ಗುಬ್ಬಿ
ಶೈಕ್ಷಣಿಕ ಗುಣಮಟ್ಟ ಉತ್ತಮಪಡಿಸಲು ಸರ್ಕಾರಗಳು ಹಲವಾರು ಶೈಕ್ಷಣಿಕ ಯೋಜನೆಗಳನ್ನು ಜಾರಿಗೊಳಿಸಿದ್ದು ವಿದ್ಯಾರ್ಥಿಗಳು ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಂಡು ಪ್ರಗತಿ ಪಥದತ್ತ ಸಾಗುವಂತೆ ಜಿಲ್ಲಾ ಪಂಚಾಯ್ತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಡಾ.ನವ್ಯಾಬಾಬು ತಿಳಿಸಿದರು.
ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದ್ದ ಬೈಸಿಕಲ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಕ್ಕಳಲ್ಲಿರುವ ಕೌಶಲ್ಯ, ಶಕ್ತಿ ಕಮರಿ ಹೋಗದಂತೆ ಕಾಪಾಡುವ ಜವಾಬ್ದಾರಿ ಶಿಕ್ಷಣ ವ್ಯವಸ್ಥೆ ಮೇಲಿದೆ ಎಂದರು.
ಪ್ರಗತಿಯತ್ತ ಸಾಗುವ ದೇಶವಾದ ನಮ್ಮಲ್ಲಿ ಶಿಕ್ಷಣ ಮಹತ್ತರ ಪಾತ್ರ ವಹಿಸುತ್ತಿದೆ. ಕೈಗಾರಿಕಾ ಕ್ರಾಂತಿಯಿಂದಾಗಿ ದೇಶದ ಅಭಿವೃದ್ದಿ ಸಾಧ್ಯ ಎಂಬ ಮಾತಿಗೆ ವಿರುದ್ಧ ಪ್ರಕ್ರಿಯೆ ವ್ಯಕ್ತಪಡಿಸಿದ ಶಿಕ್ಷಣ ರಂಗ ಮಾನವ ಸಂಪನ್ಮೂಲವನ್ನು ಬೆಳೆಸಿಕೊಟ್ಟಿದೆ. ವಿವಿಧ ಪ್ರತಿಭೆಯಲ್ಲಿ ಗುರುತಿಸಿಕೊಂಡ ವಿದ್ಯಾರ್ಥಿಗಳನ್ನು ಅವರ ಇಚ್ಛೆಗೆ ತಕ್ಕಂತೆ ಬೆಳೆಸುವ ಪ್ರವೃತ್ತಿ ಪಾಲಕರು ಮತ್ತು ಶಿಕ್ಷಕರು ಮಾಡಬೇಕಿದೆ ಎಂದರು.
ಜಿಲ್ಲಾ ಪಂಚಾಯ್ತಿ ಸದಸ್ಯ ಜಿ.ಎಚ್.ಜಗನ್ನಾಥ್ ಮಾತನಾಡಿ ಸರ್ಕಾರಿ ಶಾಲೆಯ ಅಭಿವೃದ್ಧಿಗೆ ಸರ್ಕಾರ ನೀಡುವ ಸವಲತ್ತುಗಳ ಸದ್ಬಳಕೆ ಮಾಡಿಕೊಳ್ಳುವ ಜೊತೆಗೆ ವಿವಿಧ ಸಂಘಸಂಸ್ಥೆಗಳು ನೀಡುವ ಸೌಲಭ್ಯ ಬಳಸಿಕೊಳ್ಳಬೇಕು. ಶಿಕ್ಷಣ ವಂಚಿತ ಮಕ್ಕಳ ಸಂಖ್ಯೆ ಹೆಚ್ಚಾದಂತೆ ಸೌಲಭ್ಯ ಒದಗಿಸುವ ಕಾರ್ಯವನ್ನು ಮನಗಂಡ ಸರ್ಕಾರ ಉಚಿತ ಸೈಕಲ್, ಸಮವಸ್ತ್ರ, ಹಾಲು, ಕಬ್ಬಿಣಾಂಶ ಮಾತ್ರೆ ಇನ್ನಿತರ ಸವಲತ್ತು ನೀಡಲಾಗಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಮುಂದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ತಾ.ಪಂ. ಸದಸ್ಯ ಕರೆತಿಮ್ಮಯ್ಯ, ಎಸ್ಡಿಎಂಸಿ ಅಧ್ಯಕ್ಷ ಜಿ.ಆರ್.ರಮೇಶ್, ಸದಸ್ಯರಾದ ಮಂಜಮ್ಮ, ಬೆಟ್ಟಸ್ವಾಮಿಗೌಡ, ಗೋವಿಂದಪ್ಪ, ಮುಖ್ಯಶಿಕ್ಷಕ ಗಂಗಾಧರ್ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








