ಪೊಲೀಸ್ ಅಧಿಕಾರಿಗೆ ಶ್ರದ್ದಾಂಜಲಿ..! 

ಗುಬ್ಬಿ
     ಲಾಕ್‍ಡೌನ್ ಆದೇಶ ಜಾರಿಗೊಳಿಸುವಲ್ಲಿ ಶ್ರಮಿಸುತ್ತಿದ್ದ ಪೊಲೀಸ್ ಅಧಿಕಾರಿಯೊಬ್ಬರ ಅಕಾಲಿಕ ಸಾವು ಕೊರೋನಾ ವಾರಿಯರ್ಸ್‍ಗಳಿಗೆ  ಆಘಾತ ತಂದಿದೆ. ಆರೋಗ್ಯ, ಪೊಲೀಸ್ ಮತ್ತು ಕಂದಾಯ ಇಲಾಖೆ ಸಿಬ್ಬಂದಿ ಒಟ್ಟಾಗಿ ಶ್ರದ್ದಾಂಜಲಿ ಅರ್ಪಿಸುವ ಮೂಲಕ ಎಎಸ್‍ಐ ಭುವನೇಶ್ವರ್‍ಕುಮಾರ್ ಅವರ ಆತ್ಮಕ್ಕೆ ಶಾಂತಿ ಕೋರುವುದು ಅತ್ಯಗತ್ಯ ಎಂದು ತಹಸೀಲ್ದಾರ್ ಡಾ.ಪ್ರದೀಪ್‍ಕುಮಾರ್ ಹಿರೇಮಠ ನುಡಿನಮನ ಸಲ್ಲಿಸಿದರು.
    ಪಟ್ಟಣದ ಬಸ್‍ನಿಲ್ದಾಣದ ಬಳಿ ಹೆದ್ದಾರಿ ರಸ್ತೆಯಲ್ಲೇ ಕರ್ತವ್ಯ ನಿರತ ಪೊಲೀಸ್, ಕಂದಾಯ ಹಾಗೂ ಆರೋಗ್ಯ ಇಲಾಖಾ ಸಿಬ್ಬಂದಿಯೊಂದಿಗೆ ಮೌನಾಚರಣೆ ಮಾಡುವ ಮೂಲಕ ಅಪಘಾತದಲ್ಲಿ ಮೃತಪಟ್ಟ ಕರ್ತವ್ಯ ನಿರತ ಎಎಸ್‍ಐ ಭುವನೇಶ್ವರ್‍ಕುಮಾರ್ ಅವರಿಗೆ ಶ್ರದ್ದಾಂಜಲಿ ಅರ್ಪಿಸಿ ಮಾತನಾಡಿದ ಅವರು, ಕೋವಿಡ್ 19 ವೈರಸ್ ಹರಡದಂತೆ ಶ್ರಮಿಸುತ್ತಿರುವ ಪೊಲೀಸ್ ಸಿಬ್ಬಂದಿಯ  ಶ್ರಮ ಸಾರ್ವಜನಿಕರು ಮರೆಯಲಾಗದಂತಹ ಕೊಡುಗೆಯಾಗಿದೆ.
 
   ಹಗಲಿರುಳು ಬಂದೋಬಸ್ತ್ ಮಾಡುವ ಜತೆಗೆ ಮನೆಯಿಂದ ಸಾರ್ವಜನಿಕರು ಹೊರಬಾರದಂತೆ ಸೂಚಿಸುತ್ತಾ ತಮ್ಮ ಬದುಕನ್ನು  ಪಣಕ್ಕಿಟ್ಟ ಈ ಸಿಬ್ಬಂದಿಯ  ಸೇವೆಗೆ ನಿಜವಾದ ಅರ್ಥವಿದೆ. ಇಂತಹ ಕರ್ತವ್ಯನಿರತ ಪೊಲೀಸ್ ಅಧಿಕಾರಿಯ ಸಾವು ಇಡೀ ಇಲಾಖೆಗೆ ತುಂಬಲಾರದ ನಷ್ಟವಾಗಿದೆ ಎಂದು ವಿಷಾದಿಸಿದರು.
    ಸಿಪಿಐ ಸಿ.ರಾಮಕೃಷ್ಣಯ್ಯ ಮಾತನಾಡಿ, ಮನೆಯಿಂದ ಕರ್ತವ್ಯಕ್ಕೆ ಹಾಜರಾಗುವ ಪೊಲೀಸ್ ಸಿಬ್ಬಂದಿಗೆ ಮರಳಿ ಮನೆಗೆ ತೆರಳುವ ಭರವಸೆಗಳೆ ಇರುವುದಿಲ್ಲ. ಅಂತಹ ಹೋರಾಟದ ಕೆಲಸ ಮಾಡುವ ಪೊಲೀಸರು ಸಾರ್ವಜನಿಕರ ಹಿತ ಕಾಯುವುದು, ಸಮಾಜದ ಒಳಿತಿಗೆ ತಮ್ಮ ಪ್ರಾಣವನ್ನೇ ಬಲಿ ಕೊಡುವ ಪ್ರವೃತ್ತಿ ಸಹ ಹೊಂದಿರುತ್ತಾರೆ. ಭುವನೇಶ್ವರ್‍ಕುಮಾರ್ ಅವರ ಕರ್ತವ್ಯ ನಿಷ್ಠೆ ಇಡೀ ಇಲಾಖೆಯೇ ಒಪ್ಪುತ್ತಿತ್ತು. ಕರ್ತವ್ಯಕ್ಕೆ ಹಾಜರಾಗುವ ವೇಳೆ ಸಂಭವಿಸಿದ ಅಪಘಾತ ಅವರನ್ನು ಬಲಿ ಪಡೆದಿದೆ. ಕೊರೋನಾ ವೈರಸ್ ತಡೆಯ ಲಾಕ್‍ಡೌನ್ ಆದೇಶ ಜಾರಿಗೆ ನಿರಂತರ ಶ್ರಮಿಸಿದ್ದ ಈ ಅಧಿಕಾರಿಯ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ತಮ್ಮ ಅಶ್ರು ತರ್ಪಣ ಸಲ್ಲಿಸಿದರು.
 
    ಇದೇ ಸಂದರ್ಭದಲ್ಲಿ ಪೊಲೀಸ್, ಕಂದಾಯ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಯೊಂದಿಗೆ ಸಾರ್ವಜನಿಕರು ಶ್ರದ್ದಾಂಜಲಿ ಅರ್ಪಿಸುವ ಮೂಲಕ ಮೌನಾಚರಣೆ ಸಲ್ಲಿಸಿದರು. ಗುಬ್ಬಿ ಪಿಎಸ್‍ಐ ಜ್ಞಾನಮೂರ್ತಿ, ಕಂದಾಯ ನಿರೀಕ್ಷಕ ರಮೇಶ್ ಇತರರು ಇದ್ದರು.
    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link