ತುಮಕೂರು
ತುಮಕೂರು ತಾಲ್ಲೂಕು ಬೆಳಗುಂಬ ಗ್ರಾಮದ ಸರ್ವೆ ನಂಬರ್ 92 ರ 13 ಎಕರೆ 17 ಗುಂಟೆ ಸರ್ಕಾರಿ ಜಮೀನಿನಲ್ಲಿ ಸಾರ್ವಜನಿಕ ಸ್ಮಶಾನಕ್ಕೆ ಮಂಜೂರಾದ ಜಾಗದಲ್ಲಿ ಸ್ಮಶಾನವನ್ನು ಅಭಿವೃದ್ಧಿಪಡಿಸಬೇಕೆಂದು ಕೋರಿ ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಬಿ.ಸಿ.ಗೌರಿಶಂಕರ್, ಜಿಲ್ಲಾಧಿಕಾರಿಗಳು ಮತ್ತು ತುಮಕೂರು ತಹಸೀಲ್ದಾರ್ ಅವರಿಗೆ ಬೆಳಗುಂಬ ಗ್ರಾಮ ಪಂಚಾಯತಿ ಸದಸ್ಯ ಬಿ.ಎಸ್. ವೆಂಕಟೇಶ್ ಮನವಿ ಸಲ್ಲಿಸಿದ್ದಾರೆ.
ತುಮಕೂರು ತಾಲ್ಲೂಕು ಬೆಳಗುಂಬ ಗ್ರಾಮದ ಸ.ನಂ. 92 ರಲ್ಲಿ 13 ಎಕರೆ 17 ಗುಂಟೆ ಸರ್ಕಾರಿ ಜಮೀನು ಇದ್ದು, ಈ ಜಾಗವನ್ನು ಈಗಾಗಲೇ ವಿವಿ‘ ಸಾರ್ವಜನಿಕ ಉದ್ದೇಶಗಳಿಗಾಗಿ ಮೀಸಲಿಟ್ಟಿರುವುದು ಸರಿಯಷ್ಟೇ. ಇದರಲ್ಲಿ 1 ಎಕರೆ 20 ಗುಂಟೆ ಜಾಗವನ್ನು ಸಾರ್ವಜನಿಕ ಸ್ಮಶಾನಕ್ಕೆಂದು ಮೀಸಲಿಟ್ಟು, 2007 ರಲ್ಲೇ ಸರ್ಕಾರಿ ಆದೇಶ (ಸಂಖ್ಯೆ: ಎಲ್ ಎನ್ ಡಿ (ಟಿಎಂಕೆ) ಎಸ್.ಆರ್.89/ 2006-07, ದಿನಾಂಕ 02-02-2007)ವನ್ನು ಹೊರಡಿಸಲಾಗಿದೆ. ಈ ಜಾಗದ ಬಗ್ಗೆ ಪಹಣಿಯಲ್ಲೂ ದಾಖಲಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಶವಸಂಸ್ಕಾರಕ್ಕೆ ಜಾಗವಿಲ್ಲ
ಬೆಳಗುಂಬ ಗ್ರಾಮವು ಗ್ರಾಮ ಪಂಚಾಯಿತಿ ಕೇಂದ್ರವಾಗಿದ್ದು, ತುಮಕೂರು ನಗರಕ್ಕೆ ಹೊಂದಿಕೊಂಡಂತಿದ್ದು, ಬೆಳವಣಿಗೆ ಹೊಂದುತ್ತಿರುವ ಗ್ರಾಮವಾಗಿದೆ. ಈಗ ಬೆಳಗುಂಬ ಗ್ರಾಮದಲ್ಲಿ ಸುಮಾರು 5 ರಿಂದ 6 ಸಾವಿರದಷ್ಟು ಜನಸಂಖ್ಯೆ ಇದೆ. ಎಲ್ಲ ಜಾತಿ-ಜನಾಂಗದವರೂ ಇಲ್ಲಿ ವಾಸವಿದ್ದಾರೆ. ಆದರೆ ಈ ಗ್ರಾಮಕ್ಕೆ ತೀರಾ ಅನಿವಾರ್ಯವಾದ ಸ್ಮಶಾನ ಎಂಬುದೇ ಇಲ್ಲದಂತಾಗಿದೆ. ಹೀಗಾಗಿ ಜಮೀನು ಇದ್ದವರು ತಮ್ಮ ಜಮೀನಿನಲ್ಲಿ ಶವಸಂಸ್ಕಾರ ಮಾಡಿಕೊಳ್ಳುತ್ತಾರೆ.
