ಬೆಂಗಳೂರು
ಮೊಬೈಲ್ ವಾಪಾಸ್ ಕೊಡಲು ನಿರಾಕರಿಸಿದ ಯುವಕನೊಬ್ಬನ ಹೊಟ್ಟೆಗೆ ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿರುವ ದುರ್ಘಟನೆ ಸಿಟಿ ಮಾರುಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಕೊಲೆಯಾದವರನ್ನು ತುಮಕೂರಿನ ಮರಳೂರು ದಿನ್ನೆಯ ಮೆಹಬೂಬ್ (30)ಎಂದು ಗುರುತಿಸಲಾಗಿದೆ.ಕೃತ್ಯ ಎಸಗಿದ ಸದ್ದಾಂ ಹಾಗೂ ರಿಜ್ವಾನ್ನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ .
ತುಮಕೂರಿನಿಂದ ಸಿಟಿ ಮಾರುಕಟ್ಟೆಗೆ ಆಗಾಗ ಬಂದು ಕೂಲಿ ಕೆಲಸ ಮಾಡುತ್ತಿದ್ದ ಮೆಹಬೂಬ್ ಕೆಲದಿನಗಳ ಹಿಂದೆ ಸದ್ದಾ ಬಳಿ ಮೊಬೈಲ್ ಅನ್ನು ಪಡೆದುಕೊಂಡು ಸ್ವಲ್ಪ ದಿನದಲ್ಲಿ ಹಿಂತಿರುಗಿಸುವುದಾಗಿ ಹೇಳಿದ್ದನು.ಸದ್ದಾಂ ಹಲವು ಮೊಬೈಲ್ ಬಾರಿ ಕೇಳಿದರೂ ಇಲ್ಲಸಲ್ಲದ ಸಬೂಬು ಹೇಳುತ್ತಿದ್ದ ಮೆಹಬೂಬ್ನ ವರ್ತನೆಯಿಂದ ಸದ್ದಾ ಹಾಗೂ ಆತನ ಸ್ನೇಹಿತ ರಿಜ್ವಾನ್ ಆಕ್ರೋಶಗೊಂಡಿದ್ದರು.
ಸಿಟಿ ಮಾರುಕಟ್ಟೆಯ ಜಾಮಿಯಾ ಮಸೀದಿ ಬಳಿಯ ಬಿಎಂಟಿಸಿ ಬಸ್ ನಿಲ್ದಾಣದ ಬಳಿ ಗುರುವಾರ ಮಧ್ಯಾಹ್ನ 2.30ರ ವೇಳೆ ಎದುರಾದ ಮೆಹಬೂಬ್ಗೆ ಸದ್ದಾಂ ಹಾಗೂ ರಿಜ್ವಾನ್ ಮೊಬೈಲ್ ವಾಪಾಸ್ ಕೊಡುವಂತೆ ಕೇಳಿದ್ದಾರೆ. ಆದರೆ ಮೊಬೈಲ್ ಕೊಡಲು ನಿರಾಕರಿಸಿದಾಗ ಜಗಳ ಉಂಟಾಗಿದೆ.
ಜಗಳ ವಿಕೋಪಕ್ಕೆ ತಿರುಗಿದಾಗ ರಿಜ್ವಾನ್ ಚಾಕುವಿನಿಂದ ಮೆಹಬೂಬ್ ಹೊಟ್ಟೆಗೆ ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಕೂಡಲೇ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ, ರಾತ್ರಿ 8.30ರ ವೇಳೆ ಮೃತಪಟ್ಟಿದ್ದಾರೆ.ಪ್ರಕರಣ ದಾಖಲಿಸಿರುವ ಸಿಟಿ ಮಾರುಕಟ್ಟೆ ಪೊಲೀಸರು, ಕೃತ್ಯ ಎಸಗಿದ ಇಬ್ಬರು ಆರೋಪಿ ಗಳನ್ನು ವಶಕ್ಕೆ ತೆಗೆದುಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ರಮೇಶ್ ಬನ್ನೋತ್ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








