ಬೆಂಗಳೂರು
ರಾಜ್ಯ ಸಚಿವ ಸಂಪುಟ ವಿಸ್ತರಣೆಯ ನಂತರ ಬಿಗಡಾಯಿಸಿದ ಬಿಜೆಪಿ ಬಿಕ್ಕಟ್ಟು ಸಚಿವರಿಗೆ ಖಾತೆಗಳ ಹಂಚಿಕೆಯ ನಂತರ ಮತ್ತಷ್ಟು ತೀವ್ರ ಸ್ವರೂಪ ಪಡೆದರೂ ಇದ್ದಕ್ಕಿದ್ದಂತೆ ಪರಿಸ್ಥಿತಿ ಶಾಂತಗೊಳ್ಳುತ್ತಿದೆ.ಸಚಿವ ಸಂಪುಟ ವಿಸ್ತರಣೆಯ ನಂತರ ಹಲ ಮಂದಿ ಕನಲಿ ಕೆಂಡವಾಗಿದ್ದರಲ್ಲದೆ ತಮ್ಮ ಅಸಮಾಧಾನವನ್ನುಬಹಿರಂಗವಾಗಿ ವ್ಯಕ್ತಪಡಿಸಿದ್ದರು.
ಮಂಗಳವಾರ ಮೂರು ಮಂದಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡಿದ್ದು ಹಾಗೂ ಖಾತೆಗಳ ಹಂಚಿಕೆ ಪ್ರಕ್ರಿಯೆಯಲ್ಲಿ ಸಮಾಧಾನವಾಗದ್ದು ಸೇರಿದಂತೆ ಭಿನ್ನಮತೀಯರ ಸಂಖ್ಯೆ ಮತ್ತಷ್ಟು ಹೆಚ್ಚಾದರೂ ಕಾಲಕ್ರಮೇಣ ಪರಿಸ್ಥಿತಿ ಸುಧಾರಿಸುತ್ತಿದೆ.
ಹಿರಿಯ ನಾಯಕರಾದ ಆರ್.ಅಶೋಕ್,ಕೆ.ಎಸ್.ಈಶ್ವರಪ್ಪ,ಸಿ.ಟಿ.ರವಿ ಸೇರಿದಂತೆ ಪಕ್ಷದ ಇಪ್ಪತ್ತಕ್ಕೂ ಹೆಚ್ಚು ಮಂದಿ ವರಿಷ್ಟರ ವಿರುದ್ಧ ಸಿಡಿದು ಬಿದ್ದಾಗ ಸರ್ಕಾರದ ಭವಿಷ್ಯ ಡೋಲಾಯಮಾನವಾಗುವ ಲಕ್ಷಣಗಳು ಕಂಡು ಬಂದಿದ್ದವು.
ತಮಗೆ ಡಿಸಿಎಂ ಹುದ್ದೆ ತಪ್ಪಿತು ಎಂದು ಅಶೋಕ್ ಅಸಮಾಧಾನಗೊಂಡಿದ್ದಲ್ಲದೆ ಕಳೆದ ಎರಡುದಿನಗಳಿಂದ ವಿಧಾನಸೌಧದ ಕಡೆ ಸುಳಿಯಲೂ ಇಲ್ಲ.ಮಂಗಳವಾರರದ ಸಚಿವ ಸಂಪುಟ ಸಭೆಗೆ ಗೈರು ಹಾಜರಾದ ಅವರ ಕೋಪ ಇನ್ನೂತಣಿದಿಲ್ಲ.ಆದರೆ ಈಶ್ವರಪ್ಪ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ಸಿಗಲಿಲ್ಲ ಎಂದು ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸಿತ್ತಾದರೂ ಇಂದು ಖುದ್ದು ಈಶ್ವರಪ್ಪ ಅವರೇ ಸಂಕಷ್ಟದ ಪರಿಸ್ಥಿತಿಯನ್ನುಗಮನದಲ್ಲಿಟ್ಟುಕೊಂಡುಎಲ್ಲರೂ ಸಮಾಧಾನದಿಂದಿರಬೇಕು ಎನ್ನುವ ಮೂಲಕ ಬಿಳಿ ಬಾವುಟ ಹಾರಿಸಿದರು.
ಇದೇ ರೀತಿ ಪ್ರವಾಸೋದ್ಯಮ ಖಾತೆ ನೀಡಿದ್ದಕ್ಕಾಗಿ ಅಸಮಾಧಾನಗೊಂಡಿದ್ದ ಸಿ.ಟಿ.ರವಿ ಇಂದು ಯೂ ಟರ್ನ್ ಹೊಡೆದಿದ್ದಲ್ಲದೆ ತಮಗೆ ಪಕ್ಷ ತಾಯಿಯ ಸಮಾನ.ಹೀಗಾಗಿ ಪಕ್ಷ ಏನು ಹೇಳುತ್ತದೋ?ಆ ಕೆಲಸ ಮಾಡುತ್ತೇನೆ.ಹೀಗಾಗಿ ನಾನು ಅಸಮಾಧಾನಗೊಂಡಿದ್ದೇನೆ ಎಂಬುದು ಸುಳ್ಳುಎಂದರು.ಈ ಮಧ್ಯೆ ಮಾಜಿ ಮುಖ್ಯಮಂತ್ರಿ,ಹಾಲಿ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರು ಅಸಮಾಧಾನಗೊಂಡಿದ್ದರೂ ಬಹಿರಂಗವಾಗಿ ತಮ್ಮ ಅತೃಪ್ತಿಯನ್ನು ಕಾರಿಲ್ಲ.
ಬದಲಿಗೆ ಪಕ್ಷ ನೀಡಿದ ನಿರ್ದೇಶನದಂತೆ ನಡೆದುಕೊಳ್ಳಲು ತೀರ್ಮಾನಿಸಿರುವ ಅವರು ಇಂದು ಬೆಳಿಗ್ಗೆ ವಿಧಾನಸೌಧಕ್ಕೆ ಭೇಟಿ ನೀಡಿ ಕಛೇರಿಗೆ ಪೂಜೆ ಸಲ್ಲಿಸಿ ತಮ್ಮ ಆಪ್ತ ಶಾಸಕರೊಬ್ಬರ ತಾಯಿಯ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳಲು ಹುಬ್ಬಳ್ಳಿಗೆ ಹೋದರು.ಉನ್ನತ ಮೂಲಗಳಪ್ರಕಾರ ಈಶ್ವರಪ್ಪ,ಸಿ.ಟಿ.ರವಿ ಸೇರಿದಂತೆ ಬಂಡಾಯವೆದ್ದ ಬಹುತೇಕ ಶಾಸಕರನ್ನು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಂತೋಷ್ ಅವರು ಸಮಾಧಾನಿಸಿದ್ದಾರೆ.ಹಾಗೆಯೇ ಯಡಿಯೂರಪ್ಪ ಆಪ್ತ ಶಾಸಕರೂ ಪರಿಸ್ಥಿತಿ ವಿಕೋಪಕ್ಕೆ ಹೋಗಬಾರದು ಎಂಬ ಕಾರಣಕ್ಕಾಗಿ ಮೌನಕ್ಕೆ ಜಾರಿದ್ದು ಪರಿಸ್ಥಿತಿಯನ್ನುಕಾದು ನೋಡಲು ತೀರ್ಮಾನಿಸಿದ್ದಾರೆ.
ಹೀಗೆ ಭಿನ್ನಮತದ ಜ್ವಾಲೆ ಕಡಿಮೆಯಾಗುತ್ತಿದ್ದಂತೆಯೇ ನೂತನ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ವಿಧಾನಸೌಧಕ್ಕೆ ಬಂದು ಕಾರ್ಯ ಆರಂಭಿಸಿದರಲ್ಲದೆ ಸುದ್ದಿಗಾರರೊಂದಿಗೆ ಮಾತನಾಡಿದರು.ಹಲವರ ಅತೃಪ್ತಿಗೆ ಕಾರಣರಾದ ಲಕ್ಷಣ ಸವದಿ ಅವರು ಕೂಡಾ ಬುಧವಾರ ಸಾರಿಗೆ ಇಲಾಖೆಯ ಉನ್ನತಾಧಿಕಾರಿಗಳ ಸಭೆ ಕರೆದಿದ್ದು ಚರ್ಚೆಯ ನಂತರ ಮುಂದಿನ ಹೆಜ್ಜೆ ಇಡಲು ತೀರ್ಮಾನಿಸಿದ್ದಾರೆ.
ಹಾಗೆಯೇ ಗೃಹ ಸಚಿವ ಬಸವರಾಜ ಬೊಮ್ಮಾಯಿ,ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಇಂದು ವಿಧಾನಸೌಧಕ್ಕೆ ಭೇಟಿ ನೀಡಿ ಇಲಾಖೆಯ ಅಧಿಕಾರಿಗಳೊಂದಿಗೆ ಔಪಚಾರಿಕ ಚರ್ಚೆ ನಡೆಸಿದರು.ಹೀಗೆ ಯಡಿಯೂರಪ್ಪ ಸರ್ಕಾರದಲ್ಲಿ ಭುಗಿಲೆದ್ದ ಭಿನ್ನಮತ ಕ್ರಮೇಣ ತಹಬಂದಿಗೆ ಬರುತ್ತಿದ್ದು ಆಡಳಿತ ಯಂತ್ರ ಮೈ ಕೊಡವಿ ಮೇಲೇಳಲು ಸಜ್ಜಾದಂತೆ ಬಾಸವಾಗತೊಡಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








