ಸಂವಿಧಾನ ರಚನೆಯ ನಂತರ ಶೋಷಿತರ ಇತಿಹಾಸ ಶುರುವಾಗಿದೆ : ಸಿದ್ಧರಾಮಯ್ಯ

ಬೆಂಗಳೂರು

    ಸಂವಿಧಾನ ರಚನೆಯ ನಂತರ ಶೋಷಿತರ ಇತಿಹಾಸ ಶುರುವಾಗಿದ್ದರಿಂದ ನಾನು ಈ ರಾಜ್ಯದ ಮುಖ್ಯಮಂತ್ರಿಯಾಗಲು ಸಾಧ್ಯವಾಯಿತು ಎಂದು ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಹೇಳಿದ್ದಾರೆ.

    ವಿಧಾನಸಭೆಯಲ್ಲಿಂದು ರಾಜ್ಯಪಾಲರ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು,ಸಂವಿಧಾನ ರಚನೆಯ ಹಿನ್ನೆಲೆಯಲ್ಲಿ ಶೋಷಿತರ ಇತಿಹಾಸ ಪ್ರಾರಂಭವಾಯಿತು.ಹೀಗಾಗಿ ನಾನು ವಿದ್ಯೆ ಪಡೆದು ಇಲ್ಲಿಯವರೆಗೆ ಬರಲು ಸಾಧ್ಯವಾಯಿತು ಎಂದರು.

   ಇದಕ್ಕೂ ಮುನ್ನ ಪ್ರಾಸಂಗಿಕವಾಗಿ ಒಂದು ಘಟನೆಯನ್ನು ಉಲ್ಲೇಖಿಸಿದ ಅವರು,ಒಂದು ಸಲ ದಲಿತ ನಾಯಕರಾದ ರಾಚಯ್ಯನವರು ಮತ್ತೋರ್ವ ಹಿರಿಯ ನಾಯಕರಾದ ಜೆ.ಹೆಚ್..ಪಟೇಲರನ್ನು ಕುರಿತು ಪ್ರಶಂಸೆ ಮಾಡಿದ್ದರು ಎಂದು ಹೇಳಿದರು.

   ನೀವು ಮೇಧಾವಿಗಳು,ಚತುರರು ಎಂದು ರಾಚಯ್ಯನವರು ಹೇಳಿದಾಗ ಪಟೇಲರು ತಕ್ಷಣವೇ:ರಾಚಯ್ಯನವರೇ ನನ್ನ ಇತಿಹಾಸ ಹನ್ನೆರಡನೇ ಶತಮಾನದಲ್ಲಿ ಆರಂಭವಾಯಿತು.ರಾಮಕೃಷ್ಣ ಹೆಗಡೆ ಅವರ ಇತಿಹಾಸ ಮೂರು ಸಾವಿರ ವರ್ಷಗಳ ಹಿಂದೆ ಪ್ರಾರಂಭವಾಯಿತು ಎಂದರು.ಮುಂದುವರಿಸಿ:ನಿಮ್ಮ ಇತಿಹಾಸ ಭಾರತದ ಸಂವಿಧಾನ ರಚನೆಯಾದ ದಿನದಿಂಧ ಆರಂಭವಾಯಿತು ಎಂದರು.ಹೀಗೆ ಸನ್ನಿವೇಶಕ್ಕೆ ತಕ್ಕಂತೆ ಇಂತಹ ಮಾತುಗಳನ್ನಾಡುವ ಅದ್ಭುತ ಶಕ್ತಿ ಪಟೇಲರಿಗಿತ್ತು.

   ಹೀಗೆ ಮಾತನಾಡಲು ನನಗೆ ಸಾಧ್ಯವಿಲ್ಲ.ಆದರೆ ನಮ್ಮ ರಮೇಶ್ ಕುಮಾರ್ ಅವರು ಆಗಾಗ ಇಂತಹ ಮಾತುಗಳನ್ನಾಡುತ್ತಾರೆ .ಯಾಕೆಂದರೆ ಅವರಿಗೆ ಮೂರು ಸಾವಿರ ವರ್ಷಗಳ ಇತಿಹಾಸವಿದೆ ಎಂದಾಗ ಸಭೆ ಮೂಕವಿಸ್ಮಿತವಾಗಿ ಆಲಿಸಿತು.ಸಂವಿಧಾನ ರಚನೆಯಾದ ಹಿನ್ನೆಲೆಯಲ್ಲಿ ನನ್ನಂತವರಿಗೆ ಓದಲು ಸಾಧ್ಯವಾಯಿತು.ನನ್ನ ತಂದೆ ಕೃಷಿಕ.ಅವರಿಗೆ ಓದು-ಬರಹ ಮುಖ್ಯವಾಗಿರಲಿಲ್ಲ.ಆದರೆ ನನ್ನನ್ನು ಓದಿಸಲು ಅವರಿಗೆ ಸಾಧ್ಯವಾಯಿತು.ಅದಕ್ಕೆ ಕಾರಣವಾಗಿದ್ದು ಸಂವಿಧಾನ.

   ಇಂತಹ ವಿದ್ಯೆ ನನಗೆ ಸಿಕ್ಕದೆ ಹೋಗಿದ್ದರೆ ನಾನು ಮುಖ್ಯಮಂತ್ರಿ ಹುದ್ದೆಯವರೆಗೆ ಬರಲು ಸಾಧ್ಯವೇ ಇರಲಿಲ್ಲ ಎಂದು ಸಿದ್ಧರಾಮಯ್ಯ ಬಾವುಕರಾಗಿ ಹೇಳಿದರು.ರಾಜ್ಯಪಾಲರ ವಂದನಾ ನಿರ್ಣಯದ ಮೇಲಿನ ಚರ್ಚೆಯನ್ನು ಮುಂದುವರಿಸಿದ ಅವರು,ಈ ಸರ್ಕಾರ ಅಧಿಕಾರಕ್ಕೆ ಬಂದು ಆರು ತಿಂಗಳಾಗಿವೆ.ಆದರೆ ಇದರ ಸಾಧನೆ ಏನೂ ಇಲ್ಲ ಎಂದು ಆರೋಪಿಸಿದರು.

   ರೈತರ ಕೃಷಿ ಸಾಲ ಮನ್ನಾ ಮಾಡಿದ್ದು ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ.ಅರಣ್ಯ ಬೆಳೆಸುವಲ್ಲಿ ಕರ್ನಾಟಕ ದೇಶದಲ್ಲೇ ನಂಬರ್ ಒನ್ ರಾಜ್ಯವಾಗಿದ್ದು ನಾನು ಮುಖ್ಯಮಂತ್ರಿಯಾಗಿದ್ದಾಗ ಎಂದು ಅವರು ಹೇಳಿದರು.ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ಸಹಕಾರ ಸಂಘಗಳಲ್ಲಿ ರೈತರು ಮಾಡಿದ್ದ ಒಂದು ಲಕ್ಷದವರೆಗಿನ ಸಾಲ ಮನ್ನಾ ಮಾಡಿದರು,ರಾಷ್ಟ್ರೀಕೃತ ಬ್ಯಾಂಕುಗಳಿಂದ ಮಾಡಿದ್ದ ಎರಡು ಲಕ್ಷ ರೂಗಳವರೆಗಿನ ಸಾಲ ಮನ್ನಾ ಮಾಡಿದರು ಎಂದು ವಿವರಿಸಿದರು.

    ರೈತರು ಒದಗಿಸುವ ಪ್ರತಿ ಲೀಟರ್ ಹಾಲಿಗೆ ಪ್ರೋತ್ಹಾಹ ಧನವನ್ನು ಐದು ರೂಗಳಿಗೆ ಹೆಚ್ಚಳ ಮಾಡಿದ್ದು ನಾವು.ಇದರ ಪರಿಣಾಮವಾಗಿ ರಾಜ್ಯದಲ್ಲಿಂದು ಪ್ರತಿ ನಿತ್ಯ ಎಂಭತ್ತು ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ ಎಂದರು.ಹೀಗೆ ಎಲ್ಲ ಮಾಡಿದ್ದು ನಾವು.ನೀವು ಮಾಡಿದ್ದೇನು?ಎಂದು ಪ್ರಶ್ನಿಸಿದಾಗ ಆಡಳಿತ ಪಕ್ಷದ ಶಾಸಕರು ಈ ಸರ್ಕಾರದ ಅರ್ಧ ಸಚಿವ ಸಂಪುಟ ನಿಮ್ಮದೇ ಎಂದರು.

   ಇದರಿಂದ ಕೋಪಗೊಂಡ ಸಿದ್ಧರಾಮಯ್ಯ,ಇಂತಹ ಮಾತುಗಳನ್ನಡುವುದಾದರೆ ನಾನು ಮಾತೇ ಆಡುವುದಿಲ್ಲ ಎಂದು ಕುಳಿತಾಗ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಸೇರಿದಂತೆ ಹಲವರು,ನಿಮ್ಮನ್ನು ಪ್ರಶಂಸಿಸಲು ಈ ಮಾತನಾಡಿದ್ದಾರೆ ಎಂದು ಹೇಳಿದರು.ಪುನ: ಮಾತನಾಡಿದ ಸಿದ್ಧರಾಮಯ್ಯ:ಆಡಳಿತದ ಎಲ್ಲ ರಂಗಗಳಲ್ಲಿ ಸರ್ಕಾರ ವಿಫಲವಾಗಿದೆ.ಶಾಲೆಗಳು ಸಮರ್ಪಕವಾಗಿಲ್ಲ.ಹುಣಸೂರಿನಂತಹ ಊರಿನಲ್ಲಿ ಎರಡೂವರೆ ಸಾವಿರ ಮಕ್ಕಳು ಶಾಲಾ ಕೊಠಡಿಯ ಹೊರಗೆ ಕುಳಿತು ಪಾಠ ಕಲಿಯುತ್ತಿದ್ದಾರೆ.ಇದೇ ಪರಿಸ್ಥಿತಿ ರಾಜ್ಯದ ಬಹುತೇಕ ಕಡೆ ಇದೆ ಎಂದರು.

    ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದ ಕೆಲವೇ ದಿನಗಳಲ್ಲಿ ರಾಜ್ಯದಲ್ಲಿ ಅತಿವೃಷ್ಟಿಯಿಂದ ಒಂದು ಲಕ್ಷ ಕೋಟಿ ರೂಪಾಯಿಗಳಷ್ಟು ಹಾನಿಯಾಯಿತು.ಆದರೆ ಪರಿಹಾರ ಕಾರ್ಯ ಇವತ್ತಿಗೂ ಸಮರ್ಪಕವಾಗಿ ನಡೆದಿಲ್ಲ ಎಂದು ಹೇಳಿದರು.ಇಲ್ಲಿ ಈ ಮಟ್ಟದ ಜಲಪ್ರಳಯ ಸಂಭವಿಸಿದರೆ ಈ ದೇಶದ ಪ್ರಧಾನಿ ಎರಡು ಸಾಂತ್ವನದ ಮಾತುಗಳನ್ನಾಡಲಿಲ್ಲ.ಹಣಕಾಸು ಸಚಿವರು ಬಂದು ಹೋದರೂ ಪರಿಹಾರ ನೀಡಲಿಲ್ಲ.

   ಎರಡು ಲಕ್ಷ ಅರವತ್ತು ಸಾವಿರಕ್ಕಿಂತ ಹೆಚ್ಚು ಮನೆಗಳು ಹಾನಿಗೀಡಾದರೂ ಸರ್ಕಾರದಿಂದ ಸೂಕ್ತ ಪರಿಹಾರ ದೊರಕಿಲ್ಲ.ರಾಜ್ಯಪಾಲರ ಭಾಷಣದಲ್ಲಿ ಈ ವಸ್ತುಸ್ಥಿತಿಯನ್ನು ಮರೆಮಾಚಿ ಕೇವಲ ಒಂದು ಲಕ್ಷ ಇಪತ್ನಾಲ್ಕು ಸಾವಿರ ಮನೆಗಳು ಹಾನಿಗೀಡಾಗಿವೆ ಎಂದಿದ್ದೀರಿ .ಅತಿವೃಷ್ಟಿಯಿಂದ ಕಂಗಾಲಾದ ಜನ ಇವತ್ತೂ ಸಂಕಷ್ಟದಲ್ಲಿದ್ದಾರೆ.ಆದರೆ ಪರಿಹಾರ ಕಲ್ಪಿಸಿಕೊಡಬೇಕಾದ ಸರ್ಕಾರದ ಮಂತ್ರಿಗಳನೇಕರು ಬೇರೆ ಕೆಲಸಗಳಲ್ಲಿ ತಲ್ಲೀನರಾಗಿದ್ದಾರೆ ಎಂದು ಆರೋಪಿಸಿದರು.

   ಅಭಿವೃದ್ಧಿಗೆ ಸಂಬಂಧಿಸಿದಂತೆ ಶಾಸಕರ ಕ್ಷೇತ್ರಗಳಿಗೆ ಅನುದಾನ ಬಿಡುಗಡೆ ಮಾಡದೆ ಮುಖ್ಯಮಂತ್ರಿಗಳು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ.ಅಧಿಕಾರಕ್ಕೆ ಬಂದ ಶುರುವಿನಲ್ಲಿ ಇವರು,ನಾನು ದ್ವೇಷದ ರಾಜಕಾರಣ ಮಾಡುವುದಿಲ್ಲ ಎನ್ನುತ್ತಿದ್ದರು.ಆದರೆ ಅಭಿವೃದ್ದಿಯ ವಿಷಯದಲ್ಲಿ ತಾರತಮ್ಯ ಮಾಡುತ್ತಿದ್ದೀರಲ್ಲ?ಇದು ದ್ವೇಷದ ರಾಜಕಾರಣವಲ್ಲವೇ?ಎಂದು ಪ್ರಶ್ನಿಸಿದರು.

   ಇವತ್ತು ನಮ್ಮ ಪಕ್ಸದವರು,ಜೆಡಿಎಸ್ ಪಕ್ಷದವರು ಅಂತಲ್ಲ,ಆಡಳಿತಾರೂಢ ಬಿಜೆಪಿ ಶಾಸಕರೂ ಈ ವಿಷಯದಲ್ಲಿ ಸಮಾಧಾನದಿಂದಿಲ್ಲ.ಎಲ್ಲ ಪಕ್ಷದ ಶಾಸಕರೂ ಅಸಮಾಧಾನಗೊಂಡಿದ್ದಾರೆ.ಇದನ್ನು ಸರಿ ಮಾಡಬೇಕು ಎಂದು ಒತ್ತಾಯಿಸಿದರು.ಈ ಹಂತದಲ್ಲಿ ವಿವಿಧ ಪಕ್ಷಗಳ ಶಾಸಕರ ಮೇಲೆದ್ದು ನಿಂತು,ತಮ್ಮ ಕ್ಷೇತ್ರವನ್ನು ಕಡೆಗಣಿಸಲಾಗಿದೆ.ಅಭಿವೃದ್ಧಿಯ ವಿಷಯದಲ್ಲಿ ನಮಗೆ ಸೂಕ್ತ ಅನುದಾನ ಬಿಡುಗಡೆಯಾಗುತ್ತಿಲ್ಲ ಎಂದಾಗ ಕೆಲ ಕಾಲ ಯಾರ ಮಾತು ಯಾರಿಗೂ ಕೇಳದ ಪರಿಸ್ಥಿತಿ ಉದ್ಭವವಾಯಿತು.

    ಶಾಸಕರ ಕ್ಷೇತ್ರಗಳಿಗೆ ನೀಡುತ್ತಿರುವ ಅನುದಾನದ ಬಗ್ಗೆ ವಿಶೇಷ ಚರ್ಚೆಯಾಗಬೇಕು ಎಂದು ಮೂರೂ ಪಕ್ಷಗಳ ಶಾಸಕರು ಈ ಹಂತದಲ್ಲಿ ಏರಿದ ಧ್ವನಿಯಲ್ಲಿ ಒತ್ತಾಯಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ ಹಿಂದೆ ಸಮ್ಮಿಶ್ರ ಸರ್ಕಾರವಿದ್ದಾಗ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಿ ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ಕಡಿಮೆ ಅನುದಾನ ಬಿಡುಗಡೆ ಮಾಡಲಾಗಿತ್ತು.ಆದರೂ ನಾವು ಈ ತಾರತಮ್ಯವನ್ನು ಸಹಿಸಿಕೊಂಡಿದ್ದೆವು ಎಂದರು.

    ಈಗ ಹಾಗೇನಾದರೂ ಆಗಿದ್ದರೆ ಅದನ್ನು ಸರಿಪಡಿಸಿಕೊಳ್ಳುತ್ತೇವೆ ಎಂದು ಯಡಿಯೂರಪ್ಪ ಅವರು ನುಡಿದಾಗ ಸದನದಲ್ಲಿ ಪುನ: ಗದ್ದಲ ಆರಂಭವಾಯಿತು.

   ಪುನ: ಮಾತನಾಡಿದ ಸಿದ್ಧರಾಮಯ್ಯ ಈ ಹಿಂದೆ ಯಾರಿಗೆ ವಿವಿಧ ಕಾಮಗಾರಿಗಳ ಟೆಂಡರ್ ಕೊಡಲಾಗಿತ್ತೋ?ಅವರಿಗೆ ಟೆಂಡರ್ ಮುಂದುವರಿಸಿ,ಇಲ್ಲದಿದ್ದರೆ ಕೆಲಸ ಕಾರ್ಯಗಳು ನಡೆಯದೆ ಸ್ಥಗಿತಗೊಂಡಿವೆ ಎಂದು ವಿವರಿಸಿದರು.ರೈತರ ಬೆಳೆಗಳಿಗೆ ಬೆಂಬಲ ಬೆಲೆ ನೀಡಿ ಖರೀದಿ ಮಾಡುವ ಸರ್ಕಾರದ ಕಾರ್ಯಕ್ರಮ ಸಮರ್ಪಕವಾಗಿ ಜಾರಿಯಾಗುತ್ತಿಲ್ಲ.ಇದರಿಂದಾಗಿ ರೈತರು ಕಷ್ಟಪಡುವಂತಾಗಿದೆ ಎಂದು ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link