ಕುಣಿಗಲ್:
ಓಬಿಸಿ ಆಯೋಗದ ಮಾಜಿ ಅಧ್ಯಕ್ಷ ದ್ವಾರಕನಾಥ್ ಆಕ್ರೋಶ
ತಾಲ್ಲೂಕಿನಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯು ಸರ್ಕಾರದ ನೀತಿ ನಿಯಮವನ್ನು ಗಾಳಿಗೆ ತೂರಿ ಬಳ್ಳಾರಿ ಗಣಿಗಾರಿಕೆಯ ದಂಧೆಯನ್ನೆ ಮೀರಿಸುವಂತಿದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್.ದ್ವಾರಕನಾಥ್ ಆಕ್ರೋಶ ವ್ಯಕ್ತಪಡಿಸಿದರು.
ತಾಲ್ಲೂಕಿನ ಕಸಬಾ ಹೋಬಳಿಯ ಅಂದಲಕುಪ್ಪೆ, ತರೀಕೆರೆ, ಹಂಗರಹಳ್ಳಿ ಸೇರಿದಂತೆ 8 ಪ್ರದೇಶಗಳಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದು, ಆ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿ ತಾಲೂಕಿನಲ್ಲಿ ಹೇಳೋರು ಕೇಳೋರು ಯಾರು ಇಲ್ವಾ, ಅಧಿಕಾರಿಗಳು ಏತಕ್ಕಾಗಿ ಕ್ರಮ ಕೈಗೊಂಡಿಲ್ಲ, ಕಲ್ಲು ಗಣಿಗಾರಿಕೆಗೆ ಬಳಸುತ್ತಿರು ಭೂಮಿ ಎತ್ತರದ ಬೆಟ್ಟ ಗುಡ್ಡದಂತಿದ್ದು, ಬಂಡೆಗಳ ರಾಶಿಯನ್ನು ಒಡೆದು ಕರಗಿಸುತ್ತಿದೆ. ಗಣಿಗಾರಿಕೆಗಾಗಿ ಭೂಮಿಯನ್ನು 150 ಅಡಿ ಪಾತಾಳಕ್ಕೆ ಕೊರೆದಿರುವುದು ಆತಂಕಕ್ಕೆ ಕಾರಣವಾಗಿದೆ.
ಜನ-ಜಾನುವಾರುಗಳಿಗೆ ರೋಗ :
ಈ ಭಾಗದಲ್ಲಿ ವಾಸಿಸುವ ಕಾಡುಗೊಲ್ಲ, ಬುಡಕಟ್ಟು ಜನಾಂಗ, ಲಂಬಾಣಿ, ಪರಿಶಿಷ್ಟ ಜನಾಂಗದ ಕಾಲೋನಿಗಳ ಮನೆಗಳು ಈಗಾಗಲೆ ಗಣಿಗಾರಿಕೆಯಿಂದ ಜಾನುವಾರುಗಳು ಮನುಷ್ಯರು ಧೂಳಿನಿಂದ ರೋಗಕ್ಕೆ ತುತ್ತಾಗುತ್ತಿದ್ದಾರೆ. ಬುಡಕಟ್ಟು ಜನಾಂಗಗಳು ಹೆಚ್ಚು ವಾಸ ಮಾಡುತ್ತಿರುವ ಈ ಪ್ರದೇಶವು ಆರ್ಥಿಕವಾಗಿ ಬಹಳ ಹಿಂದುಳಿದಿದ್ದು, ಇಲ್ಲಿನ ಜನರು ಜೀವನ ನಿರ್ವಹಣೆಗಾಗಿ ಕುರಿ, ಇತರೆ ಪ್ರಾಣಿಗಳನ್ನು ಸಾಕುತ್ತಿದ್ದಾರೆ. ಗಣಿಗಾರಿಕೆಯಿಂದ ಈ ಪ್ರಾಣಿಗಳಿಗೂ ರೋಗ-ರುಜನಗಳು ಕಾಡುತ್ತಿವೆ. ಇನ್ನೂ ಕೂಲಿ-ನಾಲಿ ಮಾಡಿಕೊಂಡು ಜೀವನ ನಡೆಸುತ್ತಿರುವ ಇವರ ಬದುಕು ಅಸಹಾಯಕವಾಗಿದೆ ಎಂದ ಅವರು, ಅಧಿಕಾರಿಗಳು ಗಮನ ಹರಿಸದೆ ಉದಾಸೀನ ಮಾಡಿರುವುದು ವಿಷಾದನೀಯ ಎಂದು ದ್ವಾರಕನಾಥ್ ತಿಳಿಸಿದರು.
ಈ ಸಂದರ್ಭದಲ್ಲಿ ಕಾಡುಗೊಲ್ಲ ಅಸ್ಪೃಶ್ಯತೆ ಹೋರಾಟ ಸಮಿತಿ ರಾಜ್ಯ ಸಂಚಾಲಕ ಜಿ.ಕೆ.ನಾಗಣ್ಣ. ಪುರಸಭಾ ಸದಸ್ಯ ಶ್ರೀನಿವಾಸ್, ಗ್ರಾಮದ ಧನಂಜಯ, ಮರೇಗೌಡ, ರಾಜಣ್ಣ, ಶಿವಕುಮಾರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಸರ್ಕಾರಕ್ಕೆ ಪಾವತಿಸಬೇಕಾದ ಕೋಟ್ಯಾಂತರ ರೂ.ಗಳ ರಾಜಧನವನ್ನು ನೀಡದೆ ವಂಚನೆ ಮಾಡುತ್ತಿರುವ ಕಲ್ಲುಗಣಿ ಗುತ್ತಿಗೆ ಪಡೆದಿರುವ ಮಾಲೀಕರು ಸರ್ಕಾರಿ ಕಡತಗಳಲ್ಲಿ ನಿಯಮ ಪಾಲಿಸಿದರೆ ಸಾಲದು, ಇಲ್ಲಿನ ಪ್ರದೇಶದಲ್ಲೂ ನಿಯಮ ಪಾಲಿಸಬೇಕು. ಆದರೆ ಸರ್ಕಾರದ ಯಾವುದೆ ನಿಯಮಗಳನ್ನು ಪಾಲಿಸದೆ ಮೋಸ ಮಾಡುತ್ತಿದ್ದಾರೆ.
-ಸಿ.ಎಸ್.ದ್ವಾರಕನಾಥ್, ಮಾಜಿ ಅಧ್ಯಕ್ಷರು, ರಾಜ್ಯ ಓಬಿಸಿ ಶಾಶ್ವತ ಆಯೋಗ
ಮಾನವ ಹಕ್ಕುಗಳ ಉಲ್ಲಂಘನೆ :
ಬಂಡೆಗಳ ಸ್ಪೋಟದಿಂದ ಭೂಮಿ ಅದುರುವಿಕೆ, ಕಂಪನ ಉಂಟಾಗಿ ಅಕ್ಕಪಕ್ಕದ ಗ್ರಾಮಗಳ ಮನೆಗಳು ಬಿರುಕುಬಿಟ್ಟಿವೆ. ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ನಡೆಯುವುದರಿಂದ ಧೂಳು, ಶಬ್ದಕ್ಕೆ ಜೀವರಾಶಿಗಳಿಗೆ, ಪ್ರಾಣಿ-ಪಕ್ಷಿಗಳಿಗೆ ಮಾರಕವಾಗುತ್ತದೆ. ರಾಜಧಾನಿಗೆ ಕೇವಲ 80 ಕಿಮೀ ಸಮೀಪವೆ ಇರುವ ಇಂತಹ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆಸುತ್ತ ಮಾನವ ಹಕ್ಕು ಉಲ್ಲಂಘನೆ ಮಾಡಿ ಜನ ಜೀವನವನ್ನು ಹಾಳು ಮಾಡುತ್ತಿರುವ ಬಗ್ಗೆ ಕ್ರಮ ತೆಗೆದುಕೊಳ್ಳಬೇಕೆಂದು ಅವರು ಒತ್ತಾಯಪಡಿಸಿದರು. ಈಗಾಗಲೇ ಗ್ರಾಮದಲ್ಲಿ ಕುರಿಗಳು ಧೂಳು, ಕಲುಷಿತ ನೀರು ಕುಡಿದು ಸಾವನ್ನಪ್ಪಿರುವ ಬಗ್ಗೆ ಜಯಮ್ಮ ಎಂಬ ಮಹಿಳೆಯೊಬ್ಬರು ವಿವರಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
