ತುಮಕೂರು
1863ರಲ್ಲಿ ಯುರೋಪಿನ ವರ್ತಕನಾದ ಹೆನ್ರಿ ಡುನೆಂಟ್ನಿಂದ ಸ್ಥಾಪನೆಯಾದ ರೆಡ್ಕ್ರಾಸ್ ಸಂಸ್ಥೆ ವಿಶ್ವಮಾನ್ಯತೆಯನ್ನು ಪಡೆದಿದೆ. 190 ರಾಷ್ಟ್ರಗಳಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದೆ. ಇದು ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸುತ್ತಿರುವ ಏಕೈಕ ಜಾಗತಿಕ ಮಹಾಸಂಸ್ಥೆ ಎಂದು ತುಮಕೂರು ವಿಶ್ವವಿದ್ಯಾನಿಲಯದ ರೆಡ್ಕ್ರಾಸ್ನ ಸಂಚಾಲಕರಾದ ಡಾ.ಪರಶುರಾಮ್ ತಿಳಿಸಿದರು.
ಅವರು ಗುರುವಾರ ನಗರದ ಶ್ರೀ ಸಿದ್ಧಗಂಗಾ ಮಹಿಳಾ ಕಾಲೇಜಿನಲ್ಲಿ ಏರ್ಪಡಿಸಿದ್ದ ಯುವರೆಡ್ ಕ್ರಾಸ್ನ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದರು. ಜಗತ್ತಿನ ಶಾಂತಿಗಾಗಿ ಪ್ರಯತ್ನಿಸುತ್ತಾ ವಿಶ್ವಸಂಸ್ಥೆಯಲ್ಲಿ ಮಾನ್ಯತೆಯನ್ನು ಪಡೆದುಕೊಂಡಿರುವ ಈ ಸಂಸ್ಥೆ ಮೂರು ಬಾರಿ ನೊಬೆಲ್ ಪ್ರಶಸ್ತಿಯನ್ನು “ಶಾಂತಿ” ಸ್ಥಾಪನೆಗಾಗಿ ಪಡೆದುಕೊಂಡಿದೆ. ಇದೊಂದು ಸ್ವಯಂ ಸೇವಾ ಸಂಸ್ಥೆಯಾಗಿದ್ದು ಯುವಕರಲ್ಲಿ ಸೇವಾ ಮನೋಭಾವವನ್ನು ಮೂಡಿಸುವುದೇ ಇದರ ಮುಖ್ಯ ಗುರಿಯಾಗಿದೆ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ.ಡಿ.ಎನ್.ಯೋಗೀಶ್ವರಪ್ಪ ವಿದ್ಯಾರ್ಥಿಗಳು ಕೇವಲ ಪುಸ್ತಕದ ಹುಳುಗಳಾಗದೇ ಇಂತಹ ಸ್ವಯಂಸೇವಾ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸಿದರೆ ಉತ್ತಮ ನಾಯಕರಾಗಲು ಸಾಧ್ಯ. ಕಾಲೇಜಿನ ಎಲ್ಲಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಕರೆ ನೀಡಿದರು.
ವೇದಿಕೆಯಲ್ಲಿ ವಾಣಿಜ್ಯೋದ್ಯಮಿ ಸುರೇಂದ್ರಶಾ ಮತ್ತು ಯುವರೆಡ್ ಕ್ರಾಸ್ನ ಕಾರ್ಯಕ್ರಮಾಧಿಕಾರಿ ಕಿರಣ್ಕುಮಾರ್ ಎಚ್.ಎಸ್. ಹಾಜರಿದ್ದರು. ಇದೇ ಸಂದರ್ಭದಲ್ಲಿ 2018-19 ರ ಸಾಲಿಗೆ ಯುವ ರೆಡ್ಕ್ರಾಸ್ಗೆ ಮೊದಲ ಬಿಸಿಎ ವಿದ್ಯಾರ್ಥಿನಿ ಸುಮಾರವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಜ್ಯೋತಿಪರೀಕ್, ಪ್ರಧಾನ ಕಾರ್ಯದರ್ಶಿ ಅನುಷಾ, ಸಹಕಾರ್ಯದರ್ಶಿಯಾಗಿ ಕಾವ್ಯ ಮತ್ತು ಖಜಾಂಚಿಯಾಗಿ ಸುಷ್ಮರವರು ಆಯ್ಕೆಯಾದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
