ಮಧುಗಿರಿ
ತಾಲ್ಲೂಕಿನಲ್ಲಿ ನಡೆಯುತ್ತಿರುವ ಯಾವುದೇ ಅಭಿವೃದ್ದಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆಗಳಿಗೆ ಜನಪ್ರತಿನಿಧಿಗಳನ್ನು ಆಹ್ವಾನಿಸುತ್ತಿಲ್ಲ ಹಾಗೂ ಅವರ ಗಮನಕ್ಕೂ ತಾರದೆ ಶಿಷ್ಟಾಚಾರ ಉಲ್ಲಂಘನೆ ಮಾಡುತ್ತಿದ್ದಾರೆ ಎಂದು ತಾ.ಪಂ ಅಧ್ಯಕ್ಷೆ ಇಂದಿರಾ ದೇನಾನಾಯ್ಕ ಆರೋಪಿಸಿದ್ದಾರೆ.
ತಾ.ಪಂ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಾವೂ ಸಹ ಚುನಾಯಿತರಾಗಿ ಆಯ್ಕೆಯಾಗಿದ್ದೇವೆ. ನಮಗೂ ಸಹ ಗೌರವ ಕೊಡುವ ಪರಿಪಾಠವನ್ನು ಅಧಿಕಾರಿಗಳು ರೂಢಿಸಿಕೊಳ್ಳಬೇಕು. ತಾಲ್ಲೂಕಿನಲ್ಲಿನ ಅಧಿಕಾರಿಗಳು ಚುನಾಯಿತ ಜನಪ್ರತಿನಿಧಿಗಳನ್ನು ನಿರ್ಲಕ್ಷ್ಯವಹಿಸುತ್ತಿದ್ದಾರೆ. ಆದ್ದರಿಂದ ಮುಂದಿನ ದಿನಗಳಲ್ಲಿ ಇಲಾಖಾ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಪ್ರಗತಿ ಪತ್ರ ನೀಡುವುದಿಲ್ಲ ಮತ್ತು ಅಂತಹ ಅಧಿಕಾರಿಗಳು ಸಭೆಗೆ ಹಾಜರಾಗುವ ಅವಶ್ಯಕತೆ ಇಲ್ಲ ಎಂದು ಎಚ್ಚರಿಸಿದರು.
ಮಧುಗಿರಿ ಸರ್ಕಾರಿ ಆಸ್ಪತ್ರೆಯಲ್ಲಿ ಶವಪರೀಕ್ಷೆಗಾಗಿ 5 ರಿಂದ 10 ಸಾವಿರದವರೆಗೂ ಲಂಚ ಕೇಳುತ್ತಿದ್ದಾರೆ ಎಂದು ತಿಳಿದುಬಂದಿದ್ದು, ಇದು ಹೆಣದ ಮೇಲಿನ ದುಡ್ಡಿಗೆ ಆಸೆಪಟ್ಟಂತಾಗುತ್ತದೆ ಎಂದು ಕಿಡಿಕಾರಿದರು.ಗ್ರಾಮೀಣ ಪ್ರದೇಶದಲ್ಲಿ ಪ್ರತಿ ಸಣ್ಣ ಪುಟ್ಟ ಪೆಟ್ಟಿಗೆ ಅಂಗಡಿಗಳಲ್ಲಿಯೂ ಕಾಫಿ-ಟೀ ನೀಡುವ ರೀತಿಯಲ್ಲಿ ನಿರ್ಭಯವಾಗಿ ಅಕ್ರಮ ಮದ್ಯವನ್ನು ಮಾರಾಟ ಮಾಡುತ್ತಿದ್ದಾರೆ. ಇದರ ಬಗ್ಗೆ ಸಾರ್ವಜನಿಕರು ಅಬಕಾರಿ ಇಲಾಖೆಗೆ ದೂರು ನೀಡಲು ಭಯ ಪಡುತ್ತಿದ್ದಾರೆ.
ಕಾರಣವೇನೆಂದರೆ ಅಕ್ರಮ ಮದ್ಯ ಮಾರಾಟ ಮಾಡುವವರ ಬಗ್ಗೆ ದೂರು ನೀಡಿದವರ ವಿವರಗಳನ್ನು ಅಧಿಕಾರಿಗಳು ಮದ್ಯ ಮಾರಾಟ ಮಾಡುವವರಿಗೆ ತಿಳಿಸಿ ಅವರ ಮೇಲೆ ಗಲಾಟೆ ಮಾಡಿಸುತ್ತಾರೆ. ಇದರಿಂದ ಅಬಕಾರಿ ಇಲಾಖೆಯವರೂ ಸಹ ಅಕ್ರಮ ದಂಧೆಯಲ್ಲಿ ಶಾಮೀಲಾಗಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ ಎಂದರು.
ಬಿಜವರ ಕ್ಷೇತ್ರದ ಸದಸ್ಯ ರಂಗನಾಥ್ ಮಾತನಾಡಿ, ಕುಪ್ಪಾಚಾರಿ ರೊಪ್ಪದಿಂದ ಹಾವೇಕಟ್ಟೆ ರಸ್ತೆ ಅಭಿವೃದ್ದಿ ಕಾಮಗಾರಿಯು ಲೋಕೋಪಯೋಗಿ ಇಲಾಖೆಯಿಂದ ನಡೆಯುತ್ತಿದ್ದು, ತುಂಬಾ ಕಳಪೆ ಕಾಮಗಾರಿಯಾಗಿದೆ. ಯಾವುದೇ ಕಾರಣಕ್ಕೂ ಇದರ ಬಿಲ್ ಮಾಡಬಾರದು ಎಂದು ಎಇಇ ಹೊನ್ನೇಶಪ್ಪರವರಿಗೆ ತಿಳಿಸಿದಾಗ, ಈ ಕಾಮಗಾರಿಯನ್ನು ರದ್ದುಪಡಿಸಿ ಮರು ಟೆಂಡರ್ ಕರೆದು ಕಾಮಗಾರಿ ಪ್ರಾರಂಭಿಸಲಾಗುವುದು ಎಂದರು.
ಪಶು ವೈದ್ಯ ಇಲಾಖೆಯ ಸಹಾಯಕ ನಿರ್ದೇಶಕ ಡಾ.ನಾಗಭೂಷಣ್ ಮಾತನಾಡಿ, ನಮ್ಮ ಇಲಾಖೆಯಿಂದ 40 ಮೇವು ಕತ್ತರಿಸುವ ಯಂತ್ರಗಳನ್ನು ವಿತರಿಸಲಾಗಿದೆ. ಗೊಂದಿಹಳ್ಳಿ ಮತ್ತು ಸಜ್ಜೆಹೊಸಹಳ್ಳಿ ಗ್ರಾಮಗಳಿಗೆ ನೂತನ ಪಶು ವೈದ್ಯ ಕೇಂದ್ರದ ಕಟ್ಟಡ ಮಂಜೂರಾಗಿವೆ. ತೆರಿಯೂರು, ನಿಟ್ರಹಳ್ಳಿ ಕ್ರಾಸ್, ಮರುವೇಕೆರೆ, ಕೊಂಡವಾಡಿ ಮತ್ತು ಕೋಡ್ಲಾಪುರ ಗ್ರಾಮಗಳಿಗೆ ಪಶು ವೈದ್ಯ ಕೇಂದ್ರ ಕಟ್ಟಡದ ಅವಶ್ಯಕತೆ ಇದ್ದು, ಪ್ರಸ್ತಾವನೆ ಸಲ್ಲಿಸಲಾಗಿದೆ. ಗರಣಿ, ತಗ್ಗಿಹಳ್ಳಿ, ಕೊಂಡವಾಡಿ, ಕವಣದಾಲ ಮತ್ತು ರಂಟವಳಲು ಗ್ರಾಮದಲ್ಲಿರುವ ಪ್ರಾಥಮಿಕ ಪಶು ವೈದ್ಯ ಕೇಂದ್ರಗಳ ಉನ್ನತೀಕರಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ತಾ.ಪಂ ಸಮಿತಿ ಶಿಫಾರಸ್ಸು ಮಾಡಬೇಕೆಂದು ತಿಳಿಸಿದರು.
ಮಿಡಿಗೇಶಿ ತಾ.ಪಂ ಸದಸ್ಯೆ ಯಶೋಧಮ್ಮ ಮಾತನಾಡಿ, ಮಿಡಿಗೇಶಿ ಗ್ರಾಮದಲ್ಲಿ ಇತ್ತೀಚೆಗೆ ರೈತ ಸಂಪರ್ಕ ಕೇಂದ್ರದ ಕಟ್ಟಡಕ್ಕೆ ಶಂಕು ಸ್ಥಾಪನಾ ಕಾರ್ಯಕ್ರಮ ನಡೆದಿದ್ದು, ಅಧಿಕಾರಿಗಳು ನಮ್ಮನ್ನು ಆಹ್ವಾನಿಸದೆ ಶಂಕುಸ್ಥಾಪನೆ ನೆರವೇರಿಸಿ ರುತ್ತಾರೆ. ನಾನೂ ಸಹ ಶಾಸಕರಂತೆ ಜನರಿಂದ ಮತ ಪಡೆದು ಚುನಾಯಿತರಾಗಿದ್ದೇನೆ ಎಂದು ಕೆ.ಆರ್.ಐ.ಡಿ.ಎಲ್ ಅಧಿಕಾರಿ ಹನುಂತರಾಯಪ್ಪನನ್ನು ತರಾಟೆಗೆ ತೆಗೆದುಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎ.ರಾಜು ಮಾತನಾಡಿ, ಅಧಿಕಾರಿಗಳು ಮತ್ತು ಎಂಜಿನಿಯರ್ಗಳು ಸ್ಥಳ ಗುರುತಿಸದೆ ಕಾಮಗಾರಿ ಪ್ರಾರಂಭಿಸಲು ಸಾಧ್ಯವೆ? ಆದ್ದರಿಂದ ಕಾಮಗಾರಿ ನಿಲ್ಲಿಸುವಂತೆ ಸದಸ್ಯರಿಗೆ ತಿಳಿ ಹೇಳಿದರು. ಸಭೆಯಲ್ಲಿ ಉಪಾಧ್ಯಕ್ಷ ಲಕ್ಷ್ಮೀನರಸಪ್ಪ, ಇಓ ದೊಡ್ಡಸಿದ್ದಪ್ಪ, ತಾ.ಪಂ ಸದಸ್ಯರು ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
