ಮಧುಗಿರಿ:
ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಸೇರಿದ್ದರಿಂದ ದೇವೇಗೌಡರು ಸೋಲು ಅನುಭವಿಸಬೇಕಾಯಿತು. ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು.
ತಾಲ್ಲೂಕಿನ ದೊಡ್ಡೇರಿ ಹೋಬಳಿಯ ಕೈಮರ ಗ್ರಾಮದಲ್ಲಿರುವ ಶಾಸಕರ ನಿವಾಸದಲ್ಲಿ ಜೆಡಿಎಸ್ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ವಿಧಾನಸಭಾ ಕ್ಷೇತ್ರದ ಕಸಬಾ ಹಾಗೂ ದೊಡ್ಡೇರಿ ಹೋಬಳಿ ಚುನಾಯಿತ ಪ್ರತಿನಿಧಿಗಳ ಹಾಗೂ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾವು ಕೆಟ್ಟಿದ್ದು ಕಾಂಗ್ರೆಸ್ ಪಕ್ಷದ ಮೈತ್ರಿಯಿಂದ. ನಾವು ಅವರ ಜೊತೆ ಮೈತ್ರಿ ಮಾಡಿಕೊಳ್ಳದೆ ನಾವೇ ನೇರವಾಗಿ ಸ್ಪರ್ಧೆ ಮಾಡಿದ್ದರೆ ಒಂದೂವರೆ ಲಕ್ಷಕ್ಕೂ ಅಧಿಕ ಮತಗಳಿಂದ ನಾವು ಜಯಶೀಲರಾಗುತ್ತಿದ್ದೆವು. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅನೇಕ ಜನಪರ ಯೋಜನೆಗಳನ್ನು ನೀಡಿದ್ದಾರೆ.
25 ಸಾವಿರ ಕೋಟಿ ರೂ. ರೈತರ ಸಾಲ ಮನ್ನಾ ಮಾಡಿದ್ದಾರೆ. ಲಾಟರಿ ನಿಷೇಧ, ಸಾರಾಯಿ ನಿಷೇಧದಂತಹ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ವಿಧಾನ ಸಭಾ ಚುನಾವಣೆಯಲ್ಲಿ ಎಲ್ಲಾ ಸಮುದಾಯದವರು ನನಗೆ ಮತಗಳನ್ನು ನೀಡಿ ಆಶೀರ್ವದಿಸಿದ್ದಾರೆ, ಅವರ ಋಣ ತೀರಿಸುತ್ತೇನೆ. ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೆ ಭದ್ರಾ ಮೇಲ್ದಂಡೆ ಯೋಜನೆ ಮೂಲಕ ತಾಲ್ಲೂಕಿಗೆ ನೀರು ಹರಿಸುವುದಲ್ಲದೆ ಮಧುಗಿರಿಯನ್ನು ಜಿಲ್ಲೆಯನ್ನಾಗಿ ಮಾಡುತ್ತೇವೆ ಎಂದರು.
ಶಾಸಕ ಡಿ.ಸಿ.ಗೌರಿಶಂಕರ್ ಮಾತನಾಡಿ, ಶಿರಾ ಸಭೆಯಲ್ಲಿ ಕುಳಿತ ಕಾಂಗ್ರೆಸ್ ನಾಯಕರೆಲ್ಲಾ ನನ್ನ ಸಂಪರ್ಕದಲ್ಲಿದ್ದಾರೆ. ಅವರೆಲ್ಲರೂ ನಮಗೆ ಸಹಾಯ ಮಾಡುತ್ತಾರೆ. ಕಾಂಗ್ರೆಸ್ನವರು ಒಗ್ಗಟ್ಟು ಪ್ರದರ್ಶನ ಮಾಡುತ್ತಿರುವುದು ಕೇವಲ ತಾತ್ಕಾಲಿಕ ಅಷ್ಟೆ. ಈಗ ಆ ನಾಯಕರಿಗೆ ಭೀತಿ ಶುರುವಾಗಿದ್ದು, ಬೇರೆಯೇ ರೀತಿಯಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಜಿಲ್ಲೆಯ 10 ತಾಲ್ಲೂಕುಗಳಲ್ಲೂ ಜೆಡಿಎಸ್ ಪಕ್ಷ ಕಾಂಗ್ರೆಸ್ಗೆ ನೇರ ಸ್ಪರ್ಧೆ ನೀಡುತ್ತಿದೆ. ಇಷ್ಟು ದಿನ ದೇವೇಗೌಡರನ್ನು ನಾವೇ ಸೋಲಿಸಿದ್ದು ಎಂದು ಬೀಗುತ್ತಿದ್ದ ಕಾಂಗ್ರೆಸ್ನವರು, ಈಗ ಸೋಲಿನ ಭೀತಿಯಿಂದ ದೇವೇಗೌಡರನ್ನು ನಾವು ಸೋಲಿಸಿಲ್ಲ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ.
ದೇವೇಗೌಡರ ಸೋಲನ್ನು ಮನದಲ್ಲಿಟ್ಟುಕೊಂಡು ಮತದಾರರು ಮತ ಚಲಾಯಿಸಬೇಕು. ಬಿಜೆಪಿಯವರು ಡಮ್ಮಿ ಅಭ್ಯರ್ಥಿಯನ್ನು ಹಾಕಿ ಕಾಂಗ್ರೆಸ್ನೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ. ಅವರಿಗೆ ಮತದಾರರು ತಕ್ಕ ಪಾಠ ಕಲಿಸಬೇಕು. ಮಧುಗಿರಿ ಕ್ಷೇತ್ರದಲ್ಲಿ 350 ಕ್ಕೂ ಹೆಚ್ಚು ಮತಗಳು ಜೆಡಿಎಸ್ ಪಕ್ಷಕ್ಕೆ ಬರಲು ಕಾರ್ಯಕರ್ತರು ಶ್ರಮವಹಿಸಬೇಕು ಎಂದರು.
ವಿಧಾನ ಪರಿಷತ್ ಚುನಾವಣಾ ಅಭ್ಯರ್ಥಿ ಅನಿಲ್ ಕುಮಾರ್ ಮಾತನಾಡಿ, ನಾನು ಜನ ಸೇವೆ ಮಾಡಲು ಬಂದಿದ್ದು, ಮುಂದೆ ಕ್ಷೇತ್ರದಲ್ಲಿ ಉತ್ತಮ ಅಭಿವೃದ್ಧಿ ಯೋಜನೆಗಳನ್ನು ಮಾಡುತ್ತೇನೆ. ಮಧುಗಿರಿಯಲ್ಲಿ ಕೈಗಾರಿಕಾ ವಲಯ ಸ್ಥಾಪಿಸಲು ಕ್ರಮ ಕೈಗೊಳ್ಳುತ್ತೇನೆ. ಗ್ರಾಮ ಪಂಚಾಯಿತಿಗಳಿಗೆ ಅನುದಾನಗಳು ಸರಿಯಾದ ಸಮಯಕ್ಕೆ ಬರುವಂತೆ ಮಾಡುತ್ತೇನೆ, ಎಲ್ಲರೂ ನನಗೆ ಮೊದಲ ಪ್ರಾಶಸ್ತ್ಯ ಮತ ನೀಡಬೇಕು ಎಂದರು.
ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಜೆಡಿಎಸ್ ಪಕ್ಷದ ವೀಕ್ಷಕ ಮಂಜುನಾಥ್ ಮಾತನಾಡಿ, ಇಲ್ಲಿನ ಬಿಜೆಪಿ ಅಭ್ಯರ್ಥಿ ಈ ಹಿಂದೆ ಬಿಬಿಎಂಪಿಗೆ ಸ್ಪರ್ಧಿಸಿದ್ದಾಗ ಕೂಪನ್ಗಳನ್ನು ನೀಡಿ ಗೆದ್ದಿದ್ದರು. ಬಿಜೆಪಿ ಪಕ್ಷದವರು ಕೀಳು ಮಟ್ಟದ ಹಾಗೂ ದ್ವೇಷದ ರಾಜಕಾರಣ ಮಾಡುತ್ತಿದ್ದು, ಅನುದಾನ ನೀಡುವಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ. ಕಾಂಗ್ರೆಸ್ ಒಡೆದ ಮನೆಯಾಗಿದ್ದು, ಅವರು ಈ ಜನ್ಮದಲ್ಲಿ ಸರಿಹೋಗುವುದಿಲ್ಲ. ಕಾಂಗ್ರೆಸ್ ಅಭ್ಯರ್ಥಿ ಗೆದ್ದರೆ ಇಲ್ಲಿ ಯಾವುದೇ ಕಾಮಗಾರಿಗಳನ್ನು ನಡೆಸಲು ಅವರೇ ಬಿಡುವುದಿಲ್ಲ ಎಂದರು.
ಪುರಸಭಾ ಸದಸ್ಯರುಗಳಾದ ಎಂ.ಆರ್.ಜಗನ್ನಾಥ್, ಎಂ.ಎಲ್.ಗಂಗರಾಜು, ಕೆ.ನಾರಾಯಣ್, ಎಂ.ಎಸ್.ಚಂದ್ರಶೇಖರ್ ಬಾಬು, ಗ್ರಾಮ ಪಂಚಾಯಿತಿ ಅಧ್ಯಕ್ಷ ಗಿರೀಶ್, ಜೆಡಿಎಸ್ ತಾಲ್ಲೂಕು ಯುವ ಘಟಕದ ಅಧ್ಯಕ್ಷ ಕೇಬಲ್ ಸುಬ್ಬು, ಮುಖಂಡರುಗಳಾದ ತುಂಗೋಟಿ ರಾಮಣ್ಣ, ಬೆಳ್ಳಿ ಲೋಕೇಶ್, ಬಸವರಾಜು, ಗುಂಡಗಲ್ ಶಿವಣ್ಣ, ಬಸವರಾಜು, ಸಿಡದರಗಲ್ಲು ಶ್ರೀನಿವಾಸ್, ಸಿದ್ದಣ್ಣ, ಚೌಡಪ್ಪ, ನಾಗಭೂಷಣ್, ರವಿ, ಭಾರತಿ ಗೋವಿಂದರಾಜು, ಮಂಜುಳಾ, ಶ್ರೀನಿವಾಸ್, ತಿಮ್ಮಣ್ಣ, ಗೋವಿಂದರೆಡ್ಡಿ, ಕಂಭತ್ತನಹಳ್ಳಿ ರಘು, ರವಿ ಬಜ್ಜ, ಟಪಾಲ್ ಮಂಜುನಾಥ್, ಶಿವಪ್ಪ, ಶೈಲಿ ರವಿ, ಮೋಹನ್ ಮುಂತಾದವರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
