ಚಿಕ್ಕನಾಯಕನಹಳ್ಳಿ
ಅಸ್ಪೃಶ್ಯತೆ ಈಗಲೂ ಸಹ ಕೆಲವು ಕಡೆ ನಡೆಯುತ್ತಿದೆ ಅದನ್ನು ಹೋಗಲಾಡಿಸಲು ವಿದ್ಯಾರ್ಥಿಗಳು ಕೈ ಜೋಡಿಸಬೇಕು ಎಂದು ತುಮಕೂರು ಅಪರ ಪೋಲಿಸ್ ಅಧೀಕ್ಷಕರಾದ ಡಾ.ವಿ.ಜೆ.ಶೋಭಾರಾಣಿ ಹೇಳಿದರು.
ಪಟ್ಟಣದ ಪೋಲಿಸ್ ಭವನದಲ್ಲಿ ನಡೆದ ಅಸ್ಪೃಶ್ಯತಾ ನಿವಾರಣಾ ಅರಿವು ಕಾರ್ಯಕ್ರಮ, ವಿಚಾರ ಸಂಕಿರ್ಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಸ್ಪೃಶ್ಯತೆ ಎಂಬುದು ಈಗ ಮೊದಲಿನಷ್ಟು ನಡೆಯುತ್ತಿಲ್ಲ ಆದರೆ ಕೆಲ ಭಾಗದಲ್ಲಿ ಅಸ್ಪೃಶ್ಯತೆ ಆಚರಣೆ ನಡೆಯುತ್ತಿದೆ ಎಂಬ ದೂರುಗಳಿವೆ, ಈ ಆಚರಣೆ ಹೋಗಲಾಡಿಸಲು ನಮ್ಮ ಇಲಾಖೆ ವತಿಯಿಂದ ಹಲವಾರು ಬಾರಿ ಅರಿವು ಕಾರ್ಯಕ್ರಮಗಳನ್ನು ಮಾಡಿದ್ದೇವೆ, ಇಂತಹ ಆಚರಣೆಗಳನ್ನು ಹೋಗಲಾಡಿಸಲು ಇಲಾಖೆಗಳ ಜೊತೆಗೆ ಸಾರ್ವಜನಿಕರ ಸಹಕಾರವೂ ಅಗತ್ಯವಿದೆ ಜೊತೆಗೆ ಶಾಲಾ, ಕಾಲೇಜು ವಿದ್ಯಾರ್ಥಿಗಳು ಜಾಗೃತಗೊಂಡು ಅಸ್ಪೃಶ್ಯತೆ ಆಚರಣೆ ನಡೆಯುತ್ತಿದ್ದರೆ ಅದನ್ನು ಹೋಗಲಾಡಿಸಲು ಇಲಾಖೆಗೆ ಮಾಹಿತಿ ನೀಡಿ ಎಂದು ಹೇಳಿದರು.
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ರವರು ಚಿಕ್ಕ ವಯಸ್ಸಿನಲ್ಲಿನ ಅಸ್ಪೃಶ್ಯತೆಯಿಂದ ನೊಂದಿದ್ದರ ಪರಿಣಾಮ ತಳಮಟ್ಟದಲ್ಲಿನ ಜನರನ್ನು ಮೇಲೆತ್ತಲು ಶ್ರಮಪಟ್ಟರು, ಸಂವಿಧಾನವನ್ನು ರಚಿಸಿ ಮೀಸಲಾತಿ ಜಾರಿಗೆ ತಂದು ಅಸ್ಪೃಶ್ಯತೆ ನಿವಾರಣೆಗೆ ಮುಂದಾದರು, ಅವರ ಸೇವೆ ಉತ್ತಮವಾದದ್ದು ಎಂದರು.
ಶಾಸಕ ಜೆ.ಸಿ.ಮಾಧುಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜದಲ್ಲಿ ಪ್ರತಿಯೊಬ್ಬರೂ ಸಮಾನರು, ಅಸ್ಪೃಶ್ಯರು, ಮೇಲ್ವರ್ಗದವರು ಎಂದು ಜನರೇ ಹೇಳಿಕೊಂಡಿರುವುದು, ಜಾತಿ ಆಧಾರ, ಮೇಲ್ವರ್ಗ, ಕೆಳವರ್ಗ ಎಂದು ಯಾರನ್ನೂ ಬಿಂಬಿಸಬಾರದು ಎಂದ ಅವರು, ವಿದ್ಯಾರ್ಥಿಗಳು ಸ್ವಾಭಿಮಾನವನ್ನು ಬೆಳೆಸಿಕೊಳ್ಳಿ , ಯಾರೂ ಯಾರ ಅಡಿಯಾಳಲ್ಲ, ಶಿಕ್ಷಣ ಕಲಿತರೆ ಎಲ್ಲರಿಗೂ ಸಮಾನತೆ ನೀಡುತ್ತದೆ, ನೀಡುವುದನ್ನು ಕಲಿಸುತ್ತದೆ ಎಂದರು. ಸಮಾಜದಲ್ಲಿ ಪ್ರತಿಯೊಬ್ಬರಿಗೂ ಸಮಾನವಾದ ಅವಕಾಶ ಸಿಗಬೇಕು, ಪ್ರತಿಭೆ ಇರುವವರಿಗೆ ಪ್ರೋತ್ಸಾಹ ನೀಡುವುದರಿಂದ ಪ್ರತಭಾನ್ವಿತರ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದರು.
ತಾ.ಪಂ.ಅಧ್ಯಕ್ಷೆ ಚೇತನಗಂಗಾಧರ್, ತಾ.ಪಂ.ಸದಸ್ಯರಾದ ಸಿಂಗದಹಳ್ಳಿ ರಾಜ್ ಕುಮಾರ್, ಡಿವೈಎಸ್ಪಿ ಕಲ್ಯಾಣ್ ಕುಮಾರ್, ತಹಶೀಲ್ದಾರ್ ತೇಜಸ್ವಿನಿ, ತಾ.ಪಂ.ಇ.ಓ ನಾರಾಯಣಸ್ವಾಮಿ, ಸಮಾಜ ಕಲ್ಯಾಣಾ ಇಲಾಖೆ ಅಧಿಕಾರಿ ರೇಣುಕಾದೇವಿ, ಡಿಎಸ್ಎಸ್ ಮುಖಂಡರಾದ ಸಿ.ಎಸ್.ಲಿಂಗದೇವರು, ಬೇವಿನಹಳ್ಳಿಚನ್ನಬಸವಯ್ಯ ಮತ್ತಿತರರು ಉಪಸ್ಥಿತರಿದ್ದರು.