ತುಮಕೂರು:
ವಿಶೇಷ ವರದಿ :ಸಾ.ಚಿ.ರಾಜಕುಮಾರ
ಕೊಬರಿ ಧಾರಣೆ ಹಲವು ತಿಂಗಳಿನಿಂದ ಕುಸಿತದ ಹಾದಿಯಲ್ಲೇ ಇದ್ದು, ತೆಂಗು ಬೆಳೆಗಾರರಲ್ಲಿ ನಿರಾಸೆಯ ಕಾರ್ಮೋಡ ಆವರಿಸಿದೆ. ಜಿಲ್ಲೆಯ ಐದಾರು ತಾಲ್ಲೂಕುಗಳು ತೆಂಗಿಗೆ ಪ್ರಸಿದ್ಧಿಯಾಗಿದ್ದು, ಧಾರಣೆ ಕುಸಿತದಿಂದಾಗಿ ಕೊಬರಿ ಬೆಳೆಗಾರರೆಲ್ಲ ಕಂಗೆಟ್ಟು ಹೋಗಿದ್ದಾರೆ.
ಹಲವು ಪರಿಸ್ಥಿತಿಗಳು ಕಳೆದ 10 ತಿಂಗಳುಗಳಿಂದ ಧಾರಣೆಯನ್ನು ಪ್ರಪಾತಕ್ಕೆ ತಳ್ಳಿದ್ದು, ಇತ್ತೀಚಿನ ಕೊರೊನಾ ವೈರಸ್ ಮತ್ತೊಂದು ಸೇರ್ಪಡೆಯಾಗಿದೆ.
ಚೀನಾ ಸೇರಿದಂತೆ ಹಲವು ರಾಷ್ಟ್ರಗಳಿಗೆ ತಿಪಟೂರಿನ ಕೊಬರಿ ರಫ್ತಾಗುತ್ತಿತ್ತು. ಇಲ್ಲಿನ ನೈಸರ್ಗಿಕ ಕೊಬರಿ ಹಲವು ರಾಷ್ಟ್ರಗಳಿಗೆ ಅತ್ಯಂತ ಪ್ರಿಯವಾಗಿದ್ದು, ಈ ವಹಿವಾಟು ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ. ಆದರೆ ಇತ್ತೀಚಿನ ದಿನಗಳಲ್ಲಿ ರಫ್ತಿನ ಮೇಲೆ ಭಾರಿ ಹೊಡೆತ ಬಿದ್ದಿದ್ದು, ಇದೂ ಒಂದು ಕಾರಣ ಎನ್ನಲಾಗುತ್ತಿದೆ.
2018 ಹಾಗೂ 2019ರ ಆರಂಭದ ಕೆಲವು ತಿಂಗಳು ಕೊಬರಿ ಬೆಳೆಗಾರರಿಗೆ ಸುಗ್ಗಿಯ ದಿನಗಳಾಗಿದ್ದವು. 17,500 ರೂ.ಗಳವರೆಗೂ ಒಂದು ಕ್ವಿಂಟಾಲ್ ಕೊಬರಿ ಧಾರಣೆ ಸಿಗುತ್ತಿತ್ತು. ಆಗ ಬರಗಾಲದ ಸಮಯವಾದ್ದರಿಂದ ಹಾಗೂ ತೆಂಗಿನ ಮರಗಳನ್ನು ಉಳಿಸಿಕೊಳ್ಳುವುದೇ ಕಷ್ಟಕರವಾಗಿದ್ದ ಸಮಯದಲ್ಲಿ ಉತ್ತಮ ಬೆಲೆ ರೈತರ ಕೈ ಹಿಡಿದಿತ್ತು. ಕಳೆದ ವರ್ಷ ಉತ್ತಮ ಮಳೆಯಾದರೂ ಕ್ರಮೇಣ ಧಾರಣೆಯಲ್ಲಿ ಕುಸಿತ ಕಂಡು ರೈತನಲ್ಲಿ ಆತಂಕ ಮೂಡಿಸಿದೆ.
2019ರ ಮೇ ತಿಂಗಳಿನಿಂದ ಇಳಿಮುಖವಾಗತೊಡಗಿದ ಕೊಬರಿ ಧಾರಣೆ ಕ್ರಮೇಣ ಪ್ರತಿ ವಾರದ ಪ್ರತಿ ಟೆಂಡರ್ನಲ್ಲಿಯೂ 200 ರೂ.ಗಳಷ್ಟು ಕಡಿಮೆಯಾಗುತ್ತಾ ಇಳಿಕೆಯ ಹಾದಿ ತಲುಪಿತು. ಹೀಗಾಗಿ 17,500 ರೂ.ಗಳಿದ್ದ ಕೊಬರಿ ಧಾರಣೆ ಇಂದು 10,000 ರೂ.ಗಳ ಆಸುಪಾಸಿಗೆ ಬಂದು ನಿಂತಿದೆ. ಈ ವಾರ ಏರಿಕೆಯಾಗಬಹುದು, ಮುಂದಿನವಾರ ಧಾರಣೆ ಸಿಗಬಹುದು ಎಂಬ ನಿರೀಕ್ಷೆಯಲ್ಲಿಯೇ ತಿಂಗಳುಗಳನ್ನು ಕಳೆದ ರೈತರಲ್ಲಿ ಈಗ ನಿರಾಶಾ ಭಾವನೆಯೇ ಆವರಿಸಿದೆ. ಕರೊನಾ ವೈರಸ್ ವ್ಯಾಪಿಸಿದ ನಂತರವಂತೂ ಧಾರಣೆ ಏರಿಕೆಯಾಗುವ ಭರವಸೆ ಭಗ್ನವಾಗಿದೆ. ಎಲ್ಲ ಉತ್ಪನ್ನಗಳ ಮೇಲೆ ಹೊಡೆತ ಬಿದ್ದಂತೆ ಕೊಬರಿ ಮೇಲೆಯೂ ಇದರ ಹೊಡೆತ ಬಿದ್ದಿದೆ.
2019ರ ಆಗಸ್ಟ್ ತಿಂಗಳಿನಲ್ಲಿ ತಿಪಟೂರು ಎಪಿಎಂಸಿ ಹರಾಜಿನಲ್ಲಿ 12,500 ರೂ.ಗಳ ಧಾರಣೆ ಹರಾಜಿನಲ್ಲಿ ಕಂಡುಬಂದಿತ್ತು. ಅಲ್ಲಿಂದ ನಿರಂತರವಾಗಿ ಮತ್ತೆ ಮತ್ತೆ ಕುಸಿತ ಕಾಣುತ್ತಲೇ ಇದೆ. ದರ ಕುಸಿತವನ್ನು ಗಮನಿಸುತ್ತಿರುವ ರೈತರು ಆಗಸ್ಟ್ ತಿಂಗಳಿನಲ್ಲಿಯೇ ಹರಾಜಿಗೆ ಬಿಡಬಹುದಿತ್ತು, ಕೊನೆ ಪಕ್ಷ 12,500 ರೂ.ಗಳಾದರೂ ಸಿಗುತ್ತಿತ್ತು. ಈಗ ಕನಿಷ್ಠ ಬೆಲೆಗೆ ಮಾರಿಕೊಳ್ಳುವ ಸ್ಥಿತಿ ಬಂದಿದೆಯಲ್ಲಾ ಎಂದು ಮಮ್ಮಲ ಮರುಗುತ್ತಿದ್ದಾರೆ.
ಆ ಸಂದರ್ಭದಲ್ಲಿ ಧಾರಣೆ ಕುಸಿತಕ್ಕೆ ಹಲವು ಕಾರಣಗಳು ಗೋಚರಿಸಿದ್ದವು. ಉತ್ತರ ಕರ್ನಾಟಕದಲ್ಲಿ ಕಂಡು ಬಂದ ಪ್ರವಾಹವೂ ಒಂದಾಗಿತ್ತು. ಪ್ರವಾಹದ ಕಾರಣ ಇಲ್ಲಿನ ಕೊಬರಿ ದೂರದ ಊರುಗಳಿಗೆ ರವಾನೆಯಾಗುತ್ತಿಲ್ಲ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಇದಕ್ಕೂ ಮಿಗಿಲಾದ ಹಲವು ಕಾರಣಗಳು ಇದ್ದು, ಇವೆಲ್ಲ ಕೊಬರಿ ವರ್ತಕರಿಗಷ್ಟೇ ತಿಳಿಯುವ ವಿಷಯಗಳು. ಮುಖ್ಯವಾಗಿ ಕೊಬರಿ ಎಪಿಎಂಸಿ ಹೊರತಾದ ಜಾಗದಿಂದ ಅಕ್ರಮವಾಗಿ ರವಾನೆಯಾಗುವ ಸಂಶಯವಂತೂ ಇದ್ದೇ ಇದೆ.
ಅಕ್ರಮ ಸಾಗಾಣಿಕೆ ತಡೆಯಲು ವಿಫಲವಾಗಿರುವುದೇ ಇಂತಹ ಸಮಸ್ಯೆಗಳಿಗೆ ಕಾರಣ ಎಂದು ಹೇಳುವವರೂ ಇದ್ದಾರೆ. ಕೊಬರಿ ಕೊಳ್ಳುವ ಹೊರರಾಜ್ಯಗಳ ವ್ಯಾಪಾರಿಗಳು ಮಾರುಕಟ್ಟೆಗೆ ಬರುವುದಿಲ್ಲ. ಅವರು ಬೇಡಿಕೆ ಮುಂದಿಡುವುದಿಲ್ಲ. ಅಕ್ರಮವಾಗಿ ಕೊಬರಿ ಮಾತ್ರ ರವಾನೆಯಾಗುತ್ತಿದೆ. ಇಂತಹ ಕಳ್ಳಗಿಂಡಿಗಳ ವ್ಯವಹಾರವೇ ಹಲವು ಅವ್ಯವಸ್ಥೆಗಳಿಗೆ ಮತ್ತು ದರದಲ್ಲಿನ ಏರಿಳಿತಗಳಿಗೆ ಕಾರಣ ಎಂಬುದನ್ನು ಅದರೊಳಗಿನ ವ್ಯವಹಾರವನ್ನು ಬಲ್ಲವರು ಹೇಳುತ್ತಾರೆ.
ಬೆಂಬಲ ಬೆಲೆ
ಮಾರ್ಚ್ 13 ರಂದು ಕೇಂದ್ರ ಸರ್ಕಾರವು ಕೊಬರಿಯ ಕನಿಷ್ಠ ಬೆಂಬಲ ಬೆಲೆಯನ್ನು ಕ್ವಿಂಟಾಲ್ಗೆ 380 ರೂ.ಗಳಷ್ಟು ಏರಿಕೆ ಮಾಡಿದೆ. ಈವರೆಗೆ 9960 ರೂ.ಗಳ ಬೆಂಬಲ ಬೆಲೆ ಇದ್ದು, ಈಗ ಅದು 10,300ಕ್ಕೆ ಏರಿಕೆಯಾಗಿದೆ. ಆದರೆ ಈಗಾಗಲೇ 10 ಸಾವಿರ ರೂ.ಗಳಿಂದ 10,800 ರೂ.ಗಳವರೆಗೆ ಧಾರಣೆ ಇರುವುದರಿಂದ ಸರ್ಕಾರದ ಈ ನಿರ್ಧಾರ ಯಾವುದೇ ಪ್ರಯೋಜನಕ್ಕೆ ಬರಲಾರದು. ಮಾರುಕಟ್ಟೆಯಲ್ಲಿ ಧಾರಣೆ 10 ಸಾವಿರ ರೂ.ಗಳಿಗಿಂತ ಕಡಿಮೆ ಬೆಲೆಗೆ ಕುಸಿದಾಗ ಮಾತ್ರವೇ ಸರ್ಕಾರದ ಬೆಂಬಲ ಬೆಲೆ ರೈತರಿಗೆ ಪ್ರಯೋಜನಕ್ಕೆ ಬರಬಹುದು.
ವಾಸ್ತವವಾಗಿ 1 ಕ್ವಿಂಟಾಲ್ ಕೊಬರಿ ಉತ್ಪಾದನಾ ವೆಚ್ಚ 11,529 ರೂ.ಗಳಾಗುತ್ತದೆ ಎಂದು ಕೃಷಿ ಬೆಲೆ ಆಯೋಗವೇ ವರದಿ ನೀಡಿದೆ. ಇದನ್ನು ಗಮನಿಸಿದರೆ ರೈತರು ಈಗ ನಷ್ಟದಲ್ಲಿಯೇ ಇದ್ದಾರೆ. ವಾಸ್ತವ ವೆಚ್ಚವನ್ನೂ ಸರಿದೂಗಿಸಿಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ ಇದೆ. ಈ ಹಿನ್ನೆಲೆಯಲ್ಲಿಯೇ ಬೆಂಬಲ ಬೆಲೆಯನ್ನು ಹೆಚ್ಚಿಸಬೇಕು ಎಂಬ ಆಗ್ರಹ ಹಲವು ವರ್ಷಗಳಿಂದ ಕೇಳಿಬರುತ್ತಲೇ ಇದೆ.
ನುಸಿಪೀಡೆ, ಸತತ ಬರಗಾಲ, ಅಂತರ್ಜಲ ಕುಸಿತ, ಕೊಳವೆ ಬಾವಿ ವೈಫಲ್ಯ, ಕೀಟ ಬಾಧೆಗಳಿಂದ ಕಂಗಾಲಾಗಿರುವ ತೆಂಗು ಬೆಳೆಗಾರರಿಗೆ ಕನಿಷ್ಠ 15,000 ರೂ.ಗಳಾದರೂ ಸಿಗಲೇಬೇಕು ಎಂಬ ಪ್ರತಿಪಾದನೆಗಳು ಹಿಂದಿನಿಂದಲೂ ಕೇಳಿಬರುತ್ತಲೇ ಇವೆ.
ವೈಜ್ಞಾನಿಕವಾಗಿ ಬೆಂಬಲ ಬೆಲೆ ಘೋಷಣೆಯೇ ಸರಿಇಲ್ಲ 20,000 ರೂ.ಗಳ ಬೆಂಬಲ ಬೆಲೆಯನ್ನು ಕೇಂದ್ರ ಸರ್ಕಾರ ಘೋಷಿಸಬೇಕು. ಇದಕ್ಕಾಗಿ ರಾಜ್ಯ ಸರ್ಕಾರ ಕೇಂದ್ರದ ಮೇಲೆ ಒತ್ತಡ ತರಬೇಕು ಎಂಬ ಆಗ್ರಹವನ್ನು ರೈತ ಸಂಘಟನೆಗಳು ಮಾಡುತ್ತಲೇ ಬಂದಿವೆ.
ಇತ್ತೀಚೆಗೆ ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಅವರೂ ಸಹ ತುಮಕೂರು ನಗರದಲ್ಲಿ ಧರಣಿ ಕುಳಿತರು. ಕೊಬರಿಗೆ ಕನಿಷ್ಠ 20,000 ರೂ.ಗಳ ಬೆಂಬಲ ಬೆಲೆ ದೊರಕಿಸಿಕೊಡಬೇಕು ಎಂಬುದು ಅವರ ಆಗ್ರಹ. ಸಂಸದರಾಗಿದ್ದಾಗಲೂ ಅವರು ಹಕ್ಕೊತ್ತಾಯ ಮಾಡಿದ್ದರು. ಆದರೆ ಇಷ್ಟು ವರ್ಷಗಳ ಸುದೀರ್ಘ ಅವಧಿಯಲ್ಲಿ ಒತ್ತಾಯಗಳು, ಧರಣಿ, ಮನವಿಗಳು ಸಲ್ಲಿಕೆಯಾಗುತ್ತಿವೆಯೇ ಹೊರತು ರೈತರ ರಕ್ಷಣೆ ಮತ್ತು ಬೆಂಬಲ ಬೆಲೆ ಹೆಚ್ಚಳ ಸಾಧ್ಯವಾಗುತ್ತಿಲ್ಲ.
ಸರ್ಕಾರದ ಬೆಂಬಲ ಬೆಲೆ ಆಸುಪಾಸಿನಲ್ಲಿಯೇ ಮಾರುಕಟ್ಟೆಯಲ್ಲಿ ಧಾರಣೆ ನಿಗದಿಯಾಗುತ್ತದೆ ಎಂದರೆ ಏನರ್ಥ? ಇದರಿಂದ ಸರ್ಕಾರದ ಬೆಂಬಲ ಬೆಲೆಗೆ ಏನಾದರೂ ಅರ್ಥ ಇದೆಯೇ? ಈ ಪ್ರಶ್ನೆಯನ್ನು ಆಡಳಿತ ನಡೆಸುವವರ ಮೇಲೆ ಹೋರಾಟಗಾರರು ಮುಂದಿಡಬೇಕಿದೆ.
ರಾಜ್ಯದಲ್ಲಿಯೇ ತಿಪಟೂರು ಕೊಬರಿ ಅತ್ಯಂತ ಶ್ರೇಷ್ಠ ಮತ್ತು ಉತ್ಕøಷ್ಟ. ಜಿಲ್ಲೆ ಮಾತ್ರವಲ್ಲದೆ, ಹೊರಗಿನಿಂದಲೂ ತಿಪಟೂರಿಗೆ ಕೊಬರಿ ಆಗಮಿಸುತ್ತದೆ. ರಾಷ್ಟ್ರ ಮಟ್ಟದಲ್ಲೂ ಈ ಕೊಬರಿ ಪ್ರಸಿದ್ಧಿ ಪಡೆದಿದೆ. ಹೀಗಿರುವಾಗ ಈ ಭಾಗದಲ್ಲಿ ತೆಂಗು ಮತ್ತು ಅದರ ಉತ್ಪನ್ನಗಳನ್ನು ಪ್ರೋತ್ಸಾಹಿಸುವ, ತೆಂಗು ಬೆಳೆಗಾರರಿಗೆ ನೆರವಾಗುವಂತಹ ಯಾವುದೇ ಯೋಜನೆಗಳು ಜಾರಿಯಾಗದಿರುವುದು ದುರಂತವೇ ಸರಿ.
ತುಮಕೂರು ಜಿಲ್ಲೆಯಲ್ಲಿ 142710 ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತಿದೆ. ಇದರಲ್ಲಿ 49149 ಹೆಕ್ಟೇರ್ ತೆಂಗು ನಾಶವಾಗಿದೆ. ಅಂದರೆ ಶೇ.30 ರಷ್ಟು ತೆಂಗು ವೈಫಲ್ಯ ಹೊಂದಿದೆ. ಕಷ್ಟಪಟ್ಟು ಬೆಳೆಸಿದ ಮರಗಳನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲದಂತಹ ಸ್ಥಿತಿಗೆ ಕಳೆದ ವರ್ಷಗಳಲ್ಲಿ ರೈತ ಸಿಲುಕಿದ್ದನ್ನು ಮರೆಯಲು ಸಾಧ್ಯವೇ ಇಲ್ಲ. ಕೃಷಿಯ ಇತರೆ ಚಟುವಟಿಕೆಗಳು ನೆಲೆ ಕಚ್ಚುತ್ತಿರುವ ಈ ಸಂದರ್ಭದಲ್ಲಿ ಕಷ್ಟಪಟ್ಟು ತೆಂಗು ಉಳಿಸಿಕೊಳ್ಳುವ ರೈತರು ಕನಿಷ್ಠ ಬೆಂಬಲ ಬೆಲೆಯನ್ನು ನಿರೀಕ್ಷಿಸುತ್ತಿದ್ದಾರೆ.
ಸರ್ಕಾರಗಳು ಭಿಕ್ಷೆ ಎಂಬಂತೆ 100 ಅಥವಾ 200 ಹೀಗೆ ಬೆಂಬಲಬೆಲೆ ಹೆಚ್ಚಳ ಮಾಡುವ ಬದಲು ಕನಿಷ್ಠ ಮೊತ್ತವನ್ನು ನಿಗದಿಪಡಿಸಬೇಕು. ಆ ಮೊತ್ತ 15,000 ರೂ.ಗಳಿಗಿಂತ ಕಡಿಮೆ ಇರಲೇಬಾರದು. ಹೀಗಾದಾಗ ಮಾತ್ರ ಕೊಬರಿ ಧಾರಣೆಯ ಏರಿಳಿಕೆಯಲ್ಲಿ ಒಂದು ಸ್ಥಿರತೆ ಕಂಡುಕೊಳ್ಳಲು ಸಾಧ್ಯ.
ತೆಂಗು ಬೆಳೆಗಾರರೂ ಎಚ್ಚೆತ್ತುಕೊಳ್ಳಬೇಕು
ನಮ್ಮಲ್ಲಿ ಸಣ್ಣ ರೈತರಿರುವಂತೆ ದೊಡ್ಡ ರೈತರೂ ಇದ್ದಾರೆ. ತೆಂಗಿನ ಕಾಯಿ ಖರೀದಿಸಿ ಲಾಟ್ಮಾಡಿ ಕೊಬರಿ ಮಾರಾಟ ಮಾಡುವವರೂ ಇದ್ದಾರೆ. ಇಂತಹ ದೊಡ್ಡ ದೊಡ್ಡ ಕೊಬರಿ ಬೆಳೆಗಾರರು, ಸಂಗ್ರಹಕಾರರು ಉತ್ತಮ ಧಾರಣೆಯ ನಿರೀಕ್ಷೆ ಹೊಂದಿ ಕಾಯುತ್ತಿರುತ್ತಾರೆ. ಇದು ಬೆಲೆ ಏರಿಳಿತಕ್ಕೆ ಕಾರಣವಾಗುತ್ತದೆ. ಇತ್ತೀಚೆಗೆ ಕೊಬರಿ ಗುಣಮಟ್ಟದಲ್ಲಿ ಸ್ವಲ್ಪ ಮಟ್ಟಿನ ವ್ಯತ್ಯಾಸ ಕಂಡುಬರುತ್ತಿದೆ.
ಇದಕ್ಕೆ ಕಾರಣ ನೆಲ ಅಟ್ಟ ಮಾಡುತ್ತಿರುವುದು. ದೊಡ್ಡ ಲಾಟ್ಗಳನ್ನು ಮಾಡಿಕೊಂಡಿರುವವರು ಉತ್ತಮ ಬೆಲೆ ನಿರೀಕ್ಷೆಯಿಂದಿದ್ದಾಗ ಕೊಬರಿಯಲ್ಲಿ ಚಂದ್ರಿಕೆ ಕಾಣಿಸಿಕೊಳ್ಳುತ್ತದೆ. ಆದಕಾರಣ ವಿಳಂಬ ಮಾಡದೆ ನಿಗದಿತ ಅವಧಿಯಲ್ಲಿಯೇ ಕೊಬರಿಯನ್ನು ಮಾರುಕಟ್ಟೆಗೆ ತಲುಪಿಸಬೇಕು. ನಮ್ಮ ಜನ ಹೆಚ್ಚು ಹೆಚ್ಚು ಕೊಬರಿ ಎಣ್ಣೆಯನ್ನು ಉಪಯೋಗಿಸುವಂತಾ ಗಬೇಕು. ಮಾರುಕಟ್ಟೆಯಲ್ಲಿ ಸಿಗುತ್ತಿರುವ ಪ್ಯಾಕ್ಡ್ ಎಣ್ಣೆಗಳೆಲ್ಲ ಶುದ್ಧ ಎಂದು ಹೇಳಲಾಗದು. ಅದರಲ್ಲಿ ಬಹಳಷ್ಟು ಕಲಬೆರಕೆ ಮಿಶ್ರಣವಾಗುತ್ತಿದೆ. ಆದಕಾರಣ ಕೊಬರಿ ಎಣ್ಣೆಯನ್ನು ಬಳಸುವ ಮೂಲಕ ಪ್ರೋತ್ಸಾಹ ನೀಡಬೇಕು. ಇದು ಆರೋಗ್ಯವೂ ಕೂಡ.
ಬಿ.ಎಸ್.ದೇವರಾಜು, ಉಪಾಧ್ಯಕ್ಷರು, ಕರ್ನಾಟಕ ರಾಜ್ಯ ರೈತಸಂಘ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
