ತುಮಕೂರು:
ನಗರದ ರೈಲ್ವೆ ನಿಲ್ದಾಣದ ಸಮೀಪವಿರುವ ಪ್ರವಾಸಿ ಮಂದಿರದಲ್ಲಿ ಅಂಬೇಡ್ಕರ್ ವಿವಿದೋದ್ದೇಶ ಸಹಕಾರ ಸಂಘದ ಪೂರ್ವಭಾವಿ ಸಭೆಯನ್ನು ಏರ್ಪಡಿಸಲಾಗಿತ್ತು. ಈ ಸಭೆಗೆ ಸಂಘದ ಗೌರವಾಧ್ಯಕ್ಷರಾದ ಜ್ಞಾನಪ್ರಕಾಶ ಸ್ವಾಮಿಗಳು, ಉರಿಲಿಂಗ ಪೆದ್ದೀಶ್ವರ ಮಠ, ಮೈಸೂರು ಇವರು ದಿವ್ಯ ಸಾನಿಧ್ಯ ವಹಿಸಿದ್ದರು. ರಾಜ್ಯಾಧ್ಯಕ್ಷ ತುಂಬಲ ರಾಮಣ್ಣ ಅಧ್ಯಕ್ಷತೆ ವಹಿಸಿದ್ದರು. ವಿಶೇಷ ಆಹ್ವಾನಿತರಾಗಿ ಲೇಖಕರಾದ ಮಲ್ಕುಂಡಿ ಮಹಾದೇವಸ್ಥಾಮಿ ಮತ್ತು ಶಶಿಧರ್ ಆಗಮಿಸಿದ್ದರು.
ಸ್ವಾತಂತ್ರ್ಯಾನಂತರದಲ್ಲಿ ಭಾರತದಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಅಭಿಮಾನಿಗಳು ಹೆಚ್ಚಾಗುತ್ತಿದ್ದಾರೆ. ಆದರೆ ಅಂಬೇಡ್ಕರ್ರವರ ಅನುಯಾಯಿಗಳಾಗುತ್ತಿಲ್ಲ. ಅಂಬೇಡ್ಕರ್ ಅವರ ಹೆಸರನ್ನು ಕೆಲವೇ ಕಾರ್ಯಕ್ರಮಕ್ಕೆ ಸೀಮಿತಗೊಳಿಸಿ ಅವರನ್ನು ಎಟಿಎಂನಂತೆ ಬಳಸುತ್ತಿರುವುದು ವಿಷಾದನೀಯ ಎಂದು ಅಭಿಪ್ರಾಯಪಟ್ಟರು. ದಲಿತರು ಸ್ವಾರ್ಥಿಗಳಾಗುತ್ತಿದ್ದಾರೆ. ಸ್ವಾವಲಂಬಿಗಳಾಗುತ್ತಿಲ್ಲ. ಈ ಸಮುದಾಯಗಳು ಸ್ವಾವಲಂಬಿಗಳಾಗಲು ಅಂಬೇಡ್ಕರ್ ವಿವಿದೋದ್ದೇóಶ ಸಹಕಾರ ಸಂಘವು ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಸಂಘದ ರಾಜ್ಯಾಧ್ಯಕ್ಷ ತುಂಬಲ ರಾಮಣ್ಣ ಮಾತನಾಡಿ ಅಂಬೇಡ್ಕರ್ ವಿವಿದೋದ್ದೇಶ ಸಹಕಾರ ಸಂಘದ ಮುಂದಿನ 20 ವರ್ಷಗಳ ಎಲ್ಲಾ ಕಾರ್ಯ ಯೋಜನೆಗಳನ್ನು ತಿಳಿಸಿದರು. ಸಭೆಯಲ್ಲಿ ಜಿಲ್ಲೆಯ ದಲಿತ ಸಮುದಾಯದ ಎಲ್ಲಾ ಮುಖಂಡರು, ಹಿರಿಯರು, ಬುದ್ಧಿಜೀವಿಗಳು, ನ್ಯಾಯವಾದಿಗಳು, ಉಪನ್ಯಾಸಕರು, ನೌಕರ ವರ್ಗದವರು ಪಾಲ್ಗೊಂಡಿದ್ದರು. ಎಚ್.ಎಸ್.ಗೌಡ ನಿರೂಪಿಸಿದರೆ, ಅರುಣ್ ಕುಮಾರ್ ಪ್ರಾರ್ಥಿಸಿದರು. ಡಾ.ಧರ್ಮವೀರ ಸ್ವಾಗತಿಸಿದರು. ಲೋಕೇಶ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮು.ನಾ.ರಾಮಾಂಜನೇಯ ವಂದಿಸಿದರು.








