ನಾಗ್ಬುರ
ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಸ್ಫೋಟಕ್ಕೆ ಸಂಬಂಧಿಸಿ ನಗರದ ಪೊಲೀಸರು 18 ನಕ್ಸಲರ ವಿರುದ್ಧ ಭಾನುವಾರ ಎಫ್ಐಆರ್ ದಾಖಲಿಸಿದ್ದಾರೆ. ಮೇ 1 ರಂದು ನಡೆದ ಈ ಘಟನೆಯಲ್ಲಿ 15 ಪೊಲೀಸ್ ಸಿಬ್ಬಂದಿ ಮತ್ತು ವಾಹನ ಚಾಲಕ ಮೃತಪಟ್ಟಿದ್ದರು. ಈ ಸಂಬಂಧ ನಗರದ ಪುರದಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಕಳೆದ ವಾರ ಬುಧವಾರ ಗಡ್ಚಿರೋಲಿ ಜಿಲ್ಲೆಯ ಕುರ್ಖೇದಾ ತಾಲ್ಲೂಕಿನ ಜಂಬುಲ್ ಖೇಡಾ ಹಳ್ಳಿಯ ಬಳಿ ನಕ್ಸಲರು ಪೊಲೀಸರಿದ್ದ ವಾಹನವನ್ನು ಸ್ಫೋಟಿಸಿದ್ದು, ಘಟನೆಯಲ್ಲಿ ಕ್ಷಿಪ್ರ ನಿರ್ವಹಣಾ ತಂಡದ ಹದಿನೈದು ಪೊಲೀಸರು ಹಾಗೂ ನಾಗರಿಕ ವಾಹನ ಚಾಲಕ ಮೃತಪಟ್ಟಿದ್ದರು.
ಎಫ್ಐಆರ್ ದಾಖಲಿಸಲಾದ 18 ಜನರಲ್ಲಿ ನಂಬಲ ಕೇಶವ ರಾವ್, ಗಣಪತಿ, ವೇಣುಗೋಪಾಲ್, ಸುದರ್ಶನ್, ಭಾಸ್ಕರ್ ಹಿಚ್ಕಾನಿ, ಪ್ರಭಾಕರ್ ಮತ್ತು ಮಿಲಿಂದ್ ತೆಲ್ತುಂಬ್ಡೆ ಸೇರಿದ್ದಾರೆ. ಎಲ್ಲರ ವಿರುದ್ಧ ಐಪಿಸಿ ಸೆಕ್ಷನ್ 302, 353,143, 147,148 ಮತ್ತು 427 ರಡಿ ಪ್ರಕರಣ ದಾಖಲಿಸಲಾಗಿದೆ.
ನಕ್ಸಲ್ ಮುಖಂಡರಿಗಾಗಿ ಜಿಲ್ಲೆಯಾದ್ಯಂತ ವ್ಯಾಪಕ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಗಡ್ಚಿರೋಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈಲೇಶ್ ಬಾಲ್ಕವಾಡೆ ತಿಳಿಸಿದ್ದಾರೆ. ಮುಂದಿನ ಎರಡು ದಿನಗಳಲ್ಲಿ ಐಎಡಿ ಸ್ಫೋಟ ಘಟನೆ ಕುರಿತಂತೆ ತನಿಖೆ ಆರಂಭವಾಗುವ ನಿರೀಕ್ಷೆಯಿದೆ ಎಂದು ತಿಳಿಸಿದ್ದಾರೆ.
ನಕ್ಸಲ್ ಹೊಂಚುದಾಳಿಯ ಬಗ್ಗೆ ತನಿಖೆ ಮಾಡಲು ಹಲವಾರು ತಂಡಗಳನ್ನು ರಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.
2017 ರಡಿಸೆಂಬರ್ 31ರಂದು ಪುಣೆ ಸಮೀಪದ ಭೀಮಾ ಕೊರೆಗಾಂವ್ನಲ್ಲಿ ಎಲ್ಗಾರ್ ಪರಿಷತ್ ಹಮ್ಮಿಕೊಂಡಿದ್ದ ಸಮಾವೇಶದ ವೇಳೆ ಉಂಟಾದ ಹಿಂಸಾಚಾರಕ್ಕೆ ಸಂಬಂಧಿಸಿ ದಾಖಲಾಗಿದ್ದ ಪ್ರಕರಣದಲ್ಲಿ ತೆಲ್ತುಂಬ್ಡೆ ಸಹ ಬೇಕಾಗಿದ್ದಾನೆ .ಸ್ಫೋಟ ಘಟನೆಯ ತನಿಖೆಯು ಘಟನೆ ನಡೆದ ಹಿಂದಿನ ದಿನ 36 ವಾಹನಗಳನ್ನು ನಕ್ಸಲರು ಸುಟ್ಟು ಹಾಕಿದ ಪ್ರಕರಣ ಸೇರಿದಂತೆ ಅನೇಕ ಆಯಾಮಗಳ ಬಗ್ಗೆ ಪರಿಶೀಲಿಸಲಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








