ತುಮಕೂರು:
ಸಣ್ಣ ಸಮುದಾಯಗಳು ಆರ್ಥಿಕವಾಗಿ ಅಭಿವೃದ್ಧಿ ಹೊಂದುವ ಮೂಲಕ ಉತ್ತಮ ಪ್ರಗತಿ ಸಾಧಿಸಬೇಕಿದೆ ಎಂದು ಜಿಲ್ಲಾ ಯಾದವ (ಗೊಲ್ಲರ) ಸಂಘದ ಅಧ್ಯಕ್ಷ ಜಿ.ಚಂದ್ರಶೇಖರಗೌಡ ಕರೆ ನೀಡಿದರು.
ತುಮಕೂರಿನ ಶ್ರೀಕೃಷ್ಣ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ, ಸನ್ಮಾನ ಸಮಾರಂಭ ಹಾಗೂ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡುತ್ತಿದ್ದ ಅವರು, ಯಾವುದೇ ಒಂದು ಸಂಘ ಅಭಿವೃದ್ಧಿಯಾಗಬೇಕಾದರೆ ಆ ಸಂಘದಲ್ಲಿನ ಸದಸ್ಯರು ಪ್ರಾಮಾಣಿಕವಾಗಿ ಒಗ್ಗೂಡಬೇಕು. ಎಲ್ಲಿ ಉತ್ತಮ ಸಂಘಟನಾ ಶಕ್ತಿ ಇರುತ್ತದೆಯೋ ಅಂತಹ ಸಂಘಗಳು ಉತ್ತಮ ರೀತಿಯಲ್ಲಿ ಬೆಳೆಯುತ್ತವೆ. ಸಹಕಾರ ಸಂಘಗಳ ಏಳಿಗೆ ಆ ಸದಸ್ಯರ ಪಾಲ್ಗೊಳ್ಳುವಿಕೆ ತುಂಬಾ ಪ್ರಮುಖವಾಗಿರುವುದರಿಂದ ಪರಸ್ಪರ ಪೂರಕ ವಾತಾವರಣ ಇರಬೇಕು. ಆ ಮೂಲಕ ಸಹಕಾರ ತತ್ವಗಳನ್ನು ಪ್ರತಿಪಾದಿಸಬೇಕು ಎಂದರು








