ಮದಲೂರು ಕೆರೆಗೆ ನೀರು ಹರಿಸಲು ಬೇಕಿರುವುದು ಪುರುಷತ್ವವೋ? ಇಚ್ಚಾಶಕ್ತಿಯೋ?

  ತುಮಕೂರು :

      ಶಿರಾ ಉಪಚುನಾವಣೆಯಲ್ಲಿ ಪ್ರಮುಖವಾಗಿ ಪ್ರಸ್ತಾಪವಾದ ಮದಲೂರು ಕೆರೆಗೆ ನೀರು ಹರಿಸುವ ವಿಷಯ ಚುನಾವಣೆ ಮುಗಿದು ವರ್ಷ ಕಳೆಯುವಷ್ಟರಲ್ಲೇ ಆಡಳಿತ-ವಿಪಕ್ಷ ನಾಯಕರ ನಡುವೆ ಮಾತಿನ ಜಟಾಪಟಿ, ಅಲೋಕೇಷನ್ ವಿಷಯವಾಗಿ ಹಾಲಿ ಮಾಜಿ ಸಚಿವರಿಂದ ಗಂಡಸ್‍ತನದ ಸವಾಲಿನ ಪದಗಳೆಲ್ಲ ಪ್ರಯೋಗವೆಲ್ಲವಾಗಿರುವುದು, ಸಾರ್ವಜನಿಕವಾಗಿ ಚರ್ಚೆ, ಟೀಕೆಗೆ ಗುರಿಯಾಗಿದ್ದು, ಚುನಾವಣೆ ವೇಳೆ ಕೊಟ್ಟ ಭರವಸೆಯಂತೆ ಮದಲೂರು ಕೆರೆಗೆ ನೀರು ಹರಿಸಲು ಜನಪ್ರತಿನಿಧಿಗಳಿಗೆ ಬೇಕಿರುವುದು ಇಚ್ಛಾಶಕ್ತಿಯೋ, ಅಧಿಕೃತ ಆದೇಶವೋ, ಪುರುಷತ್ವವೋ ಎಂದು ಜನರೇ ಪ್ರಶ್ನಿಸುವಂತೆ ಮಾಡಿದೆ.

      ಹಾಲಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಕಾವೇರಿ ಟ್ರಿಬ್ಯೂನಲ್‍ನಲ್ಲಿ ಮದಲೂರು ಕೆರೆಗೆ ಒಂದು ಹನಿ ನೀರು ಸಹ ಅಲೋಕೇಷನ್ ಆಗಿಲ್ಲ. ಅಲೋಕೇಷನ್ ಆಗದೆ ನೀರು ಹರಿಸಿದರೆ ಅಪರಾಧಿ ಸ್ಥಾನದಲ್ಲಿ ಸರಕಾರ, ಅಧಿಕಾರಿಗಳು ನಿಲ್ಲಬೇಕಾಗುತ್ತದೆ ಎಂದು ಟ್ರಿಬ್ಯೂನಲ್ ತೀರ್ಪಿನ ಕಾನೂನಿನ ಅಂಶವನ್ನು ಮುಂದಿಟ್ಟು ಕಾನೂನು ಬಿಟ್ಟು ಯಾವುದೇ ಒತ್ತಡಕ್ಕೂ ಮಣಿಯಲಾರೆ. ಕಳೆದ ಬಾರಿ ಚಿ.ನಾ.ಹಳ್ಳಿ ನೀರನ್ನು ಡೈವರ್ಟ್ ಮಾಡಿ ಬಿಡಲಾಗಿತ್ತು ಎಂದು ಖಡಾಖಂಡಿತವಾಗಿ ಹೇಳಿದ್ದಾರೆ.

