ದಾವಣಗೆರೆ:
ರಫೇಲ್ ಡೀಲ್ ವಿಚಾರದಲ್ಲಿ ಕೇಂದ್ರದಲ್ಲಿ ನಡೆದಿರುವ ತೆರೆಮರೆಯ ಒಪ್ಪಂದಗಳು ವಾಸ್ತವದಲ್ಲಿ ಈ ಶತಮಾನದ ಬಹುಕೋಟಿ ಹಗರಣವಾಗಿದೆ ಎಂದು ಪತ್ರಕರ್ತರಾದ ಗಿರೀಶ್ ತಾಳಿಕಟ್ಟೆ ಆರೋಪಿಸಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಕರ್ನಾಟಕ ಜನಶಕ್ತಿಯು ಸಮಾನ ಮನಸ್ಕ ಸಂಘಟನೆಗಳ ಸಹಭಾಗಿವದೊಂದಿಗೆ ಹಮ್ಮಿಕೊಂಡಿದ್ದ ‘ತಿಂಗಳ ಚರ್ಚೆ’ ಕಾರ್ಯಕ್ರಮದಲ್ಲಿ ‘ರಫೇಲ್ ಹಗರಣ-ಒಳಹೊರಗೆ’ ವಿಚಾರದ ಕುರಿತು ಮಾತನಾಡಿದ ಅವರು, ಹಿಂದೆ ಬೋಫೋರ್ಸ್ ಹಗರಣವೇ ಭಾರತದ ರಕ್ಷಣಾ ವ್ಯವಸ್ಥೆಗೆ ಸಂಬಂಧಿಸಿದ ಅತೀ ದೊಡ್ಡ ಹಬಗರಣವೆಂದು ಅನ್ನಿಸಿಕೊಂಡಿತ್ತು. ಈ ಶತಮಾನದಲ್ಲಿ 3ಜಿ ಹಗರಣವೂ ಹಾಗೆಯೇ ಸದ್ದು ಮಾಡಿತ್ತು. ಆದರೆ, ನಿಜವಾದ ಬಹುಕೋಟಿ ಹಗರಣವಾದ ರಫೇಲ್ ಡೀಲ್ ಸದ್ದುಸುದ್ದಿಯಿಲ್ಲದೆ ನಡೆದಿರುವ ಈ ಶತಮಾನದ ಮೊದಲ ದಶಕಗಳು ಕಂಡ ಅತಿದೊಡ್ಡ ಹಗರಣ ಎಂದು ವಿಶ್ಲೇಷಿಸಿದರು.
ರಫೇಲ್ ಯುದ್ಧ ವಿಮಾನಗಳನ್ನು ಸಹಭಾಗಿತ್ವದಲ್ಲಿ ತಯಾರಿಸುವ ಬಗ್ಗೆ ಭಾರತದ ಸಾರ್ವಜನಿಕ ವಲಯದ ಅತಿದೊಡ್ಡ ಉದ್ದಿಮೆಯಾದ ಎಚ್ಎಎಲ್ ಜೊತೆಗೆ ಫ್ರಾನ್ಸ್ ದೇಶದ ಡೆಸ್ಸಾಲ್ಟ್ ಕಂಪೆನಿಯ ಒಪ್ಪಂದವು ಈ ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲೇ ಸಿದ್ಧವಾಗಿತ್ತು. ಆ ಒಪ್ಪಂದದ ಕೊನೆ ಹಂತದ ಪ್ರಕ್ರಿಯೆ ಮುಗಿಯುವ ಸಂದರ್ಭದಲ್ಲಿ ಇದ್ದಕ್ಕಿಂದ್ದಂತೆ, ಖಾಸಗಿ ಕಾರ್ಪೊರೇಟ್ ವ್ಯಕ್ತಿಯೊಬ್ಬರಿಗೆ ಸೇರಿದ ಕೇವಲ 13 ದಿನಗಳ ಹಿಂದಿನ ಕಂಪೆನಿಯನ್ನು ನಡುವೆ ತಂದು ಎಚ್ಎಎಲ್ನ್ನು ಒಪ್ಪಂದದಿಂದ ಹೊರಹಾಕಲಾಗಿದೆ ಎಂದು ದೂರಿದರು.
ಪ್ರಧಾನಿ ನರೇಂದ್ರ ಮೋದಿಯವರು ಖುದ್ದಾಗಿ ಮಧ್ಯಸ್ಥಿಕೆ ವಹಿಸಿಕೊಂಡು ಫ್ರಾನ್ಸ್ಗೆ ಭೇಟಿಕೊಟ್ಟು ಡೆಸ್ಸಾಲ್ಟ್ ಜೊತೆ ಹೊಸ ಒಪ್ಪಂದ ಏರ್ಪಡಿಸಿದ್ದಾರೆ. ಹಾಗೆ ಹೊಸದಾಗಿ ಸೇರ್ಪಡೆಯಾದ ಕಂಪೆನಿ ಭಾರತದ ಅತಿಶ್ರೀಮಂತರಲ್ಲಿ ಒಬ್ಬರಾದ ಅನಿಲ್ ಅಂಬಾನಿಗೆ ಸೇರಿದ ರಿಲಯನ್ಸ್ ಡಿಫೆನ್ಸ್ ಲಿ. ಎಂಬ ಸಂಸ್ಥೆಯಾಗಿದೆ. ಇದಕ್ಕೆ ಈವರೆಗೆ ಯಾವುದೇ ಯುದ್ಧ ವಿಮಾನವನ್ನು ತಯಾರಿಸಿದ ಸಣ್ಣ ಅನುಭವವೂ ಇಲ್ಲ.
