ಹುಳಿಯಾರು:
14 ನೇ ಹಣಕಾಸಿನಲ್ಲಿ ನಿಯಮ ಬಾಹಿರವಾಗಿ ಸಾಮಗ್ರಿ ಖರೀದಿ ಹಾಗೂ ವರ್ಗ 1 ರ ನಿಧಿಯಿಂದ ಸದಸ್ಯರುಗಳು ತಮ್ಮ ಹೆಸರಿನಲ್ಲಿ ಚೆಕ್ ಪಡೆದಿದ್ದಾರೆ ಎಂಬ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಸದಸ್ಯತ್ವದಿಂದ ರದ್ದಾಗಿದ್ದ ಹುಳಿಯಾರು ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು ಸೇರಿ 5 ಮಂದಿ ಸದಸ್ಯರುಗಳ ವಿರುದ್ಧ ಈಗ ಕ್ರಿಮಿನಲ್ ಕ್ರಮ ಕೈಗೊಳ್ಳುವಂತೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ಕೋರಿದ್ದಾರೆ.
ಹುಳಿಯಾರು ಗ್ರಾಪಂನಲ್ಲಿ 2015-16, 2016-17 ನೇ ಸಾಲಿನ ವರ್ಗ 1 ರ ನಿಧಿಯಲ್ಲಿ ಕಾಮಗಾರಿ ನಿರ್ವಹಿಸಿದ ಬಾಬ್ತು ಹಣವನ್ನು ವೈಯಕ್ತಿವಾಗಿ ತಮ್ಮ ಹೆಸರಿಗೆ ಪಡೆದಿದ್ದರು. ಅಲ್ಲದೆ 14 ನೇ ಹಣಕಾಸು ಯೋಜನೆ ಅಡಿಯಲ್ಲಿ ನಿಯಮ ಬಾಹಿರವಾಗಿ ಗ್ರಾಪಂ ಸಾಮಗ್ರಿ ಖರೀದಿ ಮಾಡಿದ್ದಾರೆ ಎಂಬ ಆರೋಪ ಗ್ರಾಪಂ ಅಧ್ಯಕ್ಷೆ ಗೀತಾ ಪ್ರದೀಪ್, ಉಪಾಧ್ಯಕ್ಷರಾಗಿದ್ದ ಗಣೇಶ್, ಸದಸ್ಯರುಗಳಾದ ಪುಟ್ಟಿಬಾಯಿ, ಎಚ್.ಜಿ.ಶಂಕರ್, ನೂರ್ ಜಾನ್ ಬೀ ಹಾಗೂ ಇಂದ್ರಕಲಾ ಸೇರಿದಂತೆ ಹಲವು ಸದಸ್ಯರ ಮೇಲೆ ಕೇಳಿ ಬಂದಿತ್ತು.
ಈ ಹಿನ್ನೆಲೆಯಲ್ಲಿ ತುಮಕೂರು ಜಿಪಂ ಕಾರ್ಯನಿರ್ವಾಹಕ ಅಧಿಕಾರಿ ತನಿಖೆಗೆ ಮುಂದಾಗಿದ್ದರು. ಆರೋಪ ಕೇಳಿಬಂದಿದ್ದ ಸದಸ್ಯರುಗಳು ಹಾಗೂ ಬಿಲ್ಕಲೆಕ್ಟರ್ಗಳ ಮೇಲೆ ನೋಟಿಸ್ ಜಾರಿ ಮಾಡಿ ಲಿಖಿತ ಹೇಳಿಕೆ ಕೂಡ ಪಡೆದಿದ್ದಲ್ಲದೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಬೆಂಗಳೂರಿನಲ್ಲಿ ಇವರುಗಳ ವಿಚಾರಣೆ ಕೂಡ ನಡೆಸಿತ್ತು.
ಈ ಬಗ್ಗೆ ತನಿಖೆ ನಡೆಸಿ ಎಲ್ಲಾ ದಾಖಲಾತಿಗಳನ್ನು ಪರಿಶೀಲಿಸಿ ಅವರುಗಳ ವಿರುದ್ಧ ಆರೋಪ ಸಾಬೀತಾದ ಕಾರಣ ಇವರನ್ನು ಪಂಚಾಯತ್ ರಾಜ್ ಅಧಿನಿಯಮ 93 ರ ಅನ್ವಯ ಸದಸ್ಯತ್ವ ಸ್ಥಾನದಿಂದ ಏಪ್ರಿಲ್ 2019 ರಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ತೆಗೆದುಹಾಕಿದ್ದರು.
ಈಗ ಇವರು ಸರ್ಕಾರಕ್ಕೆ ಮಾಡಿರುವ ಹಣಕಾಸಿನ ನಷ್ಟವನ್ನು ಸಾಂಖ್ಯಿಕ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು ಇವರುಗಳ ಮೇಲೆ ಕ್ರಿಮಿನಲ್ ಕ್ರಮ ಕೈಗೊಳ್ಳುವಂತೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಕ್ ಅವರಿಗೆ ಪತ್ರ ಬರೆದು ಕೋರಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