      ಮಾಜಿ ಸಚಿವ ಟಿ.ಬಿ. ಜಯಚಂದ್ರ ಅವರು ಮದಲೂರು ಕೆರೆಗೆ ಹೇಮಾವತಿ ನೀರು ಹಂಚಿಕೆಯಾಗಿದೆ. ಹೈಕೋರ್ಟ್ ಆದೇಶವೂ ಇದೆ. 2017ರಲ್ಲೇ ನೀರು ಬಿಟ್ಟಿದ್ದೇವೆ. ನೈಸರ್ಗಿಕವಾಗಿ ಹರಿಯುವ ನೀರಿಗೆ ಯಾವ ದೊಣ್ಣೆ ನಾಯಕನ ಅಪ್ಪಣೆ ಬೇಕಿಲ್ಲ. ಚುನಾವಣೆಯಲ್ಲಿ ಕೊಟ್ಟ ಆಶ್ವಾಸನೆಯಂತೆ ಮೊದಲು ನೀರು ತುಂಬಿಸಿ ಎಂದಿದ್ದಾರೆ. ನೀರು ಕೇಳುತ್ತಿರುವುದು ನಮ್ಮ ಹಕ್ಕೇ ಹೊರತು ಭಿಕ್ಷೆಯಲ್ಲ ಎಂದು ಆಗ್ರಹಿಸಿದ್ದಾರೆ. ಈ ಆಗ್ರಹ, ಪ್ರತಿಕ್ರಿಯೆ ವ್ಯಕ್ತಪಡಿಸುವಿಕೆಯಲ್ಲಿ ಹಾಲಿ-ಮಾಜಿ ಸಚಿವರಿಬ್ಬರು ಪರಸ್ಪರ ಗಂಡಸುತನದ ಸವಾಲುಗಳನ್ನು ಹಾಕಿರುವುದು ಸಾರ್ವಜನಿಕವಾಗಿ ವ್ಯಾಪಕ ಚರ್ಚೆಗೀಡಾಗಿರುವ ಜೊತೆಗೆ ಸಾಕಷ್ಟು ಟ್ರೋಲ್ ಆಗಿದೆ.

     ಒಬ್ಬರು ಮಾಜಿ ಕಾನೂನು ಸಚಿವರು, ಮತ್ತೊಬ್ಬರು ಹಾಲಿ ಕಾನೂನು ಸಚಿವರು ಇಂತಹ ಅಸಂಸದೀಯ ಪದಗಳನ್ನು ಬಳಸಬೇಕೇ? ನೀರು ಹರಿಸಲು ಬೇಕಿರುವುದು ಇಚ್ಚಾಶಕ್ತಿ, ಕಾನೂನಿನ ಅಡಚಣೆಗಳ ನಿವಾರಣೆ ಹೊರತು, ಪುರುಷತ್ವವಲ್ಲವೆಂಬ ಕಾಮೆಂಟ್‍ಗಳು ಜಾಲತಾಣಗಳಲ್ಲಿ ಹಾಕಿ ಜನ ಪ್ರಶ್ನಿಸುತ್ತಿದ್ದಾರೆ. ಈ ಇಬ್ಬರು ಹಾಲಿ-ಮಾಜಿ ಸಚಿವರ ಹೇಳಿಕೆ-ಪ್ರತಿಹೇಳಿಕೆಗಳಿಂದ ನೀರು ಬರುತ್ತದೆಯೋ ಇಲ್ಲವೋ ಎಂಬ ಆತಂಕಕ್ಕೊಳಗಾಗುವ ಸರದಿ ಮದಲೂರು ಭಾಗದ ಜನರದ್ದಾಗಿದೆ. ಏತನ್ಮಧ್ಯೆ ಜಿಲ್ಲೆಯ ಸಚಿವರ ಹೇಳಿಕೆಯನ್ನು ಸಮರ್ಥಿಸಿಕೊಳ್ಳುವುದೋ? ಮಾಜಿ ಸಚಿವರ ಪ್ರಶ್ನೆಗಳಿಗೆ ಪ್ರತ್ಯುತ್ತರ ಕೊಡುವುದೋ? ಜನರಿಗೆ ಹೇಗೆ ಉತ್ತರಿಸುವುದು ಎಂಬ ಜಿಜ್ಞಾಸೆಯಲ್ಲಿ ಸಿರಾ ಶಾಸಕ ಸಿ.ಎಂ.ರಾಜೇಶ್‍ಗೌಡ ಅವರು ಸಹ ಒದ್ದಾಡುವಂತಾಗಿದೆ.

