ಡಿ.ಕೆ.ಸು ಅಕ್ರಮ ಸಂಪತ್ತು ರಕ್ಷಣೆಗಾಗಿ ಮಾತ್ರ ಅಧಿಕಾರ : ಬಿಜೆಪಿ ಆರೋಪ

ಕುಣಿಗಲ್

       ಕೇಂದ್ರ ಸರ್ಕಾರದ ಜನಪರ ಯೋಜನೆಗಳನ್ನ ಇಲ್ಲಿನ ಸಂಸದರು ಸಮರ್ಪಕವಾಗಿ ಅನುಷ್ಠಾನಗೊಳಿಸದೆ ಕಿಂಚಿತ್ತು ಅಭಿವೃದ್ದಿಕಾಣದ ಶ್ರೀರಂಗ ಏತನೀರಾವರಿ ಯೋಜನೆಯನ್ನ ಚುನಾವಣೆ ಸಮಯದಲ್ಲಿ ಮಾತ್ರ ಡಿ.ಕೆ. ಸುರೇಶ್ ಹೇಳುತ್ತ ಕೇವಲ ರಾಜಕೀಯ ಗಿಮಿಕ್ ಮಾಡುತ್ತಿದ್ದಾರೆ ಎಂದು ಮಾಜಿ ವಿಧಾನಪರಿಷತ್ ಸದಸ್ಯ ಹಾಗೂ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಅಭ್ಯರ್ಥಿ ಅಶ್ವತ್‍ನಾರಾಯಣಗೌಡ ಆರೋಪಿಸಿದರು.

        ಅವರು ಪಟ್ಟಣದ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಈ ಕ್ಷೇತ್ರ ಮೂರು ಜಿಲ್ಲೆಯಲ್ಲಿ ಹಂಚಿಕೆಯಾಗಿದ್ದು ಈ ಕ್ಷೇತ್ರದಲ್ಲಿ ಎಲ್ಲಿ ಬಂಡೆ ಇದೆಯೋ ಎಂಬುದನ್ನ ಹುಡುಕಿ ಅಲ್ಲಿ ಕ್ರಷರ್ ಯಂತ್ರಗಳನ್ನ ಜೋಡಿಸಿ ಸಂಪಾದಿಸುವ ಮಾರ್ಗದಲ್ಲಿಯೇ ತಲ್ಲೀನರಾದ ಇವರು ಬರೀ ಐ.ಟಿ. ಇಡಿ ಎಂದು ತಿರುಗುತ್ತ ಕೇಂದ್ರ ಸರ್ಕಾರದ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

          ಪ್ರಧಾನ ಮಂತ್ರಿ ಮೋದಿಯವರು ರೈತಪರ ಯೋಜನೆಗಳು ಸೇರಿದಂತೆ ಹಲವು ಅಭಿವೃದ್ದಿ ಯೋಜನೆಗಳನ್ನ ಜಾರಿಗೆ ತಂದರೂ ಸಹ ಸಂಸದ ಡಿ.ಕೆ.ಸುರೇಶ್ ಅವರು ಜನಪರ ಯೋಜನೆಗಳನ್ನ ಅನುಷ್ಠಾನಕ್ಕೆ ತರದೇ ಸ್ವಾರ್ಥ ರಾಜಕಾರಣದಲ್ಲಿ ತಲ್ಲೀನರಾಗಿದ್ದಾರೆ ಎಂದು ಕಿಡಿಕಾರಿದರು. ಬಿಜೆಪಿ ಪಕ್ಷದಲ್ಲಿ ನನ್ನ ಸೇವೆಯನ್ನ ಗುರುತಿಸಿ ವಿಧಾನಪರಿಷತ್ ಸದಸ್ಯನಾಗಿ ಮಾಡಿದ್ದು ವಕ್ತಾರನಾಗಿಯೂ ಕಾರ್ಯ ನಿರ್ವಹಿಸುತ್ತಿರುವ ನನಗೆ ಸಂಸದರ ಸ್ಥಾನಕ್ಕೆ ಸ್ಪರ್ಧಿಸುವಂತೆ ಸೂಚನೆ ನೀಡಿದ ಮೇರೆಗೆ ಬಂದಿದ್ದೇನೆ.

          ಈ ಚುನಾವಣೆಯಲ್ಲಿ ಮೋದಿಯವರ ಸ್ವಚ್ಛ ಹಾಗು ಭ್ರಷ್ಟಾಚಾರ ಮುಕ್ತ ಆಡಳಿತದ ಅಲೆಯೇ ನನಗೆ ಶ್ರೀರಕ್ಷೆಯಾಗಲಿದ್ದು ಶ್ರೀಸಾಮಾನ್ಯರು, ಯುವಕರು, ಮಹಿಳೆಯರು ಸೇರಿದಂತೆ ಎಲ್ಲಾವರ್ಗದವರೂ ಬಿಜೆಪಿ ಪಕ್ಷವನ್ನ ಪಕ್ಷಾತೀತವಾಗಿ ಬೆಂಬಲಿಸುವಂತೆ ಮಾಡಿದ್ದಾರೆ. ಆದ್ದರಿಂದ ಈ ಭಾಗದ ಕಾರ್ಯಕರ್ತರು ಅನ್ಯತಾ ಬಾವಿಸದೇ ನನ್ನ ಗೆಲುವಿಗೆ ಶ್ರಮಿಸುವ ಮೂಲಕ ಪ್ರಧಾನಮಂತ್ರಿ ಮೋದಿಜಿ ಅವರನ್ನ ಮತ್ತೊಮ್ಮೆ ಪ್ರಧಾನ ಮಂತ್ರಿಯನ್ನಾಗಿ ಮಾಡಲು ಸಹಕರಿಸಿ ಎಂದು ವಿನಂತಿಸಿದರು.

         ಮಾಜಿ ಉಪಮುಖ್ಯ ಮಂತ್ರಿ ಈಶ್ವರಪ್ಪ ಮಾತನಾಡಿ ಈ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಅಶ್ವತ್‍ನಾರಾಯಣಗೌಡ ಉತ್ತಮ ವ್ಯಕ್ತಿತ್ವವುಳ್ಳ ವ್ಯಕ್ತಿಯಾಗಿದ್ದು ಜನಪರ ಹೋರಾಟ ಮಾಡುತ್ತ ಸಂಘ ಪರಿವಾರದಿಂದ ಗುರುತಿಸಿಕೊಂಡು ವಕ್ತಾರರಾಗಿದ್ದಾರೆ. ಮಂಡ್ಯ, ಮೈಸೂರು, ಹಾಸನ, ಬೆಂಗಳೂರು ಗ್ರಾಮಾಂತರದ ರೈತಾಪಿ ಜನರ ನೀರಿನ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ವಿಧಾನ ಪರಿಷತ್‍ನಲ್ಲಿ ಧ್ವನಿ ಎತ್ತಿ ಹೋರಾಟ ಮಾಡಿದ್ದಾರೆ. ಇಂತಹ ವ್ಯಕ್ತಿಗೆ ವರಿಷ್ಠರು ಗುರುತಿಸಿ ಅಭ್ಯರ್ಥಿಯನ್ನಾಗಿ ಮಾಡಿದ್ದಾರೆ ಅದಕ್ಕಾಗಿ ಇವರಿಗೆ ಹೆಚ್ಚು ಮತ ನೀಡುವ ಮೂಲಕ ಆಯ್ಕೆ ಮಾಡಿ ಮುಂದಿನ ಮೋದಿ ಸರ್ಕಾರದಲ್ಲಿ ಸಿಗುವ ಎಲ್ಲಾ ಅಭಿವೃದ್ದಿಗೂ ಕಾರಣರಾಗುತ್ತಾರೆ.

ಐಟಿ ದಾಳಿ ಬಗ್ಗೆ ಪ್ರತಿಕ್ರಿಯೆ :

        ರಾಜ್ಯದಲ್ಲಿ ನಡೆಯುತ್ತಿರುವ ಐ.ಟಿ. ದಾಳಿಗೂ ಬಿಜೆಪಿ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಐಟಿ ಅಧಿಕಾರಿಗಳು ಕಾನೂನು ಪ್ರಕಾರ ಅವರು ತಮ್ಮ ಕೆಲಸ ಮಾಡಿದ್ದಾರೆ. ಕೋಟಿ ಕೋಟಿ ಹಣವನ್ನ ಅಕ್ರಮವಾಗಿ ಇಟ್ಟುಕೊಂಡ ಗುತ್ತಿಗೆದಾರರು ಮತ್ತು ಅಧಿಕಾರಿಗಳ ಮೇಲೆ ದಾಳಿ ಮಾಡಿದನ್ನೇ ಅಪವಾದ ಎಂಬಂತೆ ಬಿಂಬಿಸಿ ಪ್ರತಿಭಟನೆ ಮಾಡಿದ್ದು ನಾಚಿಗೇಡಿನ ಸಂಗತಿ. ಇದರಿಂದ ನಮ್ಮ ಪಕ್ಷದ ಮೇಲೆ ಯಾವುದೇ ಪರಿಣಾಮಬೀರದು.

         ಈ ರಾಜ್ಯದ ಮತದಾರರು ಪ್ರಜ್ಞಾವಂತರಾಗಿದ್ದಾರೆಂದರು. ಮೋದಿಯವರು ಅಧಿಕಾರಕ್ಕೆ ಬಂದರೆ ದೇಶದಲ್ಲಿ ಅಭದ್ರತೆ ಉಂಟಾಗಿ ಕೋಮುಗಲಭೆಗಳಾಗುತ್ತವೆ ಎಂದು ಕಾಂಗ್ರೆಸ್ ಅಂದು ಅಪಪ್ರಚಾರ ಮಾಡುವ ಮೂಲಕ ಅಮೆರಿಕ ಸೇರಿದಂತೆ ಅಂತರಾಷ್ಟ್ರದಲ್ಲಿ ಅವನ್ನ ಕೆಟ್ಟದಾಗಿ ಬಿಂಬಿಸಿದ್ದರು. ಆದರೆ ಮೋದಿಜಿ ಅವರ ಸಾಧನೆ ನೋಡಿ ವಿಶ್ವವೇ ಬೆರಗಾಗಿದ್ದು ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳು ಅವರನ್ನ ಕರೆದು ಸನ್ಮಾನಿಸಿ ಗೌರವಿಸಿದ್ದು ಅಲ್ಲದೆ ಸೈನಿಕರ ಪ್ರತಿಷ್ಠೆಯಾದ ಸರ್ಜಿಕಲ್ ಸ್ಟೈಕ್, ಏರೋಸ್ಟ್ರೈಕ್, ಮೂಲಕ ಉಗ್ರಗಾಮಿಗಳನ್ನ ಮಟ್ಟಹಾಕಿ ಅಂತರಾಷ್ಟ್ರದಲ್ಲಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಅದಕ್ಕಾಗಿ ಮೋದಿಯವರನ್ನ ಮತ್ತೊಮ್ಮೆ ಪ್ರಧಾನಿ ಮಾಡಲು ಮುಂದಾಗಿ ಎಂದು ಕರೆ ನೀಡಿದರು.

        ಮುಖಂಡರಾದ ಡಿ.ಕೃಷ್ಣಕುಮಾರ್, ಮಾತನಾಡಿ ಡಿಕೆ ಸಹೋದರರಿಗೆ ತಾವು ಅಕ್ರಮವಾಗಿ ಸಂಪಾದಿಸಿಕೊಂಡಿರುವ ಹಣ-ಸಂಪತ್ತನ್ನ ರಕ್ಷಣೆ ಮಾಡಿಕೊಳ್ಳಲೋಸ್ಕರ ಅಧಿಕಾರ ಬೇಕು ಇವರಿಗೆ ಜನಪರ ಕೆಲಸ ಮಾಡುವ ಇರಾದೆ ಇಲ್ಲಾ ಎಂದು ಕಿಡಿಕಾರಿದ ಅವರು ರಾಜ್ಯ ಸರ್ಕಾರದ ಅನುದಾನಗಳನ್ನ ಶಾಸಕರಾದ ಡಿ.ನಾಗರಾಜಯ್ಯನವರು ತಂದು ಅಭಿವೃದ್ದಿ ಮಾಡಿದನ್ನ ತಾವು ಮಾಡಿದೆವು ಎಂದು ಬಿಬಿಸಿಕೊಳ್ಳುವುದು ಹಾಗೂ ಕೇಂದ್ರ ಸರ್ಕಾರದ ಉಚಿತ ಅನಿಲ ಪೂರೈಕೆ, ಶುದ್ಧ ಕುಡಿಯುವ ನೀರಿನ ಮೇಲೆ ಇವರ ಪೋಟೋ ಹಾಕಿಸಿಕೊಂಡು ಜನರನ್ನ ದಿಕ್ಕುತಪ್ಪಿಸುವ ಕೆಲಸ ಮಾಡಿದ್ದಾರೆಂದು ಆರೋಪಿಸಿದರು.

         ಮಾಜಿ ಸಚಿವ ಕಟ್ಟಸುಬ್ರಹ್ಮಣ್ಯನಾಯ್ಡು, ಕೆ.ಪಿ. ನಂಜುಂಡಿ, ಕನ್ನಡಕುಮಾರ್, ಬಿಜೆಪಿ ಮುಖಂಡರಾದ ಕೆ.ಎಸ್. ಬಲರಾಮ್, ಕೆ.ಎಂ.ತಿಮ್ಮಪ್ಪ, ದಿನೇಶ್‍ಕುಮಾರ್, ವೈ.ಹೆಚ್.ರವಿಚಂದ್ರ, ಸುರೇಶ್, ಉಮೇಶ್, ಕರಿಮಾಸ್ತಿಗೌಡ ಜಿ.ಪಂ. ತಾ.ಪಂ. ಸದಸ್ಯರು ಅನೇಕ ಕಾರ್ಯಕರ್ತರು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link