ಎಲ್ಲಕ್ಕಿಂತ ಮುಖ್ಯವಾಗಿ ಯುಪಿಎ ಅವಧಿಯಲ್ಲಿ ಆಗಿದ್ದ ಒಪ್ಪಂದದ ಪ್ರಕಾರ ಎಚ್ಎಎಲ್ ಮತ್ತು ಡೆಸ್ಸಾಲ್ಟ್ ಸೇರಿ ಒಟ್ಟು 126 ಯುದ್ಧ ವಿಮಾನ ತಯಾರಾಗಬೇಕು ಮತ್ತು 18 ವಿಮಾನವನ್ನು ಸಿದ್ಧ ರೂಪದಲ್ಲಿ ಕೊಟ್ಟು ಉಳಿದಂತೆ ಆ ತಂತ್ರಜ್ಞಾನವನ್ನು ಡೆಸ್ಸಾಲ್ಟ್ ನಮ್ಮ ದೇಶಕ್ಕೆ ಹಸ್ತಾಂತರಿಸಬೇಕು ಎಂದಾಗಿತ್ತು. ಇದಕ್ಕೆ ಕೊಡಬೇಕಿದ್ದ ಹಣ 10.2 ಬಿಲಿಯನ್ ಡಾಲರ್ (75000ಕೋಟಿ). ಆದರೆ ಈಗಿನ ಹೊಸ ಒಪ್ಪಂದದಲ್ಲಿ ನಮಗೆ ದೊರೆಯವುದು ಕೇವಲ 36 ವಿಮಾನಗಳು, ತಂತ್ರಜ್ಞಾನವೂ ಸಿಗುವುದಿಲ್ಲ, ಇದಕ್ಕೆಲ್ಲ ತಗುಲುವ ವೆಚ್ಚ 8.8 ಬಿಲಿಯನ್ ಡಾಲರ್ (63000 ಕೋಟಿ).
ಅಂದರೆ ಪ್ರತಿ ವಿಮಾನಕ್ಕೆ ಒಂದರ ಬದಲು ಮೂರು ಒಟ್ಟು ಹಣ ಕೊಟ್ಟು ಖರೀದಿಸಿದಂತಾಯಿತು ಮತ್ತು ನಮಗೆ ತಂತ್ರಜ್ಞಾನವೂ ದೊರೆಯುವುದಿಲ್ಲ. ಇಂತಹ ತರಾತುರಿ, ಭಾರತದ ಪ್ರಜೆಗಳ ಹಣವನ್ನು ಸಾರ್ವಜನಿಕ ಉದ್ದಿಮೆಯ ಬದಲು ಖಾಸಗಿ ಕಂಪೆನಿಗೆ ಹರಿಸಲು ಹೊರಟಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ ಎಂದು ಆಪಾದಿಸಿದರು.
ಕರ್ನಾಟಕ ಜನಶಕ್ತಿಯ ಸಂಚಾಲಕಿ ಮಲ್ಲಿಗೆ ಮಾತನಾಡಿ, ರಪೇಲ್ ಹಗರಣದ ವಿಚಾರದಲ್ಲಿ ಹಲವು ಸುಳ್ಳುಗಳನ್ನು ಹರಡಲಾಗಿದೆ. ರಕ್ಷಣಾ ವಿಮಾನಗಳ ಒಪ್ಪಂದವನ್ನು ಬಿಜೆಪಿ ಸರ್ಕಾರವೇ ದೇಶದ ಒಳಿತಿಗಾಗಿ ಮಾಡಿಕೊಂಡಿತ್ತು, ಕಾಂಗ್ರೆಸ್ ಅದರ ಸುತ್ತ ವಿವಾದ ಹುಟ್ಟುಹಾಕಿ ದೇಶದ ರಕ್ಷಣೆಗೆ ಅಪಾಯ ಒಡ್ಡಿವೆ ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲದೆ 126 ಯುದ್ಧ ವಿಮಾನಗಳ ಸ್ಥಳದಲ್ಲಿ ಕೇವಲ 36 ಯುದ್ಧವಿಮಾನಗಳು, ಅದೂ ತಂತ್ರಜ್ಞಾನವಿಲ್ಲದೆ ನಮಗೆ ದೊರೆಯುತ್ತಿವೆ; ಇದರಿಂದ ದೊಡ್ಡ ಮೊತ್ತದ ಹಣ ವೆಚ್ಚ ಹೆಚ್ಚುವರಿಯಾಗುತ್ತಿದೆ ಎಂಬುದನ್ನು ಮರೆಮಾಚಲಾಗುತ್ತಿದೆ. ಇಂತಹ ಮಿಥ್ಯೆಗಳನ್ನು ಸರಿಯಾಗಿ ಬಿಡಿಸಿ ನೋಡಿ ವಾಸ್ತವಾಂಶಗಳನ್ನು ಅರಿತುಕೊಳ್ಳಬೇಕು” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರೈತಸಂಘದ ಮುಖಂಡರಾದ ಬಲ್ಲೂರು ರವಿಕುಮಾರ್, ಪತ್ರಕರ್ತರಾದ ಕೆ.ಅಹ್ಮದ್ ಶರೀಫ್, ಉಪನ್ಯಾಸಕರಾದ ಎ.ಬಿ.ರಾಮಚಂದ್ರ, ಪಾಸ್ಟರ್ ಕರುಣಾಕರ್, ಕರ್ನಾಟಕ ಜನಶಕ್ತಿಯ ಸತೀಶ್ ಅರವಿಂದ್, ಉಶಾ ಕೈಲಾಸದ್, ಎಐಎಸ್ಎಫ್ನ ರಮೇಶ್ ನಾಯ್ಕ್, ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ಪವನ್ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
