ಚಿಕ್ಕನಾಯಕನಹಳ್ಳಿ :
ತಾಲ್ಲೂಕಿನಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಆರಂಭದಿಂದಲೇ ಚುರುಕುಗೊಂಡಿತ್ತು, ಮಧ್ಯಾಹ್ನವಾಗುತ್ತಾ ಮತದಾನ ಬಿರುಸುಗೊಂಡಿತು, ಅಲ್ಲಲ್ಲಿ ಮತದಾನದ ವೇಳೆ ಸಣ್ಣಪುಟ್ಟ ಸಮಸ್ಯೆ ಉಂಟಾದರೂ ತಾಲ್ಲೂಕಿನಲ್ಲಿ ಶಾಂತಿಯುತವಾಗಿ ಮತದಾನ ಜರುಗಿತು.
ಹೃದಯಾಘಾತದಿಂದ ಸಾವು :
ಅಭ್ಯರ್ಥಿಗಳು ಮತದಾರರಿಗೆ ಮತದಾನ ಮಾಡಲು ಅನುಕೂಲವಾಗಲೆಂದು ಆಟೋಗಳು, ಟ್ರಾಕ್ಟರ್ ಮೂಲಕ ಮತದಾರನ್ನು ಮತಕೇಂದ್ರದತ್ತ ಕರೆತರುತ್ತಿದ್ದರು, ತಾಲ್ಲೂಕಿನ ತೀರ್ಥಪುರದಲ್ಲಿ ಪುಟ್ಟಮರುಳಾರಾಧ್ಯ(80) ಎಂಬ ನಿವೃತ್ತ ಶಿಕ್ಷಕರು ಮತಕೇಂದ್ರದೊಳಗೆ ತೆರಳುವಾಗ ಹೃದಯಾಘಾತವಾಗಿ ಕುಸಿದುಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇವರಿಗೆ ಮೊದಲೇ ಅನಾರೋಗ್ಯವಿತ್ತೆಂದು ತಿಳಿದು ಬಂದಿದೆ.
ತಾಲ್ಲೂಕಿನ ಜಾಣೇಹರ್ ಗ್ರಾಮದಲ್ಲಿ ಕರಿಯಮ್ಮ ಎಂಬ ಹೆಸರಿನ ಇಬ್ಬರ ಹೆಸರ ಕ್ರಮಸಂಖ್ಯೆ 1 ಮತ್ತು 2 ಇದ್ದದ್ದು ಹಾಗೂ ಈ ಅಭ್ಯರ್ಥಿಗಳ ಚಿಹ್ನೆಗಳು ನೆಕ್ಲೆಸ್ ಹಾಗೂ ಉಂಗುರ ಎರಡೂ ಒಂದೇ ರೀತಿಯಲ್ಲಿ ಕಾಣಿಸುತ್ತಿದ್ದವೆಂದು ಮತದಾರರು, ಅಭ್ಯರ್ಥಿಗಳು ಆರೋಪಿಸಿದ್ದರು, ಈ ವೇಳೆ ಮತದಾನದ ಕೇಂದ್ರದ ಬಳಿ ಸಮಸ್ಯೆ ಉಂಟಾಗಿತ್ತು, ತಹಶೀಲ್ದಾರ್ ಸ್ಥಳಕ್ಕೆ ತೆರಳಿ ಸಮಸ್ಯೆ ಬಗೆಹರಿಸಿ ಮತದಾನ ಮಾಡಲು ಅನುವು ಮಾಡಿಕೊಟ್ಟರು.
ಗ್ರಾ.ಪಂ.ಚುನಾವಣೆ ಚುನಾವಣೆ ಹಿನ್ನೆಲೆಯಲ್ಲಿ ತುಮಕೂರು ಪೊಲಿಸ್ ವರಿಷ್ಠಾಧಿಕಾರಿ ತಾಲ್ಲೂಕಿನ ಕಂದಿಕೆರೆ, ಶೆಟ್ಟಿಕೆರೆ ಹೋಬಳಿಗಳ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಮತದಾನದ ಹಾಗೂ ಮತಕೇಂದ್ರಗಳನ್ನು ಪರಿಶೀಲಿಸಿದರು.
ಸಚಿವ ಜೆ.ಸಿ.ಮಾಧುಸ್ವಾಮಿ ಜೆ.ಸಿ.ಪುರ ಮತದಾನ ಕೇಂದ್ರದಲ್ಲಿ ಕುಟುಂಬ ಸಮೇತ ಆಗಮಿಸಿ ಮತದಾನ ಮಾಡಿದರು. ತಾಲ್ಲೂಕಿನ ತಮ್ಮಡಿಹಳ್ಳಿ ಮಠದ ಪೀಠಾಧ್ಯಕ್ಷರಾದ ಡಾ.ಅಭಿನವ ಮಲ್ಲಿಕಾರ್ಜುನಸ್ವಾಮೀಜಿಗಳು ಕುಪ್ಪೂರಿನ ಅಬೂಜಿಹಳ್ಳಿಯಲ್ಲಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದರು.
ಮತದಾನಕ್ಕೂ ಹಿಂದಿನ ದಿನ ರಾತ್ರಿ ವೇಳೆ ಮತದಾರರಿಗೆ ಹಣ ಥೈಲಿ ಓಡಾಡಿದೆ, ಕುಕ್ಕುರ್ ಗಳು ವಿಶಲ್ ಹೊಡೆದಿವೆ, ಹಲವು ಮತದಾರರು ಶನಿವಾರ ರಾತ್ರಿಯಿಂದ ಬೆಳಗಿನವರೆಗೆ ಅಭ್ಯರ್ಥಿಗಳು ಕೊಡುವ ಉಡುಗೊರೆಗಳ ಲೆಕ್ಕಾಚಾರದಲ್ಲಿ ತೊಡಗಿದ್ದು ವಿಶೇಶವಾಗಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