     ವಾಸ್ತವ ಏನು? ಜನರಲ್ಲಿ ಗೊಂದಲ:

      ಮದಲೂರು ಕೆರೆಗೆ ನೀರು ಹರಿಸುವ ವಿಚಾರವಾಗಿ ಆಡಳಿತ –ವಿಪಕ್ಷ ಜನಪ್ರತಿನಿಧಿಗಳ ಹೇಳಿಕೆಗಳಿಂದ ಕೆರೆಗೆ ನೀರು ಹರಿಯುತ್ತದೋ ಇಲ್ಲವೋ ಎಂಬ ಬಗ್ಗೆ ಸಿರಾ, ಮದಲೂರು ಭಾಗದ ಜನ ಗೊಂದಲಕ್ಕೀಡಾಗಿದ್ದು, ವಾಸ್ತವ ಏನು ಎಂಬುದರ ಬಗ್ಗೆ ಸ್ಪಷ್ಟತೆಯೇ ಇಲ್ಲದಂತಾಗಿದೆ. 2017-18ರಲ್ಲಿ ಪ್ರಯೋಗಾತ್ಮಕವಾಗಿ, 2020ರಲ್ಲೂ ಕೆರೆಗೆ ನೀರು ಬಿಟ್ಟಂತೆ ಈ ಬಾರಿಯೂ ಬಿಡಬೇಕು. ಉಪಚುನಾವಣೆಯಲ್ಲಿ ಆಗಿನ ಮುಖ್ಯಮಂತ್ರಿಗಳು ಕೊಟ್ಟ ಮಾತು ವರ್ಷ ಕಳೆಯುವಷ್ಟರಲ್ಲೇ ಸುಳ್ಳಾಯಿತೇ ಎಂದೆಲ್ಲ ಸಿರಾ ಜನತೆ, ವಿಪಕ್ಷ, ಕಾಂಗ್ರೆಸ್-ಜೆಡಿಎಸ್ ನಾಯಕರು ಪ್ರಶ್ನಿಸುತ್ತಿದ್ದು, 2000ನೇ ಇಸವಿಯಲ್ಲಿ ಚಿ.ನಾ.ಹಳ್ಳಿ ಕೆರೆ, ಗುಬ್ಬಿ ಕೆರೆ, ಕಳ್ಳಂಬೆಳ್ಳ, ಸಿರಾ, ಮದಲೂರು ಕೆರೆ ಮತ್ತು ಕೆರೆಯ ಭಾಗದ 11 ಪಿಕಪ್‍ಗಳಿಗೂ 3 ಟಿಎಂಸಿ ನೀರು ಅಲೋಕೇಟ್ ಮಾಡಿ ಆದೇಶವಾಗಿದ್ದು, ಆದೇಶವಾಗಿದೆಯೋ ಇಲ್ಲವೋ ಎಂಬುದನ್ನು

ರಾಜಕೀಯ ಬದಿಗಿಡಿ, ಅಲೋಕೇಟ್ ಆಗಿರುವ ನೀರನ್ನು ಸದ್ಬಳಕೆ ಮಾಡಿ: ಸಂಸದ

       ಮದಲೂರು ಕೆರೆಗೆ ಹೇಮೆ ನೀರು ಹರಿಸುವ ವಿಚಾರವಾಗಿ ಹಾಲಿ ಮಾಜಿ ಸಚಿವರ ನಡುವೆ ನಡೆಯುತ್ತಿರುವ ಮಾತಿನ ಜಟಾಪಟಿಗೆ ಪ್ರತಿಕ್ರಿಯಿಸಿದ ಹಿರಿಯ ಸಂಸದ ಜಿ.ಎಸ್.ಬಸವರಾಜು ಅವರು ನೀರಿನ ವಿಚಾರದಲ್ಲಿ ರಾಜಕಾರಣ ಸಲ್ಲದು. ನಾನು ಸಹ ಮದಲೂರು ಕೆರೆಗೆ ನೀರು ಹರಿಸುವಂತೆ ಮನವಿ ಮಾಡಿದ್ದು, ಎಸ್.ಎಂ.ಕೃಷ್ಣ, ಯಡಿಯೂರಪ್ಪ ಸಿಎಂ ಆಗಿದ್ದ ಅವಧಿಯಲ್ಲೇ ಸಂಸದನಾಗಿ ಮನವಿ ಮಾಡಿದ್ದು, ಸಿರಾ ತಾಲೂಕಿಗೆ ಅಲೋಕೇಟ್ ಆದ 0.89ಟಿಎಂಸಿಯಲ್ಲಿ ಹೆಚ್ಚುವರಿಯಾದ 0.4 ಟಿಎಂಸಿಯಷ್ಟು ನೀರು ಮದಲೂರು ಕೆರೆಗೆ ಹರಿಸಬಹುದಾದ ಆದೇಶವಾಗಿದೆ. ಹಾಲಿ ಅಲೋಕೇಟ್ ಆದ ನೀರಿನಲ್ಲೇ ಆರಂಭದ ಎಸ್ಕೇಪ್ ಗೇಟ್‍ನಲ್ಲಿ ಒಂದು ಗೇಜ್ ಅಳವಡಿಸಿ ಕಳ್ಳಂಬೆಳ್ಳ, ಶಿರಾ, ಮದಲೂರು ಕೆರೆಗೆ ಹರಿಸಲಿ. ರಾಜಕೀಯ ಆರೋಪ-ಪ್ರತ್ಯಾರೋಪ, ವೈಯಕ್ತಿಕ ಟೀಕೆಗಳಿಂದ ಏನನ್ನು ಸಾಧಿಸಲು ಸಾಧ್ಯವಿಲ್ಲ ಎಂದು ತಿಳಿಹೇಳಿದ್ದಾರೆ.

     ಗಂಡಸ್ತನದ ಸವಾಲಿಗೆ ನೀರಾವರಿ ವಿಚಾರದ ವೇದಿಕೆಗಳನ್ನು ಬಳಸಬಾರದು. ನೀರು ನಾನು ಹರಿಸಿದೆ, ಅನುದಾನ ನಾನು ತಂದೆ ಎನ್ನುವ ವೈಯಕ್ತಿಕ ಪ್ರತಿಷ್ಠೆಯನ್ನು ಬಿಟ್ಟು, ಜನರ ನೀರಿನ ಭವಣೆ ನೀಗಿಸುವ ಕೆಲಸವನ್ನು ಶಾಸಕರು, ಸಚಿವರು, ಮಾಜಿ ಸಚಿವರು ಮಾಡಲಿ. ನಾವೂ ಸಹ ಕೈ ಜೋಡಿಸುತ್ತೇವೆ. ಶಾಸಕರಾಗಲೀ, ಸಚಿವರಾಗಲೀ ಸರಕಾರದ ಯೋಜನೆ ಅನುಷ್ಠಾನಗಳಿಸಿದ್ದಾರೆ. ವೈಯಕ್ತಿಕವಾದುದ್ದಲ್ಲ. ಮದಲೂರು ಕೆರೆಗೆ ನೀರು ಹರಿಸುವ ಯೋಜನೆಗೆ ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆಯಡಿ 59.88ಕೋಟಿ ಅನುದಾನ ದೊರೆತು ಕಾಮಗಾರಿಯುನಡೆದಿದ್ದು, 2000ನೇ ಇಸವಿಯಲ್ಲೇ ಚಿ.ನಾ.ಹಳ್ಳಿ, ಗುಬ್ಬಿ ಕೆರೆ ಹಾಗೂ ಸಿರಾ ತಾಲೂಕಿನ ಕಳ್ಳಂಬೆಳ್ಳ, ಸಿರಾ ಹಾಗೂ ಮದಲೂರು ಕೆರೆಯೂ ಒಳಗೊಂಡಂತೆ 3 ಟಿಎಂಸಿ ಅಲೋಕೇಟ್ ಆಗಿದೆ. ಹೈಕೋರ್ಟ್‍ನಲ್ಲಿ ಸಹ ಕುಡಿಯುವ ನೀರು ಒಂದುಕೊಳ್ಳದಿಂದ ಮತ್ತೊಂದು ಕೊಳಕ್ಕೆ ಹರಿಸಲು ತೊಂದರೆಯಿಲ್ಲ ಎಂದು ತೀರ್ಮಾನ ಆಗಿದೆ. ನೀರು ಹರಿಸುವ ವಿಚಾರವಾಗಿ ಪ್ರತಿಷ್ಠೆ, ಗೊಂದಲ ಬಿಡಿ. ಎಲ್ಲರೂ ಒಟ್ಟಾಗಿ ನೀರು ಹರಿಸುವ ಪ್ರಯತ್ನ ಮಾಡೋಣ.

– ತಿಪ್ಪೇಸ್ವಾಮಿ, ವಿಧಾನಪರಿಷತ್ ಜೆಡಿಎಸ್ ಸದಸ್ಯರು.

 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link