ಶಿರಾ
ಕಾರ್ಮಿಕ ದಿನಾಚರಣೆ ವಿಶ್ವದ ಏಕೈಕ ಕಾರ್ಮಿಕರ ಹುಟ್ಟು ಹಬ್ಬವಾಗಿದ್ದು, ಕಾರ್ಮಿಕರಲ್ಲಿ ಸ್ವಾಭಿಮಾನ ಮತ್ತು ಆತ್ಮ ಗೌರವ ತಂದ ಸುದಿನ ಎಂದು ಪ್ರಾಧ್ಯಾಪಕ ಡಾ.ಚಿಕ್ಕಣ್ಣ ಯಣ್ಣೆಕಟ್ಟೆ ವ್ಯಾಖ್ಯಾನಿಸಿದರು. ಸಿರಾ ತಾಲ್ಲೂಕು ಕನಕ ಪತ್ತಿನ ಸಹಕಾರ ಸಂಘವು ತಮ್ಮ ಏಳು ಶಾಖೆಗಳ ನೌಕರ ವರ್ಗದವರಿಗಾಗಿ ಏರ್ಪಡಿಸಿದ್ದ ಕಾರ್ಮಿಕ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
1886 ರ ಮೇ 1 ರಂದು ಅಮೇರಿಕದಲ್ಲಿ ಆಗಸ್ರೇನ್ ಬಂಡವಾಳ ಶಾಹಿಗಳ ಶೋಷಣೆಯ ವಿರೋಧಿ ಆಂದೋಲನ ಆರಂಭಿಸಿದ್ದರು. ಜೀತಗಾರಿಕೆ, ದಿನದ 20 ಗಂಟೆ ದುಡಿಮೆಯ ಬಿಡುಗಡೆಗಾಗಿ ನಡೆಸಿದ ಹೋರಾಟ. ಅದರ ನೇತಾರನೂ ಸೇರಿದಂತೆ ಸಾವಿರಾರು ಕಾರ್ಮಿಕರು ನೇಣಿಗೆ, ತುಪಾಕಿಗೆ ಬಲಿಯಾದರು. ದಿನದ 8 ಗಂಟೆಯ ದುಡಿಮೆ ಆರಂಭಕ್ಕೆ ಈ ಆಂದೋಲನ ಕಾರಣವಾಯಿತು. ಕಾರ್ಮಿಕರ ಹೋರಾಟಕ್ಕೆ ಜಯ ತಂದ ಸಂಭ್ರಮವೇ ಕಾರ್ಮಿಕರ ದಿನಾಚರಣೆ ಎಂದರು.
ಬ್ಯಾಂಕಿನ ಹಿರಿಯ ನಿರ್ದೇಶಕ, ಬಿ.ಜಿ. ಕರಿಯಪ್ಪ, ಕನಕ ಬ್ಯಾಂಕ್ ಬೆಳೆದು ಬಂದ ಬಗೆಯನ್ನು ವಿವರಿಸಿ ಇಂದು 50 ಜನ ದುಡಿಯುವವರಿಗೆ ಬದುಕು ಕಟ್ಟಿ ಕೊಟ್ಟ ಬ್ಯಾಂಕ್ ಲಕ್ಷಾಂತರ ಜನರಿಗೆ ಸಹಾಯ ಹಸ್ತ ಚಾಚಿದೆ. ಇದರ ಶ್ರೇಯಸ್ಸು ಇಲ್ಲಿನ ಕಾರ್ಮಿಕರ ಒಗ್ಗಟ್ಟಿನಲ್ಲಿದೆ ಎಂದರು.
ಪ್ರಾಸ್ತಾವಿಕ ಮಾತು ಹೇಳಿದ ಜನರಲ್ ಮೇನೇಜರ್ ಆರ್.ಲಕ್ಷ್ಮಣ್, ಕನಕ ಬ್ಯಾಂಕಿನ ಪ್ರಗತಿದಾಯಕ ಹೆಜ್ಜೆ ಗುರುತುಗಳನ್ನು ವಿವರಿಸಿ, ತಾಲ್ಲೋಕಿನಲ್ಲಿ ಮೊದಲಿಗೆ ಕಾರ್ಮಿಕ ದಿನಾಚರಣೆ ಆಚರಿಸುತ್ತಿರುವುದಕ್ಕೆ ಹೆಮ್ಮೆ ಅನಿಸುತ್ತಿದೆ ಎಂದರು. ಕನಕ ಬ್ಯಾಂಕಿನ ಬರಗೂರು ಶಾಖೆಯ ಮೇನೇಜರ್ ಈರಣ್ಣ, ಪ.ನಾ.ಹಳ್ಳಿ ಶಾಖೆಯ ಅಶ್ವತ್ಥಪ್ಪ, ತೋವಿನಕೆರೆ ಶಾಖೆಯ ನಾಗೇಂದ್ರಪ್ಪ ಕಾರ್ಮಿಕರ ಪರಸ್ಪರ ಸಂಘಟನೆ ಕುರಿತು ಮಾತನಾಡಿದರು. ಸಂಘದ ಉಪಾಧ್ಯಕ್ಷರಾದ ಶ್ರೀಡಿ.ಆರ್.ಸೀತಣ್ಣ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ನೌಕರರು ಸೇವಾ ವಿಧಿ ಪ್ರತಿಜ್ಞೆ ಸ್ವೀಕರಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
