ಓಬಿಸಿಯಲ್ಲಿ ಕುಂಚಿಟಿಗ ಜಾತಿಗೆ ಮಾನ್ಯತೆ ಅಗತ್ಯ

ಶಿರಾ

       30 ವರ್ಷಗಳಿಂದ ನಿರಂತರ ಪ್ರಯತ್ನ ಮಾಡಿದರೂ ಸಹ ಕೇಂದ್ರ ಸರ್ಕಾರ ಕುಂಚಿಟಿಗ ಸಮುದಾಯಕ್ಕೆ ಓಬಿಸಿಯಲ್ಲಿ ಮೀಸಲಾತಿ ನೀಡದ ಕಾರಣ, ಸಮುದಾಯದಲ್ಲಿ ಉತ್ತಮ ಪ್ರತಿಭೆಗಳಿದ್ದರೂ ಐಎಎಸ್, ಐಪಿಎಸ್ ಪದವಿ ಪಡೆಯಲು ಸಾಧ್ಯವಾಗಿಲ್ಲ. ಓಬಿಸಿಯಲ್ಲಿ ಕುಂಚಿಟಿಗ ಜಾತಿಗೆ ಮಾನ್ಯತೆ ಅಗತ್ಯವಾಗಿದೆ ಎಂದು ಮಾಜಿ ಸಚಿವ ಟಿ.ಬಿ.ಜಯಚಂದ್ರ ಹೇಳಿದರು.

       ಶಿರಾ ತಾಲ್ಲೂಕಿನ ಗೌಡಗೆರೆ ಹೋಬಳಿಯ ಸಿದ್ದಾಪುರ ಗ್ರಾಮದಲ್ಲಿ ಬುಧವಾರ ನಡೆದ ಶ್ರೀಕೊಲ್ಲಾಪುರದಮ್ಮ ದೇವಿ ಕಳಶ ಪ್ರತಿಷ್ಠಾಪನೆ ಮರುಪೂಜೆ ಉತ್ಸವ ಹಾಗೂ ಲೋಕ ಕಲ್ಯಾಣಾರ್ಥ ಹೋಮ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಒಕ್ಕಲಿಗ, ಮರಸು ಒಕ್ಕಲಿಗ, ಗಂಗಟಕಾರ, ಹಳ್ಳಿಕಾರ ಒಕ್ಕಲಿಗ ರೀತಿಯಲ್ಲಿ ಕುಂಚಿಟಿಗ ಜಾತಿಯಿದ್ದು, ಕಳೆದ ವರ್ಷ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದಲ್ಲಿ ಕುಲ ಅಧ್ಯಯನ ಸಮಿತಿ ರಚನೆ ಮಾಡಿ ಕುಂಚಿಟಿಗ ಜಾತಿಯ ಬಗ್ಗೆ ಸಂಪೂರ್ಣ ವರದಿ ಪಡೆಯಲಾಗಿದೆ.

       ಕೇಂದ್ರ ಸರ್ಕಾರ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗ(ಎನ್‍ಸಿಬಿಸಿ) ರಚನೆ ಮಾಡಿದ್ದು ಸಾಂವಿಧಾನಿಕ ಸ್ಥಾನಮಾನ ಈ ಆಯೋಗ ನೀಡಿದೆ. ಇದಕ್ಕೆ ಸಂಬಂಧ ಪಟ್ಟಂತೆ ಕೇಂದ್ರ ಸರ್ಕಾರದ ಅಧಿಕಾರಿಗಳನ್ನು ಭೇಟಿ ಮಾಡಿ ಕುಂಚಿಟಿಗ ಜಾತಿಯ ಬಗ್ಗೆ ಮನವರಿಕೆ ಮಾಡಲಾಗಿದೆ. ಶೀಘ್ರವೇ ಓಬಿಸಿಯಲ್ಲಿ ಕುಂಚಿಟಿಗ ಜಾತಿಗೆ ಮಾನ್ಯತೆ ಸಿಗುವ ವಿಶ್ವಾಸವಿದೆ ಎಂದು ಮಾಜಿ ಸಚಿವ ಟಿ.ಬಿ.ಜಯಚಂದ್ರ ಹೇಳಿದರು.

       ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗ (ಎನ್‍ಸಿಬಿಸಿ) ರಚನೆ ಮಾಡಿ, ಸಾಂವಿಧಾನಿಕ ಸ್ಥಾನ ನೀಡಿರುವ ಕೇಂದ್ರ ಸರ್ಕಾರ ಇದಕ್ಕೆ ಅಧ್ಯಕ್ಷರನ್ನು ತಕ್ಷಣ ನೇಮಿಸಿ, ಕುಂಚಿಟಿಗ ಜಾತಿಯನ್ನು ತಕ್ಷಣ ಓಬಿಸಿಗೆ ಸೇರಿಸಬೇಕು ಎಂದು ಆಗ್ರಹಿಸಿದ ಮಾಜಿ ಸಚಿವ ಟಿ.ಬಿ.ಜಯಚಂದ್ರ, ಗ್ರಾಮೀಣ ಪ್ರದೇಶದಲ್ಲಿ ಕಷ್ಟಪಟ್ಟು ಭವ್ಯ ದೇವಸ್ಥಾನ ಕಟ್ಟುತ್ತೇವೆ. ಅಂತಹ ದೇವಸ್ಥಾನಗಳಲ್ಲಿ ನಿತ್ಯ ಪೂಜೆ, ಭಜನೆ ಸೇರಿದಂತೆ ಹಲವಾರು ರೀತಿ ಧಾರ್ಮಿಕ ಕಾರ್ಯಕ್ರಮಗಳು ನಡೆದಾಗ ಹಳ್ಳಿಗಳ ಸಾಂಸ್ಕತಿಕ ವೈಭವ ಮರುಕಳಿಸಲು ಸಾಧ್ಯ. ಆಡಂಬರದಿಂದ ದೇವರು ತೃಪ್ತನಾಗುವುದಿಲ್ಲ. ಹೃದಯದಿಂದ ಭಗವಂತನನ್ನು ಆರಾಧಿಸಿದರೆ ಇಷ್ಟಾರ್ಥ ಸಿದ್ದಿಸಲಿದ್ದು, ನಿಮ್ಮ ಮಕ್ಕಳ ಭವಿಷ್ಯ ಕೂಡ ಉಜ್ವಲಗೊಳ್ಳಲಿದೆ ಎಂದರು.

      ಮುಖಂಡರಾದ ಪುಟ್ಟಜುಂಜೇಗೌಡ, ಓದಕರಿಯಪ್ಪ, ಯುವ ಮುಖಂಡ ಮಂಜುನಾಥ್, ಶ್ರೀನಿವಾಸ್, ನರಸಿಂಹರಾಜು, ಪುಟ್ಟಜುಂಜಯ್ಯ, ಹಾಲಪ್ಪ, ಕುಮಾರ್, ಹನುಮಂತಪ್ಪ, ಪ್ರಧಾನ ಅರ್ಚಕ ಲಕ್ಷ್ಮೀನರಸಿಂಹನ್ ಸೇರಿದಂತೆ ಹಲವಾರು ಮುಖಂಡರು ಭಾಗವಹಿಸಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link