ಶಿರಾ
ವಿಧವಾ ವೇತನ, ಸಂಧ್ಯಾ ಸುರಕ್ಷಾ, ಜಾತಿ ಮತ್ತು ವರಮಾನ ಪತ್ರಗಳಿಗಾಗಿ ಸದರಿಯ ಸಾಲಲ್ಲಿ ನಿಂತು ಕಾಯುತ್ತಿದ್ದ ಸಾರ್ವಜನಿಕರು ಹಾಗೂ ರೈತರು ಇದೀಗ ಶಿರಾ ತಹಶೀಲ್ದಾರ್ ಕಛೇರಿಯ ಮುಂದೆ ಬಗರ್ಹುಕುಂ ಸಾಗುವಳಿ ಅರ್ಜಿಗಾಗಿ ದಿನವಿಡೀ ಸರದಿಯ ಸಾಲಲ್ಲಿ ನಿಲ್ಲುತ್ತಿರುವ ಪ್ರಸಂಗ ಕಳೆದ ಎರಡು ದಿನಗಳಿಂದ ನಡೆಯುತ್ತಿದೆ.
ಕಳೆದ 10-12 ವರ್ಷಗಳಿಂದಲೂ ಶಿರಾ ಭಾಗದಲ್ಲಿ ಅನಧಿಕೃತವಾಗಿ ಸರ್ಕಾರಿ ಜಮೀನನ್ನು ಭೂಸಾಗುವಳಿ ಮಾಡಿದ ರೈತರಿಗೆ ಜಮೀನು ಮಂಜೂರು ಮಾಡುವ ಕೆಲವಾಗದ ಪರಿಣಾಮ ಸರ್ಕಾರ ಸಾಗವಳಿ ಅರ್ಜಿ ನಮೂನೆಗಳನ್ನು ನೀಡುವ ಘೋಷಣೆ ಮಾಡುತ್ತಿದ್ದಂತೆಯೇ ಶಿರಾ ತಹಶೀಲ್ದಾರ್ ಕಛೇರಿಯ ಮುಂದೆ ಸಾವಿರಾರು ಮಂದಿ ರೈತರು ಕಿಕ್ಕಿರಿದು ನಿಂತಿದ್ದಾರೆ.
ಮೊದಲು ಕೇವಲ ಒಂದೇ ಸಾಲಿನಲ್ಲಿ ನಿಲ್ಲಿಸಿ ಅರ್ಜಿಗಳನ್ನು ನೀಡುತ್ತಿದ್ದ ಪರಿಣಾಮ ರೈತರನ್ನು ನಿಯಂತ್ರಿಸುವ ಸಲುವಾಗಿ 6 ಕೌಂಟರ್ಗಳನ್ನು ತೆರೆದು ಅರ್ಜಿಗಳನ್ನು ನೀಡಲು ವ್ಯವಸ್ಥೆ ಮಾಡಲಾಯಿತು. ಕೌಂಟರ್ಗಳನ್ನು ಹೆಚ್ಚಿಸಿದ್ದರೂ ಕೂಡಾ ಅರ್ಜಿಗಳನ್ನು ನೀಡುವಲ್ಲಿ ಇಲ್ಲಿನ ಸಿಬ್ಬಂಧಿ ವಿಳಂಭ ಮಾಡುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಬೆಳಿಗ್ಗೆ 5 ಗಂಟೆಗೆ ಊಟ, ತಿಂಡಿಯನ್ನೂ ತಿನ್ನದೆ ಅಕ್ರಮ ಸಾಗುವಳಿ ಮಾಡಿದ ರೈತರು ಸರದಿಯ ಸಾಲಲ್ಲಿ ನಿಲ್ಲುತ್ತಿದ್ದು ಇದು ಪೊಲೀಸರಿಗೂ ತಲೆ ನೋವಾಗಿದೆ. ಜನರನ್ನು ನಿಯಂತ್ರಿಸಲು ನಗರ ಠಾಣಾ ಸಿ.ಪಿ.ಐ. ರಂಗಸ್ವಾಮಿ ಸ್ಥಳದಲ್ಲಿಯೇ ಬೀಡು ಬಿಟ್ಟಿದ್ದು ಹೆಚ್ಚಿನ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ.
ಅರ್ಜಿ ನೀಡುವಲ್ಲಿ ತುಂಬಾ ವಿಳಂಭ ಮಾಡುತ್ತಿರುವ ಕಂದಾಯ ಇಲಾಖೆಗೆ ರೈತರು ಹಿಡಿ ಶಾಪ ಹಾಕುತ್ತಿದ್ದರೆ ಮತ್ತೊಂದೆಡೆ ಹೋಬಳಿವಾರು ಅರ್ಜಿಗಳನ್ನು ನೀಡುವಂತೆಯೂ ರೈತರು ಒತ್ತಾಯಪಡಿಸುತ್ತಿದ್ದಾರೆ. ಈ ಸಂಬಂಧ ಹೋಬಳಿವಾರು ಅರ್ಜಿಗಳನ್ನು ನೀಡಲು ಜಿಲ್ಲಾಧಿಕಾರಿಗಳ ಅನುಮತಿ ಪಡೆಯಬೇಕು. ಜಿಲ್ಲಧಿಕಾರಿಗಳೊಂದಿಗೆ ಈ ಬಗ್ಗೆ ಚರ್ಚಿಸುವುದಾಗಿ ತಹಶೀಲ್ದಾರ್ ರಂಗೇಗೌಡ ಪತ್ರಿಕೆಗೆ ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