ಜಮೀನು ಇಲ್ಲದವರು ರಸ್ತೆ ಬದಿ ಅಥವಾ ಕೆರೆ ಅಂಗಳವನ್ನು ಅವಲಂಬಿಸುವಂತಾಗಿದೆ. 2007 ರಲ್ಲೇ ಇಲ್ಲಿನ ಜನರ ಅನುಕೂಲಕ್ಕಾಗಿ ಸ್ಮಶಾನಕ್ಕೆ ಸರ್ಕಾರ ಭೂಮಿ ಮಂಜೂರು ಮಾಡಿದೆಯಾದರೂ, ಈವರೆಗೆ ಅದನ್ನು ಬಳಕೆಗೆ ಯೋಗ್ಯವಾಗುವಂತೆ ಸಿದ್ಧಪಡಿಸದೆ ಇರುವುದರಿಂದ ಸ್ಮಶಾನ ಭೂಮಿ ಇದ್ದೂ ಇಲ್ಲದಂತಾಗಿದೆ. ಸದರಿ ಜಾಗವು ಸಂಪೂರ್ಣ ಗುಡ್ಡ ಮತ್ತು ಬಂಡೆಗಲ್ಲುಗಳಿಂದ ಕೂಡಿದೆ. ಸಮತಟ್ಟಾಗಿಲ್ಲ. ಅಲ್ಲಿಗೆ ಹೋಗಲು ಸೂಕ್ತ ದಾರಿಯೂ ಇಲ್ಲ ಎಂದು ವಿವರಿಸಿದ್ದಾರೆ.
ಈ ಸೌಲಭ್ಯಗಳು ಬೇಕು
ಆದ್ದರಿಂದ ಸಾರ್ವಜನಿಕ ಸ್ಮಶಾನಕ್ಕೆ ಮೀಸಲಾಗಿರುವ ಜಾಗವನ್ನು ಬಳಕೆಗೆ ಯೋಗ್ಯವಾಗುವಂತೆ ತುರ್ತಾಗಿ ಸಮತಟ್ಟುಗೊಳಿಸಿ, ನಾಮಲಕ ಹಾಕಬೇಕು. ಅಲ್ಲಿಗೆ ಹೋಗಲು ಸೂಕ್ತ ರಸ್ತೆ ನಿರ್ಮಿಸಬೇಕು. ಸ್ಮಶಾನದ ಸುತ್ತಲೂ ಸೂಕ್ತವಾಗಿ ಕಾಂಪೌಂಡ್ ನಿರ್ಮಿಸಬೇಕು, ಒಳಗೆ ಕಲ್ಲುಬೆಂಚುಗಳ ಜೊತೆಗೆ ಒಂದು ಶೆಲ್ಟರ್ ನಿರ್ಮಿಸಬೇಕು. ಕೊಳವೆ ಬಾವಿ ಕೊರೆಸಿ, ಕೈಪಂಪು ವ್ಯವಸ್ಥೆ ಮಾಡಬೇಕು. ಒಳಭಾಗದಲ್ಲಿ ಸೂಕ್ತ ವಿದ್ಯುತ್ದೀಪಗಳ ವ್ಯವಸ್ಥೆ ಮಾಡಬೇಕು. ಸುತ್ತಲೂ ಗಿಡಗಳನ್ನು ನೆಡಬೇಕು ಎಂದು ಅಲ್ಲಿ ಆಗಬೇಕಿರುವ ಸೌಲಭ್ಯಗಳ ಬಗ್ಗೆ ಬಿ.ಎಸ್.ವೆಂಕಟೇಶ್ ಅವರು ಮನವಿಪತ್ರದಲ್ಲಿ ಪಟ್ಟಿಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
