ತುಮಕೂರು
ತುಮಕೂರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸ್ಥಾನದಿಂದ ಡಾ.ಶಾಲಿನಿ ರಜನೀಶ್ ಅವರನ್ನು ಹಠಾತ್ತನೆ ಬದಲಿಸಿ, ಆ ಜಾಗಕ್ಕೆ ಹಿರಿಯ ಐ.ಎ.ಎಸ್. ಅಧಿಕಾರಿ ಎಲ್.ಕೆ. ಅತೀಕ್ ಅವರನ್ನು ನೇಮಕಾತಿ ಮಾಡಿದ 24 ಗಂಟೆಗಳೊಳಗೆ ರಾಜ್ಯ ಸರ್ಕಾರ ಮತ್ತೆ ತನ್ನ ನಿಲುವು ಬದಲಿಸಿ, ಹಠಾತ್ತನೆ ಈ ವರ್ಗಾವಣೆಯನ್ನು ರದ್ದುಪಡಿಸಿದೆಯೆಂಬ ಸುದ್ದಿ ಇದೀಗ ತುಮಕೂರು ನಗರದ ಸಾರ್ವಜನಿಕ ಹಾಗೂ ರಾಜಕೀಯ ವಲಯದಲ್ಲಿ ಭಾರಿ ಸದ್ದು ಮಾಡಿದೆ. ಹಾಗೆಯೇ ಸಾಮಾಜಿಕ ಜಾಲತಾಣಗಳಲ್ಲೂ ಈ ಬೆಳವಣಿಗೆ ಟೀಕೆಗೊಳಪಡುತ್ತಿದೆ.
ಡಿ.30 ರಂದು ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿ, ಡಾ. ಶಾಲಿನಿ ರಜನೀಶ್ ಅವರನ್ನು ತುಮಕೂರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸ್ಥಾನದಿಂದ ಚಿಕ್ಕಮಗಳೂರು ಜಿಲ್ಲೆಗೆ ವರ್ಗಾಯಿಸಿತು. ತುಮಕೂರು ಜಿಲ್ಲೆಗೆ ಎಲ್.ಕೆ. ಅತೀಕ್ ಅವರನ್ನು ನೇಮಿಸಿತು. ಇದು ತುಮಕೂರು ನಗರದಲ್ಲಿ ಭಾರಿ ಸಂಚಲನ ಉಂಟುಮಾಡಿತು. ಮಹಾನಗರ ಪಾಲಿಕೆ ಮತ್ತು ಸ್ಮಾರ್ಟ್ಸಿಟಿ ಕಂಪನಿಯಲ್ಲಿ ತೀವ್ರ ಚರ್ಚೆಗೆ ಆಸ್ಪದವಾಯಿತು. ಮಾಧ್ಯಮಗಳಲ್ಲೂ ದೊಡ್ಡ ಸುದ್ದಿಯಾಯಿತು.
ಆದರೆ ಡಿ.31 ರಂದು ಬೆಳಗ್ಗೆ ಇದ್ದಕ್ಕಿದ್ದಂತೆ ಸರ್ಕಾರದ ನಿರ್ಧಾರ ಬದಲಾಗಿದೆಯೆಂಬ ಸುದ್ದಿ ಪಾಲಿಕೆ ಮತ್ತು ಸ್ಮಾರ್ಟ್ಸಿಟಿ ಕಂಪನಿಗೆ ಹರಡಿ, ಎಲ್ಲರೂ ಬೆರಗಾಗುವಂತಾಯಿತು. ಎಲ್.ಕೆ. ಅತೀಕ್ ಅವರ ನೇಮಕವನ್ನು ಸರ್ಕಾರ ಬದಲಿಸಿದ್ದು, ಮತ್ತೆ ಡಾ. ಶಾಲಿನಿ ರಜನೀಶ್ ಅವರೇ ಮುಂದುವರೆಯುವರೆಂಬ ಸಂಗತಿ ಹರಿದಾಡತೊಡಗಿತು. ಈ ರೀತಿ ಆಗಲು ರಾಜಕೀಯ ಪ್ರಭಾವದ ಜೊತೆಗೆ ಬೇರೆ ಬೇರೆ ಪ್ರಭಾವಗಳ ಕೈವಾಡ ಇದೆಯೆಂಬ ಪುಕಾರು ಪುಂಖಾನುಪುಂಖವಾಗಿ ಹರಡಿತು.
ಇಂತಿಂತಹ ರಾಜಕಾರಣಿಗಳು ಇದ್ದಾರೆಂಬುದೂ ಕಿವಿಯಿಂದ ಕಿವಿಗೆ ಕೇಳತೊಡಗಿತು. ಅನೇಕರ ಮುಖದಲ್ಲಿದ್ದ ಖುಷಿ ಮಾಯವಾಗಿ, ನಿರಾಶೆ ಆವರಿಸಿತು. ದಕ್ಷತೆಗೆ ಹೆಸರಾದ ಅತೀಕ್ ಅವರ ನೇಮಕ ದಿಢೀರನೆ ಬದಲಾಗಿದ್ದು ಏಕೆಂಬುದು ಅನೇಕರ ಅಚ್ಚರಿಯ ಪ್ರಶ್ನೆಯಾಗಿದೆ.
ಈಗ ಎಲ್ಲರೂ ಕೇಳುತ್ತಿರುವ ಪ್ರಶ್ನೆಯೇನೆಂದರೆ- ಕಳೆದ 8 ವರ್ಷಗಳಿಂದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾಗಿರುವ ಡಾ.ಶಾಲಿನಿ ರಜನೀಶ್ ಅವರೇ ಮತ್ತೆ ಮುಂದುವರೆಯುವರೇ? ಅಥವಾ ಬೇರೆ ಅಧಿಕಾರಿ ನಿಯುಕ್ತಿಗೊಳ್ಳುವರೇ? ಇವೆಲ್ಲ ಬೆಳವಣಿಗೆಗೆ ಕಾರಣವೇನೆಂಬುದನ್ನು ಜಿಲ್ಲಾ ಉಸ್ತುವಾರಿ ಸಚಿವರು, ಲೋಕಸಭಾ ಸದಸ್ಯರು, ಬಿಜೆಪಿ ಶಾಸಕರುಗಳು ಉತ್ತರಿಸುವರೇ?
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
