ಹಿಂದೂ ಧರ್ಮದ ಪುನರುತ್ಥಾನ ಮಾಡೋಣ

ದಾವಣಗೆರೆ:

          ಹಿಂದೂತ್ವವನ್ನು ತೆಗೆದು ಹಿಂದೂ ಧರ್ಮವನ್ನು ಪುನರುತ್ಥಾನ ಮಾಡಬೇಕಾದ ಅಶವ್ಯಕತೆ ಇದೆ ಎಂದು ಸಾಹಿತಿ ಚಂದ್ರಶೇಖರ್ ತಾಳ್ಯ ಪ್ರತಿಪಾದಿಸಿದರು.

          ನಗರದ ಕುವೆಂಪು ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಏರ್ಪಡಿಸಿದ್ದ ರಾಷ್ಟ್ರಕವಿ ಕುವೆಂಪು ಜನ್ಮದಿನ, ಬಿ.ವಿ. ವೀರಭದ್ರಪ್ಪ ಹಾಗೂ ಟಿ.ಗಿರಿಜಾ ಬದುಕು ಬರಹ- ಒಂದು ಚಿಂತನೆ, ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ ಹಾಗೂ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಬಿ.ವಿ. ವೀರಭದ್ರಪ್ಪನವರ ಬದುಕು ಮತ್ತು ಬರಹದಲ್ಲಿ ವೈಚಾರಿಕ ಪ್ರಜ್ಞೆ ಕುರಿತು ಅವರು ಮಾತನಾಡಿದರು.

           ಹಿಂದೂ ಧರ್ಮವನ್ನು ನಾಶಪಡಿಸಿ, ಇಂದು ಹಿಂದೂತ್ವ ವಿಜೃಂಭಿಸುತ್ತಿದೆ. ನಾವು ಹಿಂದೂತ್ವವನ್ನು ತೆಗೆದು, ಹಿಂದೂ ಧರ್ಮ ಪುನರುತ್ಥಾನ ಮಾಡಬೇಕಾದ ಜರೂರತ್ತಿದೆ. ಇದಾಗದಿದ್ದರೆ, ಮೌಢತೆ ಹೆಚ್ಚಾಗಿ ಧರ್ಮ ಇನ್ನೂ ಛಿದ್ರವಾಗುತ್ತಾ ಹೋಗುತ್ತದೆ. ಇದು ಬುದ್ಧ, ಬಸವಣ್ಣ, ಅಂಬೇಡ್ಕರ್ ಅವರುಗಳ ನಿಲುವು ಆಗಿತ್ತು ಎಂದರು.

           ವಿಚಾರವಾದಿ ಬಿ.ವಿ.ವೀರಭದ್ರಪ್ಪನವರ ಬರವಣಿಗೆಯಲ್ಲಿ ಸೂಕ್ಷ್ಮತೆ ಹಾಗೂ ಆಳವಾದ ಗಹನಶಕ್ತಿ ಇರುತ್ತಿತ್ತು. ಅವರು ತಮ್ಮ ಬದುಕಿನಷ್ಟೇ ವೈಚಾರಿಕತೆಯಲ್ಲಿಯೂ ಸರಳತೆ ಹೊಂದಿದ್ದರು. ಅವರ ಬರವಣಿಗೆಯಲ್ಲಿ ಅದ್ಭುತ ವಿಚಾರಗಳು ಅಡಕವಾಗಿರುತ್ತಿದ್ದವು. ಅವರ ಅಶ್ವಮೇಧ ಪುಸ್ತಕದ ಬರವಣಿಗೆಯಲ್ಲಿನ ವಿಚಾರ ಬಹಳಷ್ಟು ವಿವಾದಕ್ಕೆ ಕಾರಣವಾಗುತ್ತಿದೆ. ಆದರೆ, ಅವರು ವಿವಾದ ಹೇರುವುದಿಲ್ಲ. ಈ ರೀತಿ ಇದೆ ಎಂದು ವಾಸ್ತವತೆ ತಿಳಿಸುವ ಪ್ರಯತ್ನ ಮಾಡಿದ್ದಾರಷ್ಟೇ ಎಂದರು.

           ಕೆ.ಎಸ್. ಭಗವಾನ್, ಜಿ.ಕೆ.ಗೋವಿಂದರಾವ್ ಅವರಿಗಿಂತ ವೀರಭದ್ರಪ್ಪನವರು ಮೆಲುಧ್ವನಿಯಲ್ಲಿ ಸ್ಪಷ್ಟವಾಗಿ ಮಾತನಾಡುತ್ತಿದ್ದರು. ಅವರು ಬರೆದಿದ್ದ ವೇದಾಂತ ರೇಜಿಮೆಂಟ್ ಕೃತಿಯ ಅರ್ಥವು ಪ್ರಭುತ್ವ, ಸೈನ್ಯ, ಶಕ್ತಿ ಎಂದು ತಿಳಿಸುತ್ತದೆ. ವೇದಾಂತದಲ್ಲಿ ಭಾರತಕ್ಕೆ ಇಂದು ಸಂವಿಧಾನವಿದೆ. ಪರ್ಯಾಯವಾಗಿ ಧರ್ಮ ಸಂವಿಧಾನವೂ ಇದೆ. ಇದನ್ನು ಕೆಲವರು ಮೌಢ್ಯ ಧರ್ಮ ಸೃಷ್ಟಿಸುವುದಕ್ಕೆ ಬಳಸಿಕೊಳ್ಳುತ್ತಿದ್ದಾರೆಂದು ಆತಂಕ ವ್ಯಕ್ತಪಡಿಸಿದರು.

          ದಿ.ಟಿ.ಗಿರಿಜಾರವರ ಬದುಕು ಮತ್ತು ಬರಹದಲ್ಲಿ ವೈಜ್ಞಾನಿಕ ದೃಷ್ಠಿ ಕುರಿತು ಮಾತನಾಡಿದ ಸಾಹಿತಿ ಡಾ| ಆನಂದ ಋಗ್ವೇದಿ, ಸಾಹಿತಿ, ಚಿಂತಕಿ ಟಿ. ಗಿರಿಜಾ ಅವರು ಅದ್ಭುತ ಸೃಜನಶೀಲ ಬರಹಗಾರ್ತಿಯಾಗಿದ್ದರು. ದೈಹಿಕವಾಗಿ ನ್ಯೂನತೆ ಹೊಂದಿದ್ದರೂ ಸಹ ಮಾನಸಿಕವಾಗಿ ಸದೃಢರಾಗಿದ್ದರು. ಚಿತ್ರದುರ್ಗ ಜಿಲ್ಲೆಯ ಬಗ್ಗೆ ಅನೋನ್ಯತೆ ಇಟ್ಟುಕೊಂಡಿದ್ದರು. ನಂತರ ದಾವಣಗೆರೆಯ ಎಲ್ಲೆಡೆ ಸುತ್ತಾಡಿ ಸುಮಾರು 50 ವರ್ಷಕ್ಕೂ ಹೆಚ್ಚು ಕಾಲ ಮಾಹಿತಿ ಸಂಗ್ರಹಿಸಿ, ಸಂಶೋಧಕಿಯಾಗಿ ಕೆಲಸ ಮಾಡಿ ಇಡೀ ದಾವಣಗೆರೆ ಜಿಲ್ಲೆಯ ಇತಿಹಾಸವನ್ನೇ ಪುಸ್ತಕ ರೂಪದಲ್ಲಿ ಹೊರತಂದರು ಎಂದು ಸ್ಮರಿಸಿದರು.

          ಈ ಸಂದರ್ಭದಲ್ಲಿ ರಂಗಕರ್ಮಿ ಎಸ್.ಎನ್. ರಂಗಸ್ವಾಮಿ, ಸಾಹಿತಿ ಡಾ.ಚಂದ್ರಶೇಖರ್ ತಾಳ್ಯ, ಪತ್ರಕರ್ತೆ ಡಾ| ಮಂಜುಶ್ರೀ ಕಡಕೋಳ ಅವರುಗಳಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಕಸಾಪ ಜಿಲ್ಲಾ ಅಧ್ಯಕ್ಷ ಡಾ . ಎಚ್ . ಎಸ್ . ಮಂಜುನಾಥ್ ಕುರ್ಕಿ , ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಬಿ.ಎನ್. ಮಲ್ಲೇಶ್, ಪರಿಷತ್ ನಿಕಟಪೂರ್ವ ಅಧ್ಯಕ್ಷ ಎ.ಆರ್. ಉಜ್ಜನಪ್ಪ ಮತ್ತಿತರರು ಉಪಸ್ಥಿತರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link