ಹುಳಿಯಾರು
ಕಾಂಗ್ರೆಸ್ ಮುಖಂಡ ಸಿ.ಎಂ ಇಬ್ರಾಹಿಂ ಕಾರವಾರದಲ್ಲಿ ಈಚೆಗೆ ನಡೆದ ಕಾರ್ಯಕ್ರಮದಲ್ಲಿ ಮಡಿವಾಳ ಸಮುದಾಯದ ಕುರಿತಂತೆ ಅಸಾಂವಿಧಾನಿಕ ಪದವನ್ನು ಬಳಸಿದ್ದು ಅವರು ಕ್ಷಮೆ ಕೋರಬೇಕು ಎಂದು ರಾಜ್ಯ ಮಡಿವಾಳ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಹುಳಿಯಾರು ಮೋಹನ್ ಕುಮಾರ್ ಆಗ್ರಹಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿದ ಅವರು ಕಾಂಗ್ರೆಸ್ ಮುಖಂಡ ಎಚ್.ಆಂಜನೇಯ ಅವರು ಸಮಾಜ ಕಲ್ಯಾಣ ಸಚಿವರಾಗಿದ್ದಾಗ `ಅಗಸ’ ಎಂಬ ಪದವನ್ನು ತೆಗೆದು ಮಡಿವಾಳ ಎಂಬ ಪದವನ್ನು ಸೇರಿಸಿ, ಇನ್ನು ಮುಂದೆ ಅಗಸ ಎಂಬ ಪದ ಬಳಸುವುದು ಅಸಾಂವಿಧಾನಾತ್ಮಕವಾದದ್ದು ಎಂಬ ಸುತ್ತೋಲೆ ಹೊರಡಿಸಿದ್ದರು.
ಆದರೆ, ಕೇಂದ್ರ ಸಚಿವರೂ ಆಗಿದ್ದ ಇಬ್ರಾಹಿಂ ಅವರು ಕೇಂದ್ರ ಸರ್ಕಾರವನ್ನು ಟೀಕಿಸುವ ಭರದಲ್ಲಿ ವಿವೇಚನೆ ಇಲ್ಲದೆ ಅಗಸ ಪದ ಬಳಸಿ ಸಮುದಾಯಕ್ಕೆ ಅವಮಾನ ಮಾಡಿ ನಮ್ಮ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಹೇಳಿದರು. ಅವರು ಬೇಷರತ್ ಕ್ಷಮೆ ಯಾಚಿಸಬೇಕು. ಇಲ್ಲದಿದ್ದಲಿ ರಾಜ್ಯದಾದ್ಯಂತ ಉಗ್ರ ಪ್ರತಿಭಟನೆ ಮಾಡಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.