ಹರಪನಹಳ್ಳಿ:
ಖಾಸಗಿ ಸಾಲವನ್ನು ಬಲವಂತವಾಗಿ ರೈತರಿಂದ ವಸೂಲಿ ಮಾಡುತ್ತಿರುವ ಕ್ರಮವನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಹುಚ್ಚವ್ವನಹಳ್ಳಿ ಮಂಜುನಾಥ ಬಣ) ಗುರುವಾರ ತಾಲ್ಲೂಕು ಕಚೇರಿ ಎದರು ಪ್ರತಿಭಟನೆ ನಡೆಸಿತು.
ಕೃಷಿ ಚಟುವಟಿಕೆಗಾಗಿ ಖಾಸಗಿ ವ್ಯಕ್ತಿಗಳಿಂದ ಸಾಲ ಮಾಡಿರುವ ರೈತರಿಂದ ಬಲವಂತವಾಗಿ ವಸೂಲಿ ಮಾಡಲಾಗುತ್ತಿದೆ. ಅಲ್ಲದೇ ವಸೂಲಿ ನೆಪದಲ್ಲಿ ರೈತರಿಗೆ ಸಾಕಷ್ಟು ತೊಂದರೆ ನೀಡಲಾಗುತ್ತಿದೆ. ರೈತರಿಗೆ ಸೇರಿದ ಟ್ರ್ಯಾಕ್ಟರ್, ಕೃಷಿ ಉಪಕರಣಗಳನ್ನು ಜಪ್ತಿ ಮಾಡುವುದು, ಹರಾಜು ಹಾಕುವ ಕೃತ್ಯಗಳು ನಡೆದಿವೆ ಎಂದು ರೈತರು ಗಂಭೀರ ಆರೋಪ ಮಾಡಿದರು.
ಮಹೇಂದ್ರ, ಎಲ್.ಎನ್.ಟಿ ಮತ್ತು ಇತರೆ ಎಲ್ಲ ಫೈನಾನ್ಸ್ ಗಳು ಮಾನಸಿಕ ಕಿರುಕುಳ ನೀಡುತ್ತಿರುವುದರಿಂದ ರೈತರು ನೋಂದು ಆತ್ಮಹತ್ಯೆಯ ದಾರಿ ಹಿಡಿಯುವ ಸ್ಥಿತಿ ಬಂದೋದಗಿದೆ. ಸಾಲ ವಸೂಲಿಯಲ್ಲಿ ಪ್ರಗತಿ ಕೃಷ್ಣಾ ಬ್ಯಾಂಕ್ ಇದೇ ಮಾರ್ಗ ಅನುಸರಿಸುತ್ತಿದೆ. ಕಳೆದ ವರ್ಷ ಬೆಳೆ ಹಾನಿ ಸಂಭವಿಸಿ ಸಾಕಷ್ಟು ತೊಂದರೆಗೀಡಾಗಿದ್ದ ರೈತರಿಗೆ ಬ್ಯಾಂಕ್ ನೋಟಿಸಗಳು ಮತ್ತಷ್ಟು ಕಂಗಾಲು ಆಗುವಂತೆ ಮಾಡಿವೆ ಎಂದು ದೂರಿದರು.
ಕಳೆದ ಸಾಲಿನಲ್ಲಿ ಬೆಳೆ ವಿಮೆ ಕಟ್ಟಿದ ರೈತರಿಗೆ ಇನ್ನೂ ಹಣ ಪಾವತಿಯಾಗಿಲ್ಲ. ಈ ಕೂಡಲೇ ಕ್ರಮ ವಹಿಸಬೇಕು. ಬ್ಯಾಂಕ್, ಫೈನಾನ್ಸ್ ಹಾಗೂ ಖಾಸಗಿಯವರು ಬಲವಂತದ ಸಾಲ ವಸೂಲಿ ಮಾಡದಂತೆ ಸೂಚಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ರಸ್ತೆ ಚಳವಳಿ ನಡೆಸಲಾಗುವುದು ಎಂದು ರೈತ ಮುಖಂಡರು ಎಚ್ಚರಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ ಡಾ.ಮಧು, ರೈತರು ನೀಡಿರುವ ಬೇಡಿಕೆಗಳ ಮನವಿಯನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಜಿ.ಸಿದ್ದಪ್ಪ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಶೀಲಾನಾಯ್ಕ, ರೈತ ಮುಖಂಡರಾದ ಯಲ್ಲಪ್ಪ, ಅರಸನಾಳು ಚಂದ್ರಪ್ಪ, ಕುಮಾರ ನಾಯ್ಕ, ಸೂರ್ಯಾ ನಾಯ್ಕ, ಹನುಮಂತಪ್ಪ, ಫಕ್ಕಿರಪ್ಪ, ರಾಜಾನಾಯ್ಕ, ಶಶಿನಾಯ್ಕ ಇತರರಿದ್ದರು.