ಬೆಂಗಳೂರು
ರಾಜ್ಯದಲ್ಲಿ 2018ನೇ ಸಾಲಿನಲ್ಲಿ ಮನೆಬಿಟ್ಟು ಬಂದ ಇಲ್ಲವೇ ಆನಾಥರಾಗಿದ್ದ ಬರೋಬ್ಬರಿ 1,299 ಮಕ್ಕಳನ್ನು ರಕ್ಷಣೆ ಮಾಡಿ ಶಿಕ್ಷಣ ವಸತಿ ಇನ್ನಿತರ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ರೈಲ್ವೆ ಇಲಾಖೆ ರಕ್ಷಣಾ ಪಡೆಯ ಪ್ರಧಾನ ಕಾರ್ಯದರ್ಶಿ ಡಿ.ಬಿ.ಕಾಸರ್ ಪ್ರಕಟಿಸಿದರು.
ನಗರದಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಭಾರತೀಯ ರೈಲ್ವೆ ಇಲಾಖೆಯು ಶನಿವಾರ ಆಯೋಜಿಸಿದ್ದ ನಾಪತ್ತೆಯಾದ ಮಕ್ಕಳ ಅಂತಾರಾಷ್ಟ್ರೀಯ ದಿನಾಚರಣೆಯಲ್ಲಿ ನಡೆದ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು,2018ರಲ್ಲಿ ಬೆಂಗಳೂರಿನಲ್ಲಿ 523, ಮೈಸೂರು 286, ಹುಬ್ಬಳ್ಳಿ 490 ಸೇರಿದಂತೆ 1299 ಮಕ್ಕಳ ರಕ್ಷಣೆ ಮಾಡಲಾಗಿದೆ ಎಂದರು.
ಹಿಂದಿನ ಸಾಲಿನಲ್ಲಿ 1074 ಮಕ್ಕಳನ್ನು ರಕ್ಷಣೆ ಮಾಡಲಾಗಿತ್ತು ಕಾಣೆಯಾದ ಮಕ್ಕಳ ಮನವೊಲಿಸುವ ಮೂಲಕ ಮಕ್ಕಳ ಕಳ್ಳ ಸಾಗಣಿಕೆ ನಡೆಯುತ್ತಿದೆ. ಕೆಲ ವಿಚಾರಗಳಿಗೆ ಬೇಸರಗೊಂಡ ಮನೆಯಿಂದ ಹೊರಬಂದ ಮಕ್ಕಳು ಮಾರಾಟವಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಹೀಗೆ ಮಾರಾಟವಾದ ಮಕ್ಕಳನ್ನು ಕಾರ್ಖಾನೆ, ಬಾರ್, ಹೋಟೆಲ್ಗಳಲ್ಲಿ ದುಡಿಸಿಕೊಳ್ಳಲಾಗುತ್ತಿದೆ. ತಪ್ಪಿಸಿಕೊಂಡ ಮಕ್ಕಳು ಸಹಾಯವಾಣಿಗೆ (1098) ಅಥವಾ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದು ಸಲಹೆ ನೀಡಿದರು.ಮಕ್ಕಳು ಕಾಣೆಯಾದಾಗ ಪೋಷಕರು ಮಕ್ಕಳು ಬ್ಯೂರೊಗೆ ಮಾಹಿತಿ ನೀಡಬೇಕು ಎಂದ ಅವರು, ಮಕ್ಕಳು ಕಾಣೆಯಾದ ನಂತರ ಬಹಳಷ್ಟು ಸಮಸ್ಯೆ ಉದ್ಬವಿಸುತ್ತವೆ. ಅಪರಿಚಿತರು ಕರೆದಾಗ ಮಕ್ಕಳು ಹೋಗಬಾರದು ಎಂದು ಹೇಳಿದರು.ಈ ಸಂದರ್ಭದಲ್ಲಿ ಬೆಂಗಳೂರು ರೈಲ್ವೆ ವಿಭಾಗದ ವ್ಯವಸ್ಥಾಪಕ ಅಶೋಕ್ ವರ್ಮಾ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.