ಗುಬ್ಬಿ :
ಕೋವಿಡ್ ಹಿನ್ನಲೆಯಲ್ಲಿ ಕಳೆದ 15 ತಿಂಗಳಿಂದ ಪರದಾಡಿದ ಅನುದಾನರಹಿತ ಶಾಲಾ ಶಿಕ್ಷಕರ ಸಂಕಷ್ಟಕ್ಕೆ ನೆರವಾಗಲು ಸರ್ಕಾರ ಕನಿಷ್ಠ 25 ಸಾವಿರ ರೂ. ಸಹಾಯಧನ ಒದಗಿಸಲು ಸರ್ಕಾರವನ್ನು ಒತ್ತಾಯಿಸಿರುವುದಾಗಿ ವಿಧಾನಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ತಿಳಿಸಿದರು.
ಪಟ್ಟಣದ ಸ್ಟೆಲ್ಲಾಮೇರಿಸ್ ಶಾಲೆಯ ಆವರಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅನುದಾನರಹಿತ ಶಾಲಾ ಶಿಕ್ಷಕರಿಗೆ ದಿನಸಿಕಿಟ್ ವಿತರಿಸಿ ಮಾತನಾಡಿದ ಅವರು ಕೋವಿಡ್ ಹಿನ್ನಲೆಯಲ್ಲಿ ಹಲವು ಶ್ರಮಿಕ ವರ್ಗಕ್ಕೆ ಸಹಾಯಧನ ನೀಡಲು ಸರ್ಕಾರ ಮುಂದಾದ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಬಳಿ 25 ಬಾರಿ ಚರ್ಚಿಸಿ ಶಿಕ್ಷಕರ ಸಂಕಷ್ಟವನ್ನು ಮನದಟ್ಟು ಮಾಡಲಾಗಿ, 5 ಸಾವಿರ ಸಹಾಯಧನ ಘೋಷಣೆ ಮಾಡಿದರು. ಆದರೆ 25 ಸಾವಿರ ರೂ.ಗಳ ಸಹಾಯ ಅವರಿಗೆ ಅಗತ್ಯವಿರುವ ಬಗ್ಗೆ ಶಿಕ್ಷಣ ಸಚಿವ ಸುರೇಶ್ಕುಮಾರ್ ಮೂಲಕ ಒತ್ತಾಯಿಸಿದ್ದು, ಶೀಘ್ರದಲ್ಲಿ ಮತ್ತೊಂದು ಪ್ಯಾಕೇಜ್ ಘೋಷಣೆ ಆಗುವ ಬಗ್ಗೆ ಭರವಸೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಎಂ.ಚಿದಾನಂದಗೌಡ ಮಾತನಾಡಿ ರಾಜ್ಯದ 27 ಸಾವಿರ ಅನುದಾನ ರಹಿತ ಶಾಲಾ-ಕಾಲೇಜುಗಳ ಒಟ್ಟು 3.50 ಲಕ್ಷ ಅಧ್ಯಾಪಕರ ಬದುಕು ನಿಜಕ್ಕೂ ಬೀದಿಗೆ ಬಂದಂತಾಗಿದೆ. ಈ ಜೊತೆಗೆ 68 ಲಕ್ಷ ಮಕ್ಕಳ ಭವಿಷ್ಯ ರೂಪಿಸುವ ಈ ಸಂಸ್ಥೆಗಳ ಬಗ್ಗೆ ಸರ್ಕಾರದ ಗಮನಸೆಳೆದು ಶಿಕ್ಷಕರಿಗೆ ಪರಿಹಾರವಾಗಿ ಪ್ಯಾಕೇಜ್ ಘೋಷಣೆಗೆ ಆಗ್ರಹಿಸಲಾಗಿದೆ. ಗುಣಮಟ್ಟದ ಶಿಕ್ಷಣಕ್ಕೆ ಅಲಿಖಿತ ಒಪ್ಪಂದದಲ್ಲಿ ಅನುದಾನರಹಿತ ಶಾಲೆಗಳನ್ನು ಆರಂಭಿಸಿದ ಸರ್ಕಾರ 1995 ರ ನಂತರ ಶಿಕ್ಷಣ ಕ್ಷೇತ್ರಕ್ಕೆ ಮಹತ್ವ ನೀಡುತ್ತಾ ಬಂದಿದೆ. ಆದರೆ ಕೊರೋನಾ ಸಂಕಷ್ಟ ಸಮಯದಲ್ಲಿ ಈ ಸಂಸ್ಥೆಯ ಶಿಕ್ಷಕರ ಪಾಡು ಗಮನಿಸುವುದು ಸರ್ಕಾರದ ಕರ್ತವ್ಯವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಅನುದಾನ ರಹಿತ ಶಾಲಾ-ಕಾಲೇಜು ಅಧ್ಯಾಪಕರಿಗೆ ದಿನಸಿಕಿಟ್ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಪಪಂ ಅಧ್ಯಕ್ಷ ಜಿ.ಎನ್.ಅಣ್ಣಪ್ಪಸ್ವಾಮಿ, ಸದಸ್ಯ ಜಿ.ಆರ್.ಶಿವಕುಮಾರ್, ಬಿಜೆಪಿ ಮುಖಂಡರಾದ ಜಿ.ಎನ್.ಬೆಟ್ಟಸ್ವಾಮಿ, ಎನ್.ಬಿ.ರಾಜಶೇಖರ್, ಸ್ಟೆಲ್ಲಾಮೇರಿಸ್ ಸಂಸ್ಥೆಯ ಮುಸ್ತಾಕ್ ಅಹಮದ್, ಅಶ್ವಕ್ಅಹಮದ್, ನಾಗರಾಜು ಇತರರು ಇದ್ದರು.
