ತುಮಕೂರು :
ವೃದ್ಧೆಯೊಬ್ಬರು ನಡೆದುಕೊಂಡು ಹೋಗುತ್ತಿದ್ದ ಸಮಯದಲ್ಲಿ ಆಕೆಯ ಕಣ್ಣಿಗೆ ಕಾರದ ಪುಡಿ ಎರಚಿ ಆಕೆಯ ಕೊರಳಿನಲ್ಲಿದ್ದ ಚಿನ್ನದ ಸರವನ್ನು ಕಳ್ಳರು ಕಿತ್ತುಕೊಂಡು ಬೈಕ್ನಲ್ಲಿ ಪರಾರಿಯಾಗಿರುವ ಘಟನೆ ತಿಪಟೂರು ತಾಲ್ಲೂಕಿನ ಹೊನ್ನವಳ್ಳಿ ಹೋಬಳಿಗೆ ಸೇರಿದ ಗೆದ್ದಲಹಳ್ಳಿ ಕೆರೆಯ ಏರಿ ಮೇಲೆ ಜರುಗಿದೆ.
ಚಂದ್ರಮ್ಮ (75) ಎಂಬುವರು ಕೆರೆಯ ಏರಿಮೇಲೆ ನಡೆದುಕೊಂಡು ಹೋಗುತ್ತಿದ್ದ ಸಮಯದಲ್ಲಿ ಬೈಕ್ನಲ್ಲಿ ಬಂದ ಇಬ್ಬರು ಕಳ್ಳರು ಆಕೆಯನ್ನು ಹಿಂಬಾಲಿಸಿದರು. ಇಬ್ಬರಲ್ಲಿ ಒಬ್ಬ ಬಂದು ಇಲ್ಲಿ ಚಂದನ್ ಎಂಬುವವರ ಮನೆ ಎಲ್ಲಿದೆ ಎಂದಾಗ ವೃದ್ಧೆ ಊರಿನಲ್ಲಿ ಹೋಗಿ ವಿಚಾರಿಸಿ ಎಂದರು. ತಕ್ಷಣವೇ ಆ ಯುವಕ ತನ್ನ ಕೈನಲ್ಲಿದ್ದ ಖಾರದ ಪುಡಿಯನ್ನು ವೃದ್ಧೆಯ ಕಣ್ಣಿಗೆ ಎರಚಿ, ಕೊರಳಿನಲ್ಲಿದ್ದ ಚಿನ್ನದ ಸರವನ್ನು ಕಸಿಯಲು ಯತ್ನಿಸಿದ. ಕೂಡಲೇ ವೃದ್ಧೆ ಸರವನ್ನು ಬಿಗಿಯಾಗಿ ಹಿಡಿದುಕೊಂಡು ಸಹಾಯಕ್ಕಾಗಿ ಕೂಗಿಕೊಂಡರು. ಈಕೆಯ ಕೂಗಾಟ ಕೇಳಿದ ಕಳ್ಳರು ಆಕೆಯ ಕೊರಳಿನಲ್ಲಿದ್ದ ಎರಡೆಳೆ ಚಿನ್ನದ ಸರದಲ್ಲಿ ಒಂದೆಳೆ ಚಿನ್ನದ ಸರವನ್ನು ಕಿತ್ತುಕೊಂಡು ಬೈಕ್ನಲ್ಲಿ ಪರಾರಿಯಾದರು.
ಸುಮಾರು 35 ಗ್ರಾಂ ತೂಕದ ಚಿನ್ನದ ಸರದ ಬೆಲೆ 32 ಸಾವಿರ ರೂ.ಗಳೆಂದು ಅಂದಾಜಿಸಲಾಗಿದೆ. ಈ ಬಗ್ಗೆ ಹೊನ್ನವಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
