ಕರೋನಾ ಕರಿನೆರಳು : ಹಳ್ಳಿ ಸೇರಿರುವವರಲ್ಲಿ ಜಿಜ್ಞಾಸೆ

ತುಮಕೂರು     ಎದ್ದೆನೋ ಬಿದ್ದೆನೋ ಎಂದು ನಗರ ಬಿಟ್ಟು ಹಳ್ಳಿ ಸೇರಿಕೊಂಡ ಯುವಕರು ಇದೀಗ ಅತಂತ್ರ ಸ್ಥಿತಿಗೆ ಸಿಲುಕಿದ್ದಾರೆ.
ಉದ್ಯೋಗವೂ ಬೇಡ, ನಗರದ ಸಹವಾಸ ಬೇಡ, ಊರು ಸೇರಿಕೊಂಡರೆ ಸಾಕು ಎಂದು ನಗರದಲ್ಲಿದ್ದ ಹಳ್ಳಿಯ ಯುವಕರೆಲ್ಲ ತಮ್ಮೂರು ಸೇರಿದ್ದರು. ಕೊರೊನಾ ವೈರಸ್ ಹರಡುವ ಕಾರಣ ಮಾರ್ಚ್ 24 ರಂದು ಲಾಕ್‍ಡೌನ್ ಘೋಷಣೆಯಾಗುತ್ತಿದ್ದಂತೆಯೇ ಒಬ್ಬೊಬ್ಬರಾಗಿ ತಮ್ಮೂರಿನ ಕಡೆಗೆ ಕಾಲ್ಕಿತ್ತರು. ತಮ್ಮದೆ ಬೈಕ್‍ಗಳಲ್ಲಿ, ಖಾಸಗಿ ವಾಹನಗಳನ್ನು ಹಿಡಿದು ಸುತ್ತಾಡಿ ಅಂತೂ ಊರು ಸೇರಿಕೊಂಡರು. ಆ ಕ್ಷಣಕ್ಕೆ ಬೆಂಗಳೂರು ಬಿಟ್ಟು ಊರು ಸೇರುವುದಷ್ಟೇ ಗುರಿಯಾಗಿತ್ತು.

      ಲಾಕ್‍ಡೌನ್ ಘೋಷಣೆಯಾಗಿ ಮನೆಯಲ್ಲಿಯೇ ಇರಿ ಎಂದರೆ ಅವರು ಹೇಗೆ ತಾನೆ ಇದ್ದಾರು? ಉದ್ಯೋಗವಿಲ್ಲದೆ ಮನೆಯಲ್ಲಿ ಎಷ್ಟು ದಿನ ಕುಳಿತುಕೊಳ್ಳಲು ಸಾಧ್ಯ? ಬೆಂಗಳೂರಿನಂತಹ ನಗರಗಳಿಗೆ ಹೋಗಿ ನೆಲೆಸಿರುವವರಲ್ಲಿ ಯುವಕರೇ ಹೆಚ್ಚು. ಅವಿವಾಹಿತರೆ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕೆಲವರು ವಿವಾಹಿತರಾಗಿದ್ದರೂ ಅವರ ಕುಟುಂಬ ತಮ್ಮ ಊರುಗಳಲ್ಲೇ ನೆಲೆಸಿದೆ. ವಾರಕ್ಕೊಮ್ಮೆ ಬಂದು ಹೋಗುವ ಪರಿಪಾಠ ಇಟ್ಟುಕೊಂಡವರು ಇದ್ದಾರೆ. ಕೆಲವು ಕುಟುಂಬಗಳು ನಗರಗಳಲ್ಲೇ ನೆಲೆಸಿದ್ದರೂ ದಿನಸಿ ಪದಾರ್ಥಗಳನ್ನು ತಮ್ಮ ಹಳ್ಳಿಗಳಿಂದಲೇ ತರುತ್ತಿದ್ದಾರೆ. ಒಟ್ಟಾರೆ ಒಂದಲ್ಲ ಒಂದು ಕಾರಣದಿಂದಾಗಿ ತಮ್ಮೂರಿನ ನಂಟು ಬೆಳೆಸಿಕೊಂಡವರೆ.

     ಹೀಗಿರುವಾಗ ದಿಢೀರ್ ಲಾಕ್‍ಡೌನ್ ಘೋಷಿಸಿ ನಿಮ್ಮ ನಿಮ್ಮ ಮನೆಯಲ್ಲಿಯೇ ಇರಿ, ಹೊರಗೆ ಬರಬೇಡಿ ಎಂದರೆ ಹೇಗಾಗಬೇಡ? ಕದ್ದುಮುಚ್ಚಿ, ಪೊಲೀಸರ ಕಣ್ ತಪ್ಪಿಸಿ ಹೇಗೋ ಹಳ್ಳಿಗಳನ್ನು ಸೇರಿಕೊಂಡರು. ಮುಖ್ಯಮಂತ್ರಿಗಳು ಯುಗಾದಿ ಸಂದರ್ಭದಲ್ಲಿ ಒಂದು ದಿನ ಅನುಮತಿ ಕೊಟ್ಟದ್ದು ವರದಾನವಾಯಿತು. ಅಂದಿನಿಂದ ಈವರೆಗೆ ತಮ್ಮ ಊರುಗಳಲ್ಲೇ ಇವರೆಲ್ಲಾ ಕಾಲ ಕಳೆಯುತ್ತಿದ್ದಾರೆ. ಆರಂಭದ ದಿನಗಳನ್ನು ತುಂಬಾ ಖುಷಿಯಾಗಿಯೇ ಕಳೆದರು. ಜೇಬಲ್ಲಿ ಒಂದಷ್ಟು ದುಡ್ಡಿತ್ತು. ತಿಂಗಳು ಉರುಳಿದಂತೆ ಅದೆಲ್ಲ ಖಾಲಿಯಾಯಿತು.

     ಮೂರನೇ ಲಾಕ್‍ಡೌನ್ ಘೋಷಣೆಯಾಗಿ ಮುಗಿಯುವ ವೇಳೆಗೆ ಒಂದಷ್ಟು ಸಡಿಲಿಕೆ ಉಂಟಾಯಿತು. ಕೆಲವು ಕಾರ್ಖಾನೆಗಳು, ಅಗತ್ಯ ಸೌಲಭ್ಯದ ಅಂಗಡಿ ಮುಂಗಟ್ಟುಗಳು ತೆರೆದವು. ಹಳ್ಳಿಯಲ್ಲಿದ್ದ ಯುವಕರು ಈ ಸಂದರ್ಭ ನಗರಗಳಿಗೆ ತೆರಳಲು ಉತ್ಸುಕರಾದರೂ ಅವರ ಪೋಷಕರು ಒಪ್ಪಲಿಲ್ಲ. ಸಾರಿಗೆ ವ್ಯವಸ್ಥೆಯೂ ಇಲ್ಲದೆ, ಪೊಲೀಸರ ಕಣ್ ತಪ್ಪಿಸಿ ಹೋಗುವ ನಿರ್ಧಾರಗಳಿಗೆ ಪೋಷಕರ ಸಂಪೂರ್ಣ ವಿರೋಧ ವ್ಯಕ್ತವಾಯಿತು. ಒಂದು ಕಡೆ ಉದ್ಯೋಗಸ್ಥ ಕಂಪನಿ, ಮಾಲೀಕರುಗಳಿಂದ ಕರೆಯೋಲೆ, ಮತ್ತೊಂದು ಕಡೆ ಪೋಷಕರ ವಿರೋಧ-ಸಂಚಾರದ ನಿರ್ಬಂಧ. ಹೋಗಲೋ ಬೇಡವೋ ಎಂಬ ಜಿಜ್ಞಾಸೆಯಲ್ಲಿಯೇ ಹಲವು ದಿನ ಕಾಲ ತಳ್ಳಿದವರು ಬಹಳ ಮಂದಿ.

