ಜೆಸಿಎಂ ವಿರುದ್ಧ ಬ್ರಿಜೇಶ್ ಕಾಳಪ್ಪ ವಾಗ್ದಾಳಿ

 ತುಮಕೂರು :

      ಶಿರಾ ತಾಲ್ಲೂಕು ಮದಲೂರು ಕೆರೆಗೆ ಹೇಮಾವತಿ ನೀರು ಹರಿಸಲು ಸರ್ಕಾರಿ ಆದೇಶ ಇದ್ದರೂ ಓರ್ವ ಸಚಿವರಾಗಿ ಜೆ.ಸಿ.ಮಾಧುಸ್ವಾಮಿ ಮಾತನಾಡಿರುವುದು ತರವಲ್ಲ ಎಂದು ಸುಪ್ರೀಂಕೋರ್ಟ್ ನ್ಯಾಯವಾದಿ, ಕಾಂಗ್ರೆಸ್ ವಕ್ತಾರ ಬ್ರಿಜೇಶ್ ಕಾಳಪ್ಪ ವಾಗ್ದಾಳಿ ನಡೆಸಿದರು.

      ತುಮಕೂರು ನಗರದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಮದಲೂರು ಕೆರೆಗೆ ಹೇಮಾವತಿ ಅಲೋಕೇಷನ್ ಇಲ್ಲ ಎಂದು ಜೆ.ಸಿ.ಎಂ. ಹೇಳಿಕೆ ನೀಡಿರುವುದೇ ತಪ್ಪು. ಇದರ ಜೊತೆಗೆ ಒಂದು ಜಲಾನಯನ ಪ್ರದೇಶದಿಂದ ಮತ್ತೊಂದು ಜಲಾನಯನ ಪ್ರದೇಶಕ್ಕೆ ನೀರು ಹರಿಸುವುದು ತಪ್ಪು ಎಂದು ಹೇಳಿದ್ದಾರೆ. ಜೆಸಿಎಂ ಅವರ ಈ ಹೇಳಿಕೆ ಮುಂದಿನ ದಿನಗಳಲ್ಲಿ ಏನು ಪರಿಣಾಮ ಎದುರಾಗುತ್ತದೆ ಎಂಬುದನ್ನು ಕಾನೂನು ಸಚಿವರೂ ಆಗಿರುವ ಜೆ.ಸಿ.ಮಾಧುಸ್ವಾಮಿ ಅವರು ಯೋಚಿಸಬೇಕು. ಹೀಗಾದರೆ ಮಹದಾಯಿ ಸೇರಿದಂತೆ ಹಲವು ಯೋಜನೆಗಳೆ ತಪ್ಪಾಗಿ ಬಿಡುತ್ತವೆ. ತಮಿಳುನಾಡಿಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಕುಡಿಯುವ ನೀರಿನ ವಿಚಾರದಲ್ಲಿ ಸಚಿವರು ರಾಜಕೀಯ ಮಾಡಬಾರದು. ರಾಜಕೀಯ ಮಾಡಲು ಹೋದರೆ ಜನ ತೊಂದರೆಗೆ ಸಿಲುಕುತ್ತಾರೆ ಎಂದರು.

      ಹಿಂದೆ ಟಿ.ಬಿ.ಜಯಚಂದ್ರ ಅವರು ಸಚಿವರಾಗಿದ್ದಾಗ ಕೆಲವು ಯೋಜನೆಗಳನ್ನು ಮಾಡಿಸಿದ್ದಾರೆ. ಕುಡಿಯುವ ನೀರು ಹಾಗೂ ಅಂತರ್ಜಲ ವೃದ್ಧಿಗೆ ಈ ಯೋಜನೆಗಳು ಸಹಕಾರಿಯಾಗಲಿವೆ. ಇವನ್ನು ಉಳಿಸಿಕೊಂಡು ಹಾಲಿ ಸಚಿವರು ಇನ್ನೂ ಹೆಚ್ಚಿನ ಯೋಜನೆ ಮಂಜೂರಾತಿಗೆ ಶ್ರಮಿಸಲಿ. ಅದು ಬಿಟ್ಟು ಇರುವ ಯೋಜನೆಯನ್ನೇ ಸ್ಥಗಿತ ಮಾಡಲು ಹೋಗುವುದು ಎಂಥ ನ್ಯಾಯ ಎಂದು ಪ್ರಶ್ನಿಸಿದ ಅವರು, ಇದರಿಂದ ಎಷ್ಟು ಜನರಿಗೆ ತೊಂದರೆಯಾಗಲಿದೆ ಎಂಬುದನ್ನು ಸಚಿವರು ಯೋಚಿಸಬೇಕು ಎಂದರು.

ಜವಾಬ್ದಾರಿಯಿಂದ ವರ್ತಿಸಬೇಕು :

      ಸಾರ್ವಜನಿಕ ಜೀವನದಲ್ಲಿ ಇರುವವರು ಬಹಳ ಜವಾಬ್ದಾರಿಯಿಂದ ವರ್ತಿಸಬೇಕು. ಮದಲೂರು ಕೆರೆಗೆ ನೀರು ಬಿಟ್ಟರೆ ಜೈಲಿಗೆ ಹೋಗ್ತೀರಿ ಎಂದು ಕಾನೂನು ಸಚಿವರು ಅಧಿಕಾರಿಗಳನ್ನು ಹೆದರಿಸುತ್ತಾರೆ. ಮತ್ತೊಂದು ಸಭೆಯಲ್ಲಿ `ರ್ಯಾಸ್ಕಲ್’ ಎಂಬ ಪದ ಬಳಸುತ್ತಾರೆ. ಯಾರನ್ನೋ ದೂಷಿಸಲು ಜನರನ್ನು ಬಲಿ ಕೊಡಬೇಡಿ. ಮದಲೂರು ಕೆರೆಗೆ ನೀರು ಹರಿಸುವ ಸರ್ಕಾರಿ ಆದೇಶ ಇದ್ದರೂ ಇಲ್ಲ ಎಂದು ಹೇಳುತ್ತಿರುವುದರ ವಿರುದ್ಧ ಕಂಟೆಂಪ್ಟ್ ಹಾಕಲು ಮುಂದಿನ ದಿನಗಳಲ್ಲಿ ಯೋಚಿಸಲಾಗುವುದು.

-ಬ್ರಿಜೇಶ್ ಕಾಳಪ್ಪ, ಸುಪ್ರೀಂಕೋರ್ಟ್ ವಕೀಲರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link