ಹಗರಿಬೊಮ್ಮನಹಳ್ಳಿ
ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿಗಳ ತತ್ವಾದರ್ಶಗಳು ಅಮರ, ಅವರು ಮಾನವೀಯತೆಯ ಪ್ರತೀಕವಾಗಿದ್ದು, ಅವರ ನಡೆ ಸರ್ವಕಾಲಕ್ಕೂ ಪ್ರಸ್ತುತ ಎಂದು ಪುಣ್ಯಕ್ಚೇತ್ರ ನಂದಿಪುರ ಮಹೇಶ್ವರ ಸ್ವಾಮೀಜಿ ಹೇಳಿದರು. ಪಟ್ಟಣದ ಕುರುದಗಡ್ಡಿ ಯುವಶಕ್ತಿ ವೇದಿಕೆ ಹಮ್ಮಿಕೊಂಡಿದ್ದ ಲಿಂ.ಶ್ರೀ ಡಾ.ಶಿವಕುಮಾರ ಸ್ವಾಮೀಜಿಗಳ ಭಕ್ತಿಪೂರ್ಣ ಶ್ರದ್ಧಾಂಜಲಿ ಮತ್ತು ಅನ್ನದಾಸೋಹ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು.
ಮಕ್ಕಳಲ್ಲಿ ದೇವರನ್ನು ಕಾಣುತ್ತೇವೆ. ಅದರಂತೆ ಮಕ್ಕಳನ್ನು ಪ್ರೀತಿಸಿ, ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ತಮ್ಮನ್ನು ತಾವು ತೊಡಗಿಸಿಕೊಂಡು ನಡೆದಾಡುವ ದೇವರೆನಿಸಿಕೊಂಡರು ಎಂದು ನುಡಿದರು. ಶ್ರೀಗಳಿಗೆ ಭಾರತರತ್ನ ನೀಡದಿರಬಹುದು ಆದರೆ ಅವರು ಭಾರತಕ್ಕೆರತ್ನ ಎಂದು ಸಮರ್ಥಿಸಿದರು.
ಹಾಲಸ್ವಾಮಿ ಮಠದ ಶಿವಯೋಗಿ ಹಾಲ ಸಿದ್ಧೇಶ್ವರ ಸ್ವಾಮೀಜಿ ಮಾತನಾಡಿ, ನನಗಾಗಿ ನಾನು ಬದುಕಬಾರದು, ಅನ್ಯರಿಗಾಗಿ ಬದುಕಬೇಕು ಎಂದು ಸಾರಿ ಹೇಳಿದ ಸಿದ್ಧಗಂಗಾ ಶ್ರೀಗಳು ಅದ್ಭುತ ಸಾಧನೆ ಮಾಡಿ ಮೇರು ಪರ್ವತದಂತೆ ಬೆಳೆದರು. ಸಿದ್ಧಗಂಗಾ ಶ್ರೀಗಳು ಎಂದೂ ಪ್ರಚಾರದ ಗೀಳಿಗೆ ಹೋಗದೆ ಕಾಯಕ್ಕೆ ಅಂಟಿಕೊಂಡವರು. ಹೆಚ್ಚು ಮಾತನಾಡದೇ ಸದಾ ಕ್ರಿಯಾಶೀಲರಾಗಿದ್ದರು. ಮಾತು ಸಾಧನೆಯಾಗಬಾರದು ಸಾಧನೆ ಮಾತಾಗಬೇಕು ಎನ್ನುವಂತೆ ಬಾಳಿದ ಮಹಾನ್ ಸಂತನ ಹಾದಿಯಲ್ಲಿ ಸಾಗೋಣ ಎಂದರು.
ಕುರುದಗಡ್ಡಿ ಯುವ ಶಕ್ತಿ ವೇದಿಕೆಯ ಅಧ್ಯಕ್ಷ ಪ್ಯಾಟಿ ಸೋಮಪ್ಪ ಅಧ್ಯಕ್ಷತೆವಹಿಸಿ, ಅನ್ನದಾಸೋಹ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ದೈವಸ್ಥರಾದ ಸಿದ್ದಪ್ಪ, ತಳವಾರ ಬಸವರಾಜ, ಕನಕಪ್ಪ, ಶಿವಣ್ಣ, ಎ.ಕೆ.ರಾಮಣ್ಣ, ಎಸ್.ದೊಡ್ಡಬಸಪ್ಪ, ಎಸ್.ಹರೀಶ್, ಮಂಜುನಾಥ, ವೆಂಕಟೇಶ್ ಇದ್ದರು.ವೇದಿಕೆಯ ಕಾರ್ಯದರ್ಶಿ ಶಿವಶಂಕ್ರಯ್ಯ, ಶಿಕ್ಷಕ ಕೊಂಪಿ ವಿರೇಶ್, ಮಾರೇಶ್ ನಿರ್ವಹಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
