ದಾವಣಗೆರೆ:
ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗದ ಕಾಮಗಾರಿಯನ್ನು ತಕ್ಷಣವೇ ಆರಂಭಿಸಬೇಕೆಂದು ಒತ್ತಾಯಿಸಿ, ನೈರುತ್ಯ ರೈಲ್ವೆ ವಲಯ ಪ್ರಯಾಣಿಕರ ಸಂಘವು ಕೇಂದ್ರ ರೈಲ್ವೆ ಮಂತಿ ಪಿಯೂಷ್ ಗೋಯೆಲ್ ಹಾಗೂ ರೈಲ್ವೆ ಬೋರ್ಡ್ ಛೇರ್ಮನ್ ಅಶ್ವನಿ ಲೋಹನಿ ಅವರಿಗೆ ಪತ್ರ ಬರೆದಿದೆ.
ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗದಿಂದಾಗಿ ಬೆಂಗಳೂರಿನಿಂದ ದಾವಣಗೆರೆ, ಹುಬ್ಬಳ್ಳಿ, ಬೆಳಗಾವಿ, ಗದಗ ಮತ್ತು ವಿಜಯಪುರ ಅಂತರವನ್ನು ಸುಮಾರು 65 ಕಿ.ಮೀ.ಯಷ್ಟು ಕಡಿಮೆ ಮಾಡಲಿದೆ. ಈಗಾಗಲೇ ಮಾರ್ಗದ ಅಂತಿಮ ಸಮೀಕ್ಷೆ ಮುಗಿದಿದ್ದು, ತಕ್ಷಣವೇ ಕಾಮಗಾರಿಯನ್ನು ಆರಂಭಿಸಬೇಕೆಂದು ಪತ್ರದಲ್ಲಿ ಸಂಘದ ರೋಹಿತ್ ಜೈನ್ ಒತ್ತಾಯಿಸಿದಾರೆ.
ಈ ಮಾರ್ಗ ನಿರ್ಮಾಣವಾದರೆ, ಬೆಂಗಳೂರಿನಿಂದ ಚಿತ್ರದುರ್ಗಕ್ಕೆ 110 ಕಿ.ಮೀ. ಅಂತರ ಕಡಿಮೆಯಾಗಲಿದೆ. ಸಿರಾ ಮತ್ತು ಹಿರಿಯೂರು ಹೊಸ ಸ್ಥಳಗಳು ರೈಲು ಸಂಪರ್ಕವನ್ನು ಪಡೆಯಲಿವೆ. ಬೆಂಗಳೂರು-ಅರಸೀಕೆರೆ-ಶಿವಮೊಗ್ಗ ಮಾರ್ಗದಲ್ಲಿ ಶೇ.50 ರಷ್ಟು ರೈಲು ಸಂಚಾರ ಕಡಿಮೆಯಾಗಲಿದೆ. ಅಲ್ಲದೇ, ಶಿವಮೊಗ್ಗಕ್ಕೆ ಬೆಂಗಳೂರಿನಿಂದ ಹೆಚ್ಚು ಪ್ಯಾಸೆಂಜರ್ ರೈಲುಗಳನ್ನು ಓಡಿಸಬಹುದು.
ಬೆಂಗಳೂರಿನಿಂದ, ಬೆಳಗಾವಿ ಮತ್ತು ಬಿಜಾಪುರ ನಡುವಿನ ಅಸ್ತಿತ್ವದಲ್ಲಿರುವ ಮಾರ್ಗಗಳಲ್ಲಿ ಸಂಚಾರ ಕನಿಷ್ಠ ಶೇ.35 ರಷ್ಟು ಕಡಿಮೆಯಾಗಲಿದೆ. ಆದ್ದರಿಂದ ಪ್ರಸ್ತುತ ಹರಿಹರ-ಬೀರೂರು-ಅರಸೀಕೆರೆ ರೈಲ್ವೆ ಮಾರ್ಗದಲ್ಲಿ ದಟ್ಟಣೆ ಕಡಿಮೆಯಾಗಲಿದೆ. ಹೆಚ್ಚಿನ ಸರಕು ಸಾಗಣೆ ಮಾಡಬಹುದು. ಪ್ರಯಾಣದ ದೂರ ಕಡಿಮೆಯಾಗುವುದರಿಂದ ಇಂಧನ ಮತ್ತು ಸಾಕಷ್ಟು ಪ್ರಯಾಣ ಸಮಯ ಉಳಿಸಬಹುದಾಗಿದೆ.
ಆದ್ದರಿಂದ ಈ ನೇರ ರೈಲು ಮಾರ್ಗದ ಕಾಮಗಾರಿಯನ್ನು ತಕ್ಷಣವೇ ಆರಂಭಿಸಬೇಕೆಂದು ಅವರು ಪತ್ರದಲ್ಲಿ ಮನವಿ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
