ಐ.ಡಿ.ಹಳ್ಳಿ :
ಹೋಬಳಿಯ ದೊಡ್ಡಯಲ್ಕೂರು ಗ್ರಾಮದಲ್ಲಿ ಸೋಮವಾರ ಶ್ರೀ ಬನಶಂಕರಿ ಅಮ್ಮನವರ ಜಲ್ದಿ ಮಹೋತ್ಸವವನ್ನು ಉದ್ಘಾಟಿಸಿ ಶಾಸಕ ಎಂ.ವಿ. ವೀರಭದ್ರಯ್ಯನವರು, ನಮ್ಮ ತಾಲ್ಲೂಕಿನಲ್ಲಿ ರೈತರು ಮಳೆ-ಬೆಳೆ ಇಲ್ಲದೆ ಬರಗಾಲದಿಂದ ಬದುಕುತ್ತಿದ್ದು, ಈ ತಾಲ್ಲೂಕಿನ 52 ಕೆರೆಗಳಿಗೆ ಎತ್ತಿನಹೊಳೆ ಯೋಜನೆಯ ಮುಖಾಂತರ ನೀರನ್ನು ತುಂಬಿಸುವಂತಹ ಕೆಲಸವನ್ನು ನಾನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿರವರಿಗೆ ಈ ಕ್ಷೇತ್ರದ ಮೇಲೆ ಋಣಭಾರÀ ಇದ್ದು, ಆ ಋಣವನ್ನು ಮಧುಗಿರಿ ತಾಲ್ಲೂಕಿನಲ್ಲಿ ಕಾರ್ಖಾನೆಯನ್ನು ಸ್ಥಾಪಿಸುವುದು, ಎತ್ತಿನಹೊಳೆ ಯೋಜನೆಯಿಂದ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವುದು, ಮಧುಗಿರಿ ತಾಲ್ಲೂಕಿನ ರೈಲು ಮಾರ್ಗ ಮತ್ತು ಏಕಶಿಲಾ ಬೆಟ್ಟಕ್ಕೆ ಕಾಯಕಲ್ಪವನ್ನು ಮಾಡಿ ಈ ಕ್ಷೇತ್ರ ವನ್ನು ಪ್ರವಾಸೋದ್ಯಮವನ್ನಾಗಿ ನಮ್ಮ ಕುಮಾರಣ್ಣನವರು ಪ್ರಾಮಾಣಿಕವಾಗಿ ಮಾಡುತ್ತಾರೆಂದು ನನಗೆ ವಿಶ್ವಾಸವಿದೆ ಎಂದರು.
ನಮ್ಮ ತಾಲ್ಲೂಕಿನಲ್ಲಿ ಪ್ರಕೃತಿ ಒಂದು ರೀತಿ ಮುನಿಸಿಕೊಂಡಿದೆ ಎಂದರೂ ತಪ್ಪಾಗಲಾರದು. ಏಕೆಂದರೆ ಪದೆ ಪದೆ ಬರಗಾಲಕ್ಕೆ ತುತ್ತಾಗುವಂತಹ ಪ್ರದೇಶ ನಮ್ಮದಾಗಿದೆ. ಸುಮಾರು ವರ್ಷಗಳಿಂದ ತುಂಬಾ ಕಡಿಮೆ ಮಳೆ ಬೀಳುತ್ತಿದೆ. ಅಂತರ್ಜಲ ಮಟ್ಟವೂ ಕುಸಿದಿರುವ ಕರಣದಿಂದ ರೈತರು ಸೊರಗುತ್ತಿದ್ದಾರೆ. ಕೃಷಿ ಸೊರಗುತ್ತಿದೆ. ರೈತಾಪಿ ಜನರ ಬದುಕು ಕಂಗಾಲಾಗಿದೆ. ನಮ್ಮ ದೇಶದಲ್ಲಿ ಆರ್ಥಿಕ ಸದೃಢತೆ ಮೂಡಬೇಕಾದರೆ ರೈತ ಸದೃಢರಾಗ ಬೇಕಾಗುತ್ತದೆ. ಹಾಗೆಯೇ ನಮ್ಮ ಕ್ಷೇತ್ರದಲ್ಲಿ ಯಾವುದೇ ಕೈಗಾರಿಕೆ, ಗಣಿಗಾರಿಕೆ ಇಲ್ಲದೆ ಯುವಕರಿಗೆ ಬಹಳ ಕಷ್ಟಕರವಾಗಿದೆ. “ವ್ಯವಸಾಯ ಮನೆ ಮಕ್ಕಳು ಸಾಯ” ಎಂಬಂತಹ ಪರಿಸ್ಥಿತಿ ಬಂದಿದೆ. ಮಳೆ ಬರುವುದಕ್ಕೆ ದೇವರ ಆಶೀರ್ವಾದವು ಮುಖ್ಯವಾಗಿದೆ. ಈಗಿನ ಜನರಿಗೆಲ್ಲರಿರೂ ಧಾರ್ಮಿಕ ಚಟುವಟಿಕೆಗಳು ಮುಖ್ಯವಾಗಿದೆ. ಆದ್ದರಿಂದ ದೇವರ ಆಶೀರ್ವಾದದಿಂದ ಮುಂದಿನ ದಿನಗಳಲ್ಲಿ ಒಳ್ಳೆಯ ಮಳೆ ಬರಲಿ ಎಂದು, ಮಳೆಯನ್ನೇ ನಂಬಿರುವಂತಹ ರೈತಾಪಿ ಜನರಿಗೆ ಸುಖ, ಶಾಂತಿ, ನೆಮ್ಮದಿಯನ್ನು ಕೊಡಲಿ ಎಂದು ದೇವರಲ್ಲಿ ನಾವೆಲ್ಲರೂ ಪ್ರಾರ್ಥನೆ ಮಾಡಿಕೊಳ್ಳಬೇಕಾಗಿದೆ ಎಂದರು.
ಈ ಕ್ಷೇತ್ರದಲ್ಲಿ ಹರಿಯುವಂತಹ ಸುವರ್ಣಮುಖಿ ನದಿಯ ನೀರು ಅಗಳಿ ಕಡೆಗೆ ಹೋಗುತ್ತಿದ್ದು, ಜಯಮಂಗಲಿ ನದಿಯಿಂದ ಬರುವಂತಹ ನೀರು ಆಂಧ್ರಪ್ರದೇಶದ ಪರಗಿಗೆ ಹೋಗುತ್ತಿದೆ. ಆದ್ದರಿಂದ ಇದಕ್ಕೆ ಕಡಿವಾಣ ಹಾಕಬೇಕಾದರೆ ಹೆಚ್ಚಿನದಾಗಿ ಅನುದಾನವನ್ನು ತಂದು ಸುಮಾರು 4 ಅಡಿ ನೀರು ನಿಲ್ಲುವ ಹಾಗೆ ಎರಡು ಕಿಲೋಮೀಟರ್ಗಳಿಗೆ ಒಂದೊಂದರಂತೆ ಚೆಕ್ ಡ್ಯಾಂಗಳನ್ನು ಸ್ಥಾಪಿಸಿದರೆ ಅಂತರ್ಜಲ ತನ್ನಷ್ಟಕ್ಕೆ ತಾನೇ ಜಾಸ್ತಿಯಾಗುತ್ತದೆ ಎಂದರಲ್ಲದೆ, ಇಲ್ಲಿನ ರೈತರಿಗೆ ಜಿಂಕೆಗಳ ಕಾಟ ದಿನೇ ದಿನೇ ಜಾಸ್ತಿಯಾಗುತ್ತಿದೆ. ರೈತರು ಭತ್ತ, ರಾಗಿ, ಜೋಳ, ಕಡಲೆಕಾಯಿಗಳನ್ನು ಬೆಳೆಯುವುದಕ್ಕೆ ಜಿಂಕೆಗಳು ಬಹಳ ತೊಂದರೆ ಮಾಡುತ್ತಿವೆ. ರೈತರು ಬಹಳಷ್ಟು ನಷ್ಟ ಅನುಭವಿಸುತ್ತಿದ್ದಾರೆ. ಈ ವಿಷಯ ಕೂಡಲೇ ಸರ್ಕಾರದ ಗಮನಕ್ಕೆ ತಂದು ರೈತರಿಗೆ ಆದಾಯ ಕೊಡುವಂತಹ ಮರಗಿಡಗಳನ್ನು ಸರ್ಕಾರದ ವತಿಯಿಂದ ಪ್ರತಿಯೊಬ್ಬರಿಗೂ ನೀಡುತ್ತೇವೆ. ಈ ದೇವಸ್ಥಾನಕ್ಕೆ ಬರುವಂತಹ ಭಕ್ತಾದಿಗಳಿಗೆ ಕೂಡಲೆ ಸಮುದಾಯ ಭವನ ಹಾಗೂ ಬರಗಾಲ ಆಗಿರುವ ಕಾರಣದಿಂದ ಕುಡಿಯುವ ನೀರಿನ ಸಮಸ್ಯೆ ಆಗದಂತೆ ನೋಡಿ ಕೊಳ್ಳುವಂತಹ ಜವಾಬ್ದಾರಿ ನನ್ನದಾಗಿದೆ. ದನ, ಕರುಗಳಿಗೆ ಹುಲ್ಲು, ಮೇವು ನೀಡುವಂತಹ ಕೆಲಸವನ್ನು ಮಾಡುತ್ತೇನೆ ಎಂದರು.
