ತಿಪಟೂರು :
ನಗರಸಭೆ ಚುನಾವಣೆಯ ವೇಳೆ ಅತ್ತ ನಗರಸಭೆಗೂ ಸೇರದೇ ಇತ್ತ ಗ್ರಾಪಂಗೂ ಸೇರದೇ ನಡುವಂತರದಲ್ಲಿ ಹುಚ್ಚಗೊಂಡನಹಳ್ಳಿ ಗ್ರಾಪಂ ವ್ಯಾಪ್ತಿಗೆ ಸೇರಿದ ಕಲ್ಕೆಳೆ (ಕೆಂಚರಾಯನಗರ) ಯಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗಿ ಗ್ರಾಪಂ ಕಚೇರಿ ಮುಂದೆ ಖಾಲಿ ಕೊಡಗಳನ್ನಿಟ್ಟು ಸಾರ್ವಜನಿಕರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಗ್ರಾಮದಲ್ಲಿ ಕಳೆದ 15 ದಿನಗಳಿಂದ ಕುಡಿಯುವ ನೀರಿಲ್ಲದೆ ಜನ-ಜಾನುವಾರುಗಳು ಪರಿತಪಿಸುತ್ತಿದ್ದು ಈ ಬಗ್ಗೆ ಸಂಬಂಧಿಸಿದ ಪಿಡಿಓ ಹಾಗೂ ಪಂಚಾಯಿತಿಯ ಅಧ್ಯಕ್ಷರು ಹಾಗೂ ಸದಸ್ಯರ ಗಮನಕ್ಕೆ ತಂದರೂ ಇದುವರೆಗೆ ನೀರು ಬಿಟ್ಟಲ್ಲ. ನಾವು ಕುಡಿಯುವ ನೀರನ್ನು 3 ಕಿ.ಮೀ ದೂರದಿಂದ ತರುವ ಪರಿಸ್ಥಿತಿಯನ್ನು ಗ್ರಾಪಂ ತಂದೊಡ್ಡಿದೆ. ಜನರು ಕುಡಿಯುವ ನೀರಿಗೆ ತೀವ್ರ ಸಂಕಷ್ಟ ಎದುರಿಸುತ್ತಿರುವುದು ಗೊತ್ತಿದ್ದರೂ ಜಾಣ ಕುರುಡು ಪ್ರದರ್ಶಿಸುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿ ಬೆಸತ್ತ ಗ್ರಾಮದ ಮಹಿಳೆಯರು ಪಂಚಾಯಿತಿ ಮುಂದೆ ಖಾಲಿ ಕೊಡಗಳೊಂದಿಗೆ ಆಗಮಿಸಿ ಪ್ರತಿಭಟನೆಯನ್ನು ನಡೆಸಿದರು.
ಮಹಿಳೆಯರ ಪ್ರತಿಭಟನೆಯ ಕಾವು ತೀವ್ರ ಸ್ವರೂಪ ಪಡೆದುಕೊಳ್ಳುವುದನ್ನು ಅರಿತ ಗ್ರಾಪಂ ಅಧಿಕಾರಿಗಳು ತರಾತುರಿಯಲ್ಲಿ ವಾಟರ್ ಮ್ಯಾನ್ಗಳನ್ನು, ರಿಪೇರಿಯವರನ್ನು ಕರೆಸಿ ನೀರಿನ ಸಮಸ್ಯೆಯನ್ನು ಸರಿಪಡಿಸಿ ಪ್ರತಿಭಟನೆಯ ದಿವವೇ ಗ್ರಾಮಕ್ಕೆ ಕುಡಿಯುವ ನೀರು ಬಿಟ್ಟರು.
ಕುಡಿಯುವ ನೀರಿನ ಪೈಪ್ಲೈನ್ ದುರಸ್ತಿಗೊಳಿಸಿ ಸಿಸ್ಟನ್ಗೆ ನೀರು ಬಿಟ್ಟಿದ್ದು, ಅವಶ್ಯವಿರುವ ಬಾಕಿ ಪೈಪ್ಲೈನ್ ಕಾಮಗಾರಿ ಮುಗಿಸಿ ಮುಂದಿನ ದಿನಗಳಲ್ಲಿ ಜನರ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗುವುದು.
-ಉಮೇಶ್, ಹುಚ್ಚಗೊಂಡನಹಳ್ಳಿ ಪಿಡಿಓ
