ಪಾವಗಡ : ಅನಾನುಕೂಲ ಸ್ಥಳದಲ್ಲಿ ವಸತಿ ನಿಲಯ ಕಾಮಗಾರಿ

ಪಾವಗಡ : 

      ಪಟ್ಟಣದ ಹೊರ ವಲಯದಲ್ಲಿ ನಿರ್ಮಾಣವಾಗುತ್ತಿರುವ ಪ.ಜಾ ಮತ್ತು ಪ.ಪಂ ವಸತಿ ನಿಲಯದ ಕಾಮಗಾರಿಯನ್ನ ಕೂಡಲೇ ಸ್ಥಗಿತಗೊಳಿಸುವಂತೆ ಒತ್ತಾಯಿಸಿ ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಅವರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಬೆನ್ನಲೆ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪ್ರೇಮಾರವರು ಗುರುವಾರ ಸ್ಥಳ ಪರಿಶೀಲನೆ ನಡೆಸಿದರು.

      ಪಾವಗಡ ಪಟ್ಟಣದ ಹೊರ ವಲಯದಲ್ಲಿ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ 26 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿರುವ ವಸತಿ ನೀಲಯದ ಕಟ್ಟಡ ಪಟ್ಟಣದಿಂದ ಸುಮಾರು 5 ಕಿ.ಮೀ. ದೂರವಿದ್ದು, ವಿದ್ಯಾರ್ಥಿಗಳಿಗೆ ಶಾಲಾ-ಕಾಲೇಜುಗಳಿಗೆ ತೆರಳಲು ತುಂಬಾ ಸಮಸ್ಯೆಯಾಗುವುದಲ್ಲದೆ, ವಸತಿ ನಿಲಯದಿಂದ ಪ್ರತಿದಿನ ಪಟ್ಟಣಕ್ಕೆ ಬರಲು ಆಟೋ ಹಾಗೂ ಬಸ್ಸುಗಳಿಗೆ ಹಣ ಕೊಟ್ಟು ಬರಬೇಕಾಗಿದ್ದು, ಇದರಿಂದ ವಿದ್ಯಾರ್ಥಿಗಳಿಗೆ ಬಹಳ ತೊಂದರೆಯಾಗುತ್ತದೆ. ಸದರಿ ಸ್ಥಳವು ಅನಾನುಕೂಲ ಪ್ರದೇಶವಾಗಿರುವುದರಿಂದ ಕೂಡಲೇ ಕಾಮಗಾರಿಯನ್ನು ಸ್ಥಗಿತಗೊಳಿಸಿ ಪಟ್ಟಣದ ಸಮೀಪದಲ್ಲೇ ವಸತಿ ನಿಲಯ ನಿರ್ಮಾಣ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಗಿತ್ತು.

      ಇದರ ಬೆನ್ನಲೇ ಗುರುವಾರ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪ್ರೇಮಾರವರು ಪಾವಗಡಕ್ಕೆ ಆಗಮಿಸಿ ನಿರ್ಮಾಣವಾಗುತ್ತಿರುವ ಕಟ್ಟಡದ ಸ್ಥಳ ಪರಿಶೀಲನೆ ನಡೆಸಿದರು. ನಂತರ ಮಾಜಿ ಶಾಸಕರೊಂದಿಗೆ ಪಟ್ಟಣದ ರಾಜ್ಯ ಸಾರಿಗೆ ಸಂಸ್ಥೆಯ ಡಿಪೋ ಹಿಂಭಾಗದಲ್ಲಿ ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಸ್ಥಳವನ್ನು ಗುರುತಿಸಿದ ನಂತರ ಸರಕಾರದ ಮಟ್ಟದಲ್ಲಿ ಚರ್ಚೆ ನಡೆಸಿ ಸರಕಾರ ಮತ್ತು ಇಲಾಖೆ ಸೂಚಿಸಿದಂತೆ ನಿರ್ಮಾಣ ಹಂತದಲ್ಲಿರುವ ಕಟ್ಟಡ ಪೂರ್ಣಗೊಳಿಸುವ ಅಥವಾ ಬೇರೆ ಕಡೆ ನಿರ್ಮಾಣ ಮಾಡಬೇಕಾ ಎಂಬುದನ್ನು ಸರಕಾರ ತಿಳಿಸಿದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

      ಈ ಸಂದರ್ಭದಲ್ಲಿ ಜೆಡಿಎಸ್ ತಾ.ಅಧ್ಯಕ್ಷರಾದ ಬಲರಾಮರೆಡ್ಡಿ, ಅಲ್ಪಸಂಖ್ಯಾತ ಘಟಕದ ತಾ.ಅಧ್ಯಕ್ಷರಾದ ಯೂನಿಸ್, ಮನುಮಹೇಶ್, ಕಾವಲಗೆರೆ ರಾಮಾಂಜಿ, ವಕ್ತಾರರಾದ ಅಕ್ಕಲಪ್ಪನಾಯ್ಡು, ಗುಟ್ಟೆಹಳ್ಳಿಮಣಿ, ಗೋಪಾಲ್, ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.
 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link