ನೆಲಮಂಗಲ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ರಾಜಹಂಸ ಬಸ್ ಚಾಲಕರೊಬ್ಬರು ಸಾವಿನಲ್ಲೂ ಮಾನವೀಯತೆ ಮೆರೆದು ಪ್ರಯಾಣಿಕರ ಜೀವ ಉಳಿಸಿದ್ದಾರೆ. ಇದರಿಂದಾಗಿ ಭಾರಿ ಅನಾಹುತ ತಪ್ಪಿದೆ. ಉತ್ತರ ಕರ್ನಾಟಕ ಮೂಲದ ರಾಜೀವ್ ಬಿರಾದಾರ್ (50) ಬೆಂಗಳೂರಿಂದ ಹರಿಹರಕ್ಕೆ ಹೋಗುತ್ತಿದ್ದ ಕೆಎಸ್ಆರ್ಟಿಸಿ ರಾಜಹಂಸ ಬಸ್ ಚಲಾಯಿಸುತ್ತಿದ್ದರು. ನೆಲಮಂಗಲದ ಜಾಸ್ ಟೋಲ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದಾಗ ಅವರಿಗೆ ಎದೆನೋವು ಕಾಣಿಸಿಕೊಂಡಿದೆ.
ಸಮಯಪ್ರಜ್ಞೆ ಮೆರೆದ ಅವರು ತಕ್ಷಣವೇ ಬಸ್ಸನ್ನು ಹೆದ್ದಾರಿಯಲ್ಲಿ ಒಂದು ಬದಿಯಲ್ಲಿ ನಿಲ್ಲಿಸಿದ್ದಾರೆ. ಇದರಿಂದ ಸಂಭಾವ್ಯ ಅಪಘಾತ ತಪ್ಪಿದ್ದು, ಪ್ರಯಾಣಿಕರು ಬಚಾವಾಗಿದ್ದಾರೆ. ಕೂಡಲೇ ಆ್ಯಂಬುಲೆನ್ಸ್ಗೆ ಕರೆ ಮಾಡಲಾಯಿತಾದರೂ, ಅದು ಸ್ಥಳಕ್ಕೆ ಬರುವ ವೇಳೆಗೆ ಸೂಕ್ತ ಚಿಕಿತ್ಸೆ ಸಿಗದ ಕಾರಣ ರಾಜೀವ್ ಬಿರಾದಾರ್ ಅಸುನೀಗಿದರು. ಪ್ರಾಣ ಹೋಗುವ ನೋವಿನಲ್ಲೂ ಪ್ರಯಾಣಿಕರ ಪ್ರಾಣ ಉಳಿಸಿದ ಚಾಲಕನಿಗೆ ಜನ ಕಂಬನಿ ಮಿಡಿದಿದ್ದಾರೆ.