ರೈತ ಸಂಘದ ಅಧ್ಯಕ್ಷ ಶಂಕರಪ್ಪ ಮಾತನಾಡಿ, 800 ಶತಮಾನಗಳನ್ನು ಹೊಂದಿರುವಂತಹ ನಮ್ಮ ಗ್ರಾಮ ದೇವತೆಗೆ ಪ್ರತಿ ವರ್ಷಕ್ಕೊಮ್ಮೆ ಜನವರಿ ತಿಂಗಳಿನಲ್ಲಿ ಹುಣ್ಣಿಮೆಯ ದಿನದಂದು ಜಲ್ದಿ ಮತ್ತು ಉತ್ಸವ ಹಾಗೂ ವಿಶೇಷ ಪೂಜಾ ಕಾರ್ಯಕ್ರಮವನ್ನು ಭಕ್ತಾದಿಗಳು ಹಾಗೂ ಗ್ರಾಮಸ್ಥರು ಹಮ್ಮಿಕೊಂಡು ಬರುತ್ತಿದ್ದಾರೆ. ಈಗ ರೈತರಿಗೆ ಬರಗಾಲ ಬಂದಿರುವಂತಹ ಕಾರಣದಿಂದ ರೈತರು ಬಹಳ ಕಷ್ಟ ಅನುಭವಿಸುತ್ತಿದ್ದಾರೆ. ನಮ್ಮ ಹೋಬಳಿಗೆ ಒಟ್ಟು 34 ಹಳ್ಳಿಗಳು ಸೇರಿದ್ದು, ಈ ಗ್ರಾಮವು ಆಂಧ್ರದ ಗಡಿ ಭಾಗದಲ್ಲಿದ್ದು, ಇಲ್ಲಿನ ರೈತರಿಗೆ ಮಳೆ ಇಲ್ಲದೆ ಬರಗಾಲದಲ್ಲಿ ಬಳಲುತ್ತಿದ್ದಾರೆ. ಆದ್ದರಿಂದ ಶಾಸಕರು ಗಂಭೀರವಾಗಿ ಗಮನಹರಿಸಿ “ಬಡವರ ಸೇವೆಯೇ ಜನಾರ್ಧನನ ಸೇವೆ” ಎಂಬುವ ನಿಟ್ಟಿನಲ್ಲಿ ರೈತರನ್ನು ಬೆಳೆಸುವಂತಹ ಶಕ್ತಿ ದೇವರು ನೀಡಲಿ. ಕ್ಷೇತ್ರಕ್ಕೆ ಹೆಚ್ಚು ಅನುದಾನವನ್ನು ತಂದು ಅಭಿವೃದ್ಧಿಯನ್ನು ಮಾಡಬೇಕಾಗಿದೆ. ಕಳೆದ 35 ವರ್ಷಗಳಿಂದ ಇಲ್ಲಿನ ರೈತರು ಸುಮಾರು 4 ಸಾವಿರ ಜಿಂಕೆಗಳಿಂದ 6 ಸಾವಿರ ಎಕರೆ ಜಮೀನಿಗೆ ಬೆಳೆ ಇಡದೆ ಇರುವ ರೀತಿ ಜಿಂಕೆಗಳು ಬೆಳೆಗಳನ್ನು ನಾಶ ಮಾಡುತ್ತಿವೆ ಎಂದರು.
ತುಮಕೂರು ಜಿಲ್ಲೆಯ ಹಾಲು ಒಕ್ಕೂಟದ ನಿರ್ದೇಶಕ ಕೊಂಡವಾಡಿ ಚಂದ್ರಶೇಖರ್, ರೈತ ಸಂಘದ ಅಧ್ಯಕ್ಷ ಎ.ಗೋವಿಂದರಾಜು, ಜೆಡಿಎಸ್ ಮುಖಂಡ ಗ್ರಾ.ಪಂ.ಮಾಜಿ ಅಧ್ಯಕ್ಷ ಡಾ.ಶಿವಕುಮಾರ್, ಹೋಬಳಿ ಅಧ್ಯಕ್ಷ ರಾಮಚಂದ್ರಪ್ಪ, ಯರಗುಂಟೆ ಚಂದ್ರಶೇಖರ್, ಶಿವಶಂಕರ್, ಗರಣಿ ಎಲ್ಐಸಿ ಗೋವಿಂದರಾಜು, ನಾಗೇನಹಳ್ಳಿ ಶಿವಕುಮಾರ್, ಯುವ ಮುಖಂಡರಾದ ಮಧು, ರಾಜಣ್ಣ, ಗ್ರಾ.ಪಂ.ಸದಸ್ಯ ಜಿಲಾನ್ ಸಾಬ್, ಹೋಬಳಿ ಯುವ ಅಧ್ಯಕ್ಷ ಸತೀಶ್ ಯಾದವ್, ನಾಗರಾಜು ಮುಂತಾದವರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