    ಇದೀಗ ಲಾಕ್‍ಡೌನ್ ಸಡಿಲಿಕೆಯಾಗಿದೆ. ನಗರಗಳಲ್ಲಿ ಎಲ್ಲ ವಹಿವಾಟು ಆರಂಭವಾಗಿವೆ. ಕಚೇರಿ, ಕಾರ್ಖಾನೆಗಳು, ಕಂಪನಿಗಳು ತೆರೆದಿವೆ. ಉದ್ಯೋಗಿಗಳು ಹಾಗೂ ಕಾರ್ಮಿಕರ ಕೊರತೆ ಎದುರಿಸುತ್ತಿರುವ ಬೆಂಗಳೂರಿನಂತಹ ನಗರಗಳಲ್ಲಿ ಉದ್ಯೋಗಿಗಳು ಸಿಕ್ಕಿದರೆ ಸಾಕು ಎನ್ನುವಂತಹ ಪರಿಸ್ಥಿತಿ ಎದುರಾಗಿತ್ತು. ಈ ಕಾರಣಕ್ಕಾಗಿಯೇ ಉದ್ಯೋಗದಾತರೆ ಕರೆ ಮಾಡಿ ಕೆಲಸಕ್ಕೆ ಬರುವಂತೆ ತಿಳಿಸುತ್ತಿದ್ದಾರೆ. ಆದರೆ ಹಳ್ಳಿಗಳಲ್ಲಿ ಸೇರಿಕೊಂಡಿರುವವರ ಸ್ಥಿತಿ ಅತ್ತ ದರಿ, ಇತ್ತ ಪುಲಿ ಎನ್ನುವಂತಾಗಿದೆ.

     ಬೇಗನೆ ನಗರಕ್ಕೆ ಹೋಗಿ ಉದ್ಯೋಗಕ್ಕೆ ಹಾಜರಾಗದಿದ್ದರೆ ಎಲ್ಲಿ ಕೆಲಸದಿಂದ ತೆಗೆದು ಹಾಕಿ ಬಿಡುವರೋ ಎಂಬ ಆತಂಕ ಒಂದು ಕಡೆಯಾದರೆ, ಮನೆಯವರನ್ನು ಒಪ್ಪಿಸುವ ಹೊಣೆಗಾರಿಕೆ ಮತ್ತೊಂದು ಕಡೆ. ಎಲ್ಲ ಕಾರ್ಮಿಕರು, ಉದ್ಯೋಗಸ್ಥರನ್ನು ಇನ್ನೂ ಪೂರ್ಣ ಪ್ರಮಾಣದಲ್ಲಿ ನೇಮಿಸಿಕೊಳ್ಳಲು ಸಾಧ್ಯವಾಗಿಲ್ಲ. ಸದ್ಯ ವಹಿವಾಟು ಆರಂಭವಾದರೆ ಸಾಕು ಎನ್ನುವ ಧಾವಂತ ಉದ್ಯೋಗದಾತರಲ್ಲಿದೆ. ಈ ಕಾರಣಕ್ಕಾಗಿಯೇ ಹಳ್ಳಿ ಸೇರಿಕೊಂಡಿದ್ದ ಉದ್ಯೋಗಿಗಳನ್ನು ಕರೆಯುವ ಮಟ್ಟಕ್ಕೂ ಇಳಿದಿದ್ದಾಯಿತು. ಆದರೆ ಹೋಗಿ ಬರುವ ಯಾವ ವ್ಯವಸ್ಥೆಯೂ ಇಲ್ಲದ ಕಾರಣ ಬಹುತೇಕ ಉದ್ಯೋಗಿಗಳು ಇನ್ನೂ ನಗರ ಸೇರಿಕೊಳ್ಳಲು ಸಾಧ್ಯವಾಗಿಲ್ಲ. ಮೇ 19 ರಿಂದ ಸೀಮಿತ ಪ್ರಮಾಣದಲ್ಲಿ ಸಾರಿಗೆ ವ್ಯವಸ್ಥೆ ಆರಂಭವಾಗಿದೆ. ಈ ವ್ಯವಸ್ಥೆಗಾಗಿಯೇ ಬಹಳಷ್ಟು ಜನ ಕಾಯುತ್ತಾ ಕುಳಿತಿದ್ದರು. ಸಾರಿಗೆ ವ್ಯವಸ್ಥೆ ಆರಂಭವಾದರೂ ನಗರಗಳಿಗೆ ಹೋಗುತ್ತಿರುವವರ ಸಂಖ್ಯೆ ಕಡಿಮೆಯೇ ಇದೆ.

      ಕೆಲವರು ಈಗಾಗಲೇ ಉದ್ಯೋಗಕ್ಕೆ ಸೇರಿಕೊಂಡಿದ್ದಾರೆ. ಇನ್ನೂ ಕೆಲವರು ಹಳ್ಳಿಗಳಲ್ಲೇ ಉಳಿದಿದ್ದಾರೆ. ಕೃಷಿ ಚಟುವಟಿಕೆಗಳಲ್ಲಿ ಆಸಕ್ತಿ ಇಲ್ಲದವರು, ಅಲ್ಲಿ ಕೆಲಸ ಮಾಡಲಾಗದವರು ಮತ್ತೆ ನಗರಗಳತ್ತ ಮುಖ ಮಾಡುತ್ತಿದ್ದಾರೆ. ಇನ್ನು ಕೆಲವರು ಆ ನಗರ ಜೀವನಕ್ಕಿಂತ ಇದೇ ಲೇಸು ಎನ್ನುವವರು ಚಡ್ಡಿ, ಬನಿಯನ್ ತೊಟ್ಟು ಹೊಲಕ್ಕೆ ಇಳಿದಿದ್ದಾರೆ. ಈಗ ತಾನೆ ಅಲ್ಲಲ್ಲಿ ಮಳೆಯಾಗುತ್ತಿದ್ದು, ಕೃಷಿ ಚಟುವಟಿಕೆ ಆರಂಭವಾಗಿರುವುದರಿಂದ ಇವರಿಗೆಲ್ಲ ಇದು ಅಗ್ನಿ ಪರೀಕ್ಷೆಯ ಸಮಯ.

      ಕೃಷಿಯಲ್ಲಿ ಏನೂ ಸಿಗದು, ಮಳೆ ಕೈ ಕೊಡುತ್ತಿದೆ. ಮಗ ಪೇಟೆಯಲ್ಲಿದ್ದು ಒಂದಿಷ್ಟು ಕಾಸು ಸಂಪಾದಿಸಲಿ ಎನ್ನುವ ಹಂಬಲದಲ್ಲಿ ಇರುವ ಪೋಷಕರೆ ಹೆಚ್ಚು. ಅಂತಹವರೂ ಈಗ ಮಕ್ಕಳನ್ನು ನಗರಕ್ಕೆ ಕಳುಹಿಸಲು ಹಿಂಜರಿಯುತ್ತಿದ್ದಾರೆ. ಇಷ್ಟು ದಿನ ಪ್ಯಾಂಟು, ಶರ್ಟ್ ಹಾಕಿಕೊಂಡು ನಗರವಾಸಿಯಾಗಿದ್ದ ನಾನು ಇನ್ನು ಮುಂದೆ ಈ ಹಳ್ಳಿಯಲ್ಲಿ ಎಲ್ಲರಂತೆ ಬಾಳ್ಮೆ ಮಾಡಲೆ ಎಂಬ ಮನಸ್ಥಿತಿಯೂ ಕೆಲವರಲ್ಲಿದೆ. ಕೇವಲ 10 ಸಾವಿರ ಸಿಗಲಿ, ಕಷ್ಟಕರ ದುಡಿಮೆ ಇರಲಿ ನಗರದಲ್ಲಿದ್ದರೆ ಅದರ ಗಮ್ಮತ್ತೇ ಬೇರೆ ಎಂದುಕೊಂಡಿದ್ದವರು ಈಗ ಅಡಕತ್ತರಿಗೆ ಸಿಲುಕಿಕೊಂಡಿದ್ದಾರೆ.

     ಹಳ್ಳಿಗೆ ಸೇರಿಕೊಂಡ ಕೆಲವರು ಇಸ್ಪೀಟ್ ಆಟಗಳಲ್ಲಿಯೂ ಮಗ್ನರಾದರು. ಇಂತಹ ಚಟುವಟಿಕೆಗಳಿಂದಲೂ ಹಣ ಕಳೆದುಕೊಂಡವರಿದ್ದಾರೆ. ಬೇಸರ ಕಳೆಯಲೆಂದು ಒಳ್ಳೊಳ್ಳೆ ಅಡಿಗೆ ಮಾಡಿಸಿಕೊಂಡು ಜೇಬು ಬರಿದು ಮಾಡಿಕೊಂಡವರು ಸಾಕಷ್ಟು ಮಂದಿ ಇದ್ದಾರೆ. ಹಣ ಇಲ್ಲದವರು ಈಗ ಅನಿವಾರ್ಯವೆಂಬಂತೆ ನಗರಗಳ ಕಡೆಗೆ ಮುಖ ಮಾಡುತ್ತಿದ್ದಾರೆ. ಕೆಲವು ಕಡೆ ಉದ್ಯೋಗ ನಷ್ಟದ ಭೀತಿ ಎದುರಾಗಿದೆ. ಇರುವ ಉದ್ಯೋಗ ಉಳಿಸಿಕೊಳ್ಳಬೇಕು ಎಂಬ ಧಾವಂತ ಕೆಲವರದ್ದು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link