ಮೇಕೆದಾಟು : ಪಾದಯಾತ್ರೆ ನಿಲ್ಲುವುದಿಲ್ಲ

ಕೊರಟಗೆರೆ:


 ರೈತರಿಗೆ ಪಂಪು-ಮೋಟಾರ್ ವಿತರಿಸಿ ಶಾಸಕ ಡಾ.ಜಿ.ಪರಮೇಶ್ವರ್ ನುಡಿ

    ಮೇಕೆದಾಟು ನೀರಾವರಿ ಯೋಜನೆಗಾಗಿ ಕರ್ನಾಟಕ ಕಾಂಗ್ರೆಸ್ ಪಕ್ಷ ಪಾದಯಾತ್ರೆಗೆ ತಯಾರಿ ನಡೆಸುತ್ತಿದೆ. ರಾಜ್ಯ ಸರಕಾರ ಪಾದಯಾತ್ರೆಯನ್ನು ಕೋವಿಡ್-೧೯ ಲಾಕ್‌ಡೌನ್-ನೈಟ್‌ಕರ್ಫ್ಯೂ ಹೆಸರಿನಲ್ಲಿ ಹತ್ತಿಕ್ಕುವ ಕೆಲಸ ಮಾಡುತ್ತಿದೆ. ನೀರಾವರಿ ಯೋಜನೆಯ ಪಾದಯಾತ್ರೆ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ.

ಯಾರೂ ಪಾದಯಾತ್ರೆಯನ್ನು ನಿಲ್ಲಿಸಲು ಆಗುವುದಿಲ್ಲ ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ತಿಳಿಸಿದರು

ಅವರು ಕೊರಟಗೆರೆ ಪಟ್ಟಣದ ಶಾಸಕರ ಕಚೇರಿ ಆವರಣದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಗಂಗಾಕಲ್ಯಾಣ ಯೋಜನೆಯಡಿ ೨೦೧೮-೧೯ನೆ ಸಾಲಿನ ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ನಿಗಮದಿಂದ ರೈತರಿಗೆ ಪಂಪು-ಮೋಟಾರ್ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರದಲ್ಲಿ ಮೇಕೆದಾಟು ಯೋಜನೆಯ ರೂಪರೇಷೆ ಸಿದ್ದಗೊಂಡಿದೆ. ಸಮ್ಮಿಶ್ರ ಸರಕಾರದ ಅವಧಿಯಲ್ಲಿ ನಾನು ಉಪಮುಖ್ಯಮಂತ್ರಿ ಮತ್ತು ಡಿ.ಕೆ.ಶಿವಕುಮಾರ್ ನೀರಾವರಿ ಸಚಿವರಾಗಿದ್ದಾಗ ಮತ್ತೆ ಕೇಂದ್ರ ಸರಕಾರಕ್ಕೆ ಮೇಕೆದಾಟು ಯೋಜನೆಯ ವರದಿ ಕಳುಹಿಸಿದ್ದೇವೆ.

ಬೆಂಗಳೂರು ನಗರಕ್ಕೆ ಕುಡಿಯುವ ನೀರು ಕಲ್ಪಿಸುವ ೯ ಸಾವಿರ ಕೋಟಿ ರೂ. ವೆಚ್ಚದ ಮೇಕೆದಾಟು ಯೋಜನೆಯ ಕಾರ್ಯಗತಕ್ಕೆ ಪಾದಯಾತ್ರೆ ಮೂಲಕ ಒತ್ತಾಯ ಮಾಡುತ್ತೇವೆ ಎಂದು ಹೇಳಿದರು.
ಕೊರಟಗೆರೆ ಪಟ್ಟಣದಲ್ಲಿ ಅಂಬೇಡ್ಕರ್, ಬಾಬು ಜಗಜೀವನರಾಂ ಮತ್ತು ವಾಲ್ಮೀಕಿ ಭವನಗಳಿಗೆ ಈಗಾಗಲೆ ಜಾಗವನ್ನು ಗುರುತಿಸಿ ನಿಗಮಗಳಿಗೆ ನೀಡಲಾಗಿದೆ.

ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಮೂರು ಭವನಗಳ ನಿರ್ಮಾಣಕ್ಕೆ ಮಂಜೂರು ಮಾಡಿರುವ ೪ ಕೋಟಿಗೂ ಅಧಿಕ ಅನುದಾನವನ್ನು ರಾಜ್ಯ ಸರಕಾರ ಮತ್ತು ನಿಗಮಗಳ ಅಧಿಕಾರಿವರ್ಗ ತಕ್ಷಣ ಬಿಡುಗಡೆ ಮಾಡಬೇಕಿದೆ ಎಂದು ಆಗ್ರಹ ಮಾಡಿದರು.

ಗಂಗಾಕಲ್ಯಾಣ ಯೋಜನೆಯಡಿ ೨೦೧೮-೧೯ನೇ ಸಾಲಿನ ದೇವರಾಜ ಅರಸು ಮತ್ತು ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದಿಂದ ಈಗಾಗಲೇ ೧೬ ರೈತರ ಜಮೀನಿನಲ್ಲಿ ಕೊಳವೆಬಾವಿ ಕೊರೆಸಲಾಗಿದೆ. ಇದೀಗ ಆ ೧೬ ರೈತರಿಗೆ ಪಂಪು-ಮೋಟಾರ್ ವಿತರಿಸಿ ವ್ಯವಸಾಯಕ್ಕೆ ಅನುಕೂಲ ಕಲ್ಪಿಸಿದ್ದೇನೆ.

೨೦೧೯-೨೦ ಮತ್ತು ೨೦೨೦-೨೧ನೇ ಸಾಲಿನ ಫಲಾನುಭವಿಗಳ ಅನುಮೋದನೆ ಮಾಡುವಂತೆ ಸರಕಾರಕ್ಕೆ ಒತ್ತಾಯ ಮಾಡಿದರು.

ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕೆರೆಶಂಕರ್, ಅಶ್ವತ್ಥನಾರಾಯಣ್, ಮಹಿಳಾ ಅಧ್ಯಕ್ಷೆ ಜಯಮ್ಮ, ಯುವಾಧ್ಯಕ್ಷ ವಿನಯ್, ತಾಪಂ ಮಾಜಿ ಅಧ್ಯಕ್ಷ ಟಿ.ಸಿ.ರಾಮಯ್ಯ, ಉಪಾಧ್ಯಕ್ಷ ವೆಂಕಟಪ್ಪ, ತಾಪಂ ಇಓ ದೊಡ್ಡಸಿದ್ದಯ್ಯ, ಬೆಸ್ಕಾಂ ಎಇಇ ಮಲ್ಲಣ್ಣ, ಮುಖಂಡರಾದ ಕಾರು ಮಹೇಶ್, ಅರವಿಂದ್, ಈಶ್ವರಪ್ಪ, ರಾಜಣ್ಣ, ಕವಿತಾ, ವಿಭೂತಿ ಸಿದ್ದಪ್ಪ ಸೇರಿದಂತೆ ಇತರರು ಇದ್ದರು.

Recent Articles

spot_img

Related Stories

Share via
Copy link