾನವ ಎಂದರೆ ಎಂದಿಗೂ ಯಾರಿಗೂ ಕೆಡಕು ಮಾಡದೆ ಸಮಾಜ ಮುಖಿಯಾಗಿ ಜೀವನ ನಡೆಸುವುದು. ಕನ್ನಡ ಸಾಹಿತ್ಯದ ಅನೇಕ ಮಹಾನ್ ಶ್ರೇಷ್ಠರ ಕೃತಿ ಕಾವ್ಯಗಳನ್ನು ಅಭ್ಯಾಸ ಮಾಡುವುದು. ವಿಶಾಲ ಹೃದಯವನ್ನು ಹೊಂದಿರುವ ಎಲ್ಲಾ ಕನ್ನಡಿಗರು ವಿಶ್ವಮಾನವರೇ ಎಂಬ ಅರ್ಥದಲ್ಲಿ ಅವರ ಸಾಹಿತ್ಯ ಬಿಂಬಿತವಾಗಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ, ಕುವೆಂಪುರವರ ಸಾಹಿತ್ಯದ ಬದುಕು ನಾಡಿನ ಸಮಸ್ತ ಜನತೆಗೆ ಮಾರ್ಗದರ್ಶಿಯಾಗಿದೆ. ವಿಶೇಷವಾಗಿ ಯುವ ಜನರು ಕುವೆಂಪುರವರ ಸಾಹಿತ್ಯವನ್ನು ಅರ್ಥೈಸಿಕೊಳ್ಳಬೇಕಿದೆ. ಅವರು ರಚಿಸಿದ ರಾಮಾಯಣ ದರ್ಶನಂ ಕೃತಿ ಬದುಕಿನ ಮೌಲ್ಯವನ್ನು ಒತ್ತಿ ಹೇಳುತ್ತದೆ ಎಂದರು.
ಕುವೆಂಪುರವರ ಬಗ್ಗೆ ಉಪನ್ಯಾಸ ನೀಡಿದ ಡಾ.ಬಿ.ಎಂ.ಗುರುನಾಥ ಕುವೆಂಪುರವರ ಸಾಹಿತ್ಯ ಕೊಡುಗೆಯನ್ನು ಪ್ರತಿಯೊಬ್ಬ ಕನ್ನಡಿಗರೂ ಅರಿಯಬೇಕಿದೆ. ಇಂದಿನ ಆಧುನಿಕತೆಯ ಭರಾಟೆಯಲ್ಲೂ ಸಹ ಕುವೆಂಪುರವರ ಸಾಹಿತ್ಯದ ಪ್ರಕರ ಕಡಿಮೆಯಾಗಿಲ್ಲ. ಸದಾ ಜೀವಂತಿಕೆಯನ್ನು ಕುವೆಂಪುರವರ ಸಾಹಿತ್ಯದಲ್ಲಿ ನಾವು ಕಾಣಬಹುದಾಗಿದೆ. ಕುವೆಂಪುರವರ ಸಾಹಿತ್ಯವೇ ಕನ್ನಡ ನಾಡಿನ ಪ್ರತಿಯೊಬ್ಬ ಕನ್ನಡಿಗರ ಬೆಳಕು ಎಂದರೆ ತಪ್ಪಾಗಲಾರದು ಎಂದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಕವಿತಾರಾಮಣ್ಣ, ನಗರಸಭಾ ಸದಸ್ಯರಾದ ಬಿ.ಟಿ.ರಮೇಶ್ಗೌಡ, ಸಿ.ಕವಿತಾ, ಓ.ಸುಜಾತ, ಸುಮಕ್ಕ, ಪ್ರಾಂಶುಪಾಲ ಕೃಷ್ಣಪ್ರಸಾದ್, ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶಪ್ಪ, ಉಪನ್ಯಾಸಕರುಗಳಾದ ರವೀಶ್, ವಸಂತಕುಮಾರ್, ನಾಗರಾಜು, ರಾಮಾಂಜನೇಯ, ಬಿಸಿಎಂ ಅಧಿಕಾರಿ ಡಿ.ಟಿ.ಜಗನ್ನಾಥ, ಕಂದಾಯಾಧಿಕಾರಿ ಶರಣಬಸಪ್ಪ, ಗ್ರಾಮ ಲೆಕ್ಕಿಗ ರಾಜೇಶ್, ಡಿ.ಶ್ರೀನಿವಾಸ್, ರಾಘವೇಂದ್ರ ಮುಂತಾದವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
