ಚಿತ್ರದುರ್ಗ:
ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ದಾಖಲಾಗಿರುವ ಅರಣ್ಯ ಹಕ್ಕು ಕಾಯ್ದೆಯಡಿ ಅರಣ್ಯ ವಾಸಿಗಳು ಸಲ್ಲಿಸಿದ ಅರ್ಜಿಗಳು ತಿರಸ್ಕೃತಗೊಂಡಿದ್ದು ಅವುಗಳನ್ನು ಮಾತ್ರ ಪರಿಶೀಲಿಸಬೇಕು ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ಅರಣ್ಯ ಹಕ್ಕು ಕಾಯ್ದೆಯಡಿ ಅರ್ಜಿಗಳ ಪುನರ್ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅರ್ಜಿಗಳು ತಿರಸ್ಕೃತಗೊಂಡಿದ್ದು ಅರಣ್ಯ ಜಾಗವೇ ಅಥವಾ ಬುಡಕಟ್ಟು ನಿವಾಸಿಗಳು ವಾಸಿಸುವ ಜಾಗವೆಂದು ಪರಿಶೀಲಿಸಬೇಕು. ಆ ಸ್ಥಳಕ್ಕೆ ಅಲ್ಲಿನ ನಿವಾಸಿಗಳು ಕಂದಾಯ ರೂಪದಲ್ಲಿ ಹಣವನ್ನು ಪಾವತಿಸಿದ್ದಾಗಿದ್ದರೆ ಅಂತಹ ಅರ್ಜಿಗಳನ್ನು ಮರು ಪರಿಶೀಲಿಸಬೇಕು ಎಂದರು.
ಅರಣ್ಯ ಹಕ್ಕು ಸಮಿತಿಗಳು ನೈಸರ್ಗಿಕ ನ್ಯಾಯ ನಿಯಮಗಳನ್ನು ಪಾಲಿಸದೇ ಅರ್ಜಿಗಳನ್ನು ತಿರಸ್ಕರಿಸದಲ್ಲಿ ಪುನ: ನೈಸರ್ಗಿಕ ನ್ಯಾಯ ನಿಯಮಗಳನ್ವಯವೇ ಅಂತಹ ಅರ್ಜಿಗಳನ್ನು ಪುನರ್ ಪರಿಶೀಲಿಸಿ ಸೂಕ್ತ ಆದೇಶಗಳನ್ನು ಹೊರಡಿಸಲು ಯಾವುದೆ ಬಾಧಕವಿರುವುದಿಲ್ಲ ಎಂದು ಹೇಳಿದರು.
ಉಪವಿಭಾಗಾಧಿಕಾರಿ ವಿಜಯಕುಮಾರ್ ಮಾತನಾಡಿ ಅರ್ಜಿ ಸಲ್ಲಿಸಿದ ಜಮೀನು ಕಂದಾಯ ಇಲಾಖೆಗೆ ಸೇರಿದ ಜಮೀನೆ, ಸರ್ಕಾರದ ಜಮೀನೆ ಅಥವ ಅರಣ್ಯ ಇಲಾಖೆಯಿಂದ ಅಧಿಸೂಚಿಸಲ್ಪಟ್ಟ ಆಸ್ತಿಯೆ ಎಂದು ಖಚಿತ ಪಡಿಸಿಕೊಂಡು ಅರ್ಜಿದಾರರಿಗೆ ವೈಯಕ್ತಿಕವಾಗಿ ಲಿಖಿತ ರೂಪದ ನೋಟೀಸ್ ನೀಡಿ ಅಹವಾಲು ಸಲ್ಲಿಸಲು ಅವಕಾಶ ಕಲ್ಪಿಸಬೇಕು ಎಂದು ಹೇಳಿದರು.
ಈ ಹಿಂದೆ ಆ್ಯಡಾಕ್ಟ್ ಕಮಿಟಿಯು ರಚಿಸಿದ್ದುಅದರ ಪ್ರಕಾರ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪಿ.ಡಿ.ಓ. ಕಂದಾಯ ಅಧಿಕಾರಿ ಹಾಗೂ ಅರಣ್ಯ ಅಧಿಕಾರಿ ಒಟ್ಟುಗೂಡಿ ಸಭೆ ನಡೆಸಿ ಪೋಟೋ, ವಿಡಿಯೋ, ಚಿತ್ರಕರಣ ಹಾಗೂ ಆಡಿಯೋ ರೆಕಾರ್ಡ್ ಮಾಡಿ ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಕಳುಹಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ತಹಶೀಲ್ದಾರ್ ನಹೀದ ಜಂ ಜಂ, ಪ್ರೊಬೇಷನರಿ ಜಿಲ್ಲಾಧಿಕಾರಿ ನಂದಿನಿದೇವಿ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ರಾಜು ಹಾಗೂ ಜಿಲ್ಲೆಯ ಎಲ್ಲಾ ತಾಲ್ಲೂಕಿನ ದಂಢಾಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
