ಬೆಂಗಳೂರು
ವೇಗವಾಗಿ ಹೋಗುತ್ತಿದ್ದ ಇಂಡಿಕಾ ಕಾರು 11 ಕೆವಿ ವಿದ್ಯುತ್ ಹಾದುಹೋಗುತ್ತಿದ್ದ ಕಂಬಕ್ಕೆ ಡಿಕ್ಕಿ ಹೊಡೆದು, ಅದರಿಂದ ಹರಿದ ವಿದ್ಯುತ್ ತಗುಲಿ,ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಗನ್ ಮ್ಯಾನ್ ಉಮೇಶ್ ಅವರ ತಂದೆ ಮೃತಪಟ್ಟು, ತಾಯಿ ಗಾಯಗೊಂಡಿರುವ ದುರ್ಘಟನೆ ದಾಬಸ್ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಡಿಕ್ಕಿ ಹೊಡೆದ ಇಂಡಿಕಾ ಕಾರಿನಲ್ಲಿದ್ದ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರಲ್ಲಿ ಇಬ್ಬರು ಪರಾರಿಯಾಗಿದ್ದರೆ, ಮತ್ತೊಬ್ಬನನ್ನು ವಶಕ್ಕೆ ತೆಗೆದುಕೊಂಡಿರುವ ದಾಬಸಪೇಟೆ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ದುರ್ಘಟನೆಯಲ್ಲಿ ಶಿವಗಂಗೆಯ ಕಾಚಾರನಳ್ಳಿಯ ರಾಮಕೃಷ್ಣಯ್ಯ (64)ಎಂದು ಮೃತಪಟ್ಟವರನ್ನು ಗುರುತಿಸಲಾಗಿದೆ, ಕೈಗಳು ಸುಟ್ಟುಹೋಗಿ ಅಸ್ವಸ್ಥರಾಗಿರುವ ಅವರ ಪತ್ನಿ ರೇವಣ್ಣಮ್ಮ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ದಾಬಸ್ಪೇಟೆಯಿಂದ ಇಂಡಿಕಾ ಕಾರಿನಲ್ಲಿ ವೇಗವಾಗಿ ಬಂದ ಮೂವರು ಕಾಚಾರನಳ್ಳಿ ಬಳಿ ನಿಯಂತ್ರಣ ತಪ್ಪಿ ಟ್ರಾನ್ಸ್ಫಾರ್ಮರ್ಗೆ ಸಂಪರ್ಕ ಕಲ್ಪಿಸಲು ಹೋಗುತ್ತಿದ್ದ 11 ಕೆವಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದಾರೆ. ಕಂಬ ಉರುಳಿಬಿದ್ದು ಅದರಿಂದ ಹರಿದ ವಿದ್ಯುತ್ ಸನಿಹದಲ್ಲಿದ್ದ ಮನೆಗೆ ಹರಿದು ರಾಮಕೃಷ್ಣಯ್ಯ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ವಿದ್ಯುತ್ ತಗುಲಿ ಅವರ ಪತ್ನಿ ರೇವಣ್ಣಮ್ಮ ಗಾಯಗೊಂಡಿದ್ದು, ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ದಾಬಸ್ಪೇಟೆ ಪೆÇಲೀಸರು, ಬೆಸ್ಕಾಂಗೆ ಮಾಹಿತಿ ನೀಡಿ ವಿದ್ಯುತ್ ಸ್ಥಗಿತಗೊಳಿಸಿ ಕಾರಿನಲ್ಲಿದ್ದ ಓರ್ವನನ್ನು ವಶಕ್ಕೆ ತೆಗೆದುಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.ರಾಮಕೃಷ್ಣಯ್ಯ ಅವರ ಪುತ್ರ ಉಮೇಶ್ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಗನ್ ಮ್ಯಾನ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