ಕೋವಿಡ್ ನೀಡಿದ ಆಘಾತಕ್ಕೆ ಇಡೀ ರಾಜ್ಯವೇ ನಲುಗಿದೆ. ಈ ಸಂಕಷ್ಟ ಪರಿಹಾರಕ್ಕೆ ಮೊದಲ ಅಲೆಯಲ್ಲಿ 2700 ಕೋಟಿ ರೂ.ಗಳನ್ನು ಸರ್ಕಾರ ಬಿಡುಗಡೆ ಮಾಡಿತು. ಎರಡನೇ ಅಲೆಯಲ್ಲಿ 1200 ಕೋಟಿ ರೂ. ಮತ್ತು 500 ಕೋಟಿ ರೂ.ಗಳ ಎರಡು ಹಂತದ ಪ್ಯಾಕೇಜ್ ಪರಿಹಾರ ಘೋಷಣೆ ಮಾಡಿತ್ತು. ಈ ಸಂದರ್ಭದಲ್ಲಿ ಶಿಕ್ಷಕರ ಬಗ್ಗೆ ಗಮನಹರಿಸಲು ಸರ್ಕಾರಕ್ಕೆ ಆಗ್ರಹಿಸಲಾಯಿತು. 15 ತಿಂಗಳು ಕಾಲ ಕೆಲಸವಿಲ್ಲದಿದ್ದರೂ ಕೆಲ ಖಾಸಗಿ ಶಿಕ್ಷಣ ಸಂಸ್ಥೆಗಳು ಪೂರ್ಣ ವೇತನ ನೀಡಿ ಶಿಕ್ಷಕರಿಗೆ ಸ್ಪಂದಿಸಿವೆ. ಈ ಕಾರ್ಯದಲ್ಲಿ ವಿಧಾನಪರಿಷತ್ ಸದಸ್ಯ ಚಿದಾನಂದ್ಗೌಡ ಅವರ ಸಂಸ್ಥೆ ಸಹ ಪೂರ್ಣ ವೇತನ ನೀಡಿರುವುದು ಶ್ಲಾಘನೀಯ
– ವೈ.ಎ.ನಾರಾಯಣಸ್ವಾಮಿ, ವಿಧಾನ ಪರಿಷತ್ ಸದಸ್ಯ
ಈ ಹಿಂದೆ ಗುಣಮಟ್ಟದ ಶಿಕ್ಷಣ ಒದಗಿಸಲು ಸರ್ಕಾರ ಪರದಾಡಿದ ಸಂದರ್ಭದಲ್ಲಿ ಸರಿದೂಗಿಸಲು ಸಹಕಾರ ನೀಡಿ, ಬಂಡವಾಳ ಹೂಡಿ, ಸರ್ಕಾರದ ಜೊತೆಗೆ ನಡೆದ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಹಿತ ಕಾಪಾಡಲು ವಿಧಾನಪರಿಷತ್ ಸದಸ್ಯರು ಬದ್ದರಾಗಿದ್ದಾರೆ. ಈ ಸಂಕಷ್ಟ ಸಂದರ್ಭದಲ್ಲಿ ಕೆಲ ಸಂಸ್ಥೆಗಳು ಕಮರ್ಷಿಯಲ್ ಆಗಿ ಚಿಂತಿಸಿವೆ. ಈ ಪೈಕಿ ನಗರ ಪ್ರದೇಶದ ಖಾಸಗಿ ಶಾಲೆಗಳು ಈ ಪ್ರಕ್ರಿಯೆ ನಡೆಸಿದ್ದು, ಈ ಬಗ್ಗೆ ಸರ್ಕಾರ ಗಮನಹರಿಸಿದೆ
– ಎಂ.ಚಿದಾನಂದ್ಗೌಡ, ವಿಧಾನ ಪರಿಷತ್ ಸದಸ್ಯ